ತುರುವೇಕೆರೆ: -ಬಂಜೆತನ ತೊಲಗಿಸಲು ವೈದ್ಯಕೀಯ ಕ್ಷೇತ್ರದಲ್ಲಿ ಹಲವು ರೀತಿಯ ಚಿಕಿತ್ಸಾ ವಿಧಾನಗಳಿದ್ದು, ಮಕ್ಕಳಿಲ್ಲ ಎಂಬ ಕೊರಗಿಗೆ ಶಾಶ್ವತ ಮುಕ್ತಿ ಹಾಡಬಹುದಾಗಿದೆ ಎಂದು ವೈದ್ಯೆ ಡಾ.ಆಶಾಚೌದ್ರಿ ತಿಳಿಸಿದರು.
ಪಟ್ಟಣದ ಚೌದ್ರಿ ಕನ್ವೆನ್ಷನ್ ಹಾಲ್ ನಲ್ಲಿ ಇನ್ನರ್ ವೀಲ್ ಕ್ಲಬ್ ಆಫ್ ಸಂಕಲ್ಪ ಹಾಗೂ ಬೆಂಗಳೂರಿನ ನೋವಾ ಐವಿಎಫ್ ಫರ್ಟಿಲಿಟಿ ಸಂಸ್ಥೆಯ ಸಹಯೋಗದಲ್ಲಿ ಏರ್ಪಡಿಸಿದ್ದ ಉಚಿತ ಬಂಜೆತನ ಸಮಾಲೋಚನಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಪುರುಷ ಹಾಗೂ ಮಹಿಳೆಯರಲ್ಲಿನ ದೈಹಿಕ ಸಮಸ್ಯೆಗಳಿಂದ ಕೆಲವು ಬಾರಿ ನಿಧಾನವಾಗಿ ಮಕ್ಕಳಾಗುತ್ತವೆ. ಮಕ್ಕಳಾಗಬೇಕೆಂದು ಎರಡು ವರ್ಷಕ್ಕಿಂತ ಹೆಚ್ಚು ಸಮಯದಿಂದ ಪ್ರಯತ್ನಿಸುತ್ತಿದ್ದು, ಗರ್ಭಾಪಾತವಾಗುತ್ತಿದ್ದರೆ ಅಥವಾ ಪುರುಷರ ವೀರ್ಯಾಣು ಸಂಖ್ಯೆ ಕಡಿಮೆ ಇದ್ದು, ಸ್ತ್ರೀಯರ ಅಂಡಾಶಯಗಳ ಉತ್ಪಾದನೆ ಕೊರತೆ ಇದ್ದರೆ ಸಂತಾನೋತ್ಪತ್ತಿ ನಿಧಾನವಾಗಲಿದೆ. ಈ ಸಂಬಂಧ ಪತಿ ಪತ್ನಿಯರು ಒಟ್ಟಾಗಿ ವೈದ್ಯರನ್ನು ಸಂಪರ್ಕಿಸಿ ಐವಿಎಫ್ ಫರ್ಟಿಲಿಟಿ ಎಂಬ ವಿಧಾನದಿಂದ ಸಂತಾನ ಪಡೆಯಬಹದಾಗಿದೆ ಎಂದರು.
ವೈದ್ಯೆ ಡಾ.ಪಲ್ಲವಿ ಮಾತನಾಡಿ, ಬಂಜೆತನ ಅಥವಾ ಪತಿಪತ್ನಿಯರಲಿರುವ ದೈಹಿಕ ಸಮಸ್ಯೆಯ ಬಗ್ಗೆ ದಂಪತಿಗಳನ್ನು ಹೊರತುಪಡಿಸಿ ಬೇರೆಯವರಿಗೆ ವೈದ್ಯರಾದ ನಾವು ಮಾಹಿತಿ ನೀಡುವುದಿಲ್ಲ. ಸಮಸ್ಯೆಯನು ಗುಪ್ತವಾಗಿಟ್ಟು, ಬಂಜೆತನ ನಿವಾರಿಸುವಲ್ಲಿ ಉತ್ತಮ ಸಲಹೆ ಸೂಚನೆ ಚಿಕಿತ್ಸೆ ನೀಡುವುದು ನಮ್ಮ ವೈದ್ಯರ ಧರ್ಮವಾಗಿದೆ ಎಂದರು.
ಮಕ್ಕಳಾಗಲಿಲ್ಲ ಎಂದು ದೇವರ ಮೊರೆ ಹೋಗಿ ಪೂಜೆ ಸಲ್ಲಿಸುವುದು ನಿಮ್ಮ ಧಾರ್ಮಿಕ ಸಂಪ್ರದಾಯ, ಅದನ್ನು ನಾವು ಅಲ್ಲಗಳೆಯುವುದಿಲ್ಲ, ಆದರೆ ವಿಜ್ಞಾನ ಯುಗದಲ್ಲಿ ಮೂಢನಂಬಿಕೆಗೆ ಬಲಿಯಾಗದೆ ವೈದ್ಯರನ್ನು ಭೇಟಿ ಮಾಡಿ ಬಂಜೆತನ ಹೋಗಲಾಡಿಸಿ ಮಕ್ಕಳನ್ನು ಪಡೆದು ನೆಮ್ಮದಿಯ ಸಂಸಾರ ನಡೆಸುವಂತಾಗಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ವೈದ್ಯರಾದ ಡಾ.ಚೌದ್ರಿ ನಾಗೇಶ್, ಇನ್ನರ್ ವೀಲ್ ಕ್ಲಬ್ ಆಫ್ ಸಂಕಲ್ಪದ ಅಧ್ಯಕ್ಷೆ ನೇತ್ರಾಸಿದ್ದಲಿಂಗಸ್ವಾಮಿ, ಕಾರ್ಯದರ್ಶಿ ಆನಂದಜಲ, ಸಂಸ್ಥಾಪಕ ಅಧ್ಯಕ್ಷೆ ಗೀತಾಸುರೇಶ್, ರೋಟರಿ ಅಧ್ಯಕ್ಷ ದೇವರಾಜ್, ಪಪಂ ಸದಸ್ಯ ಮಧು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್