ಗೋಕಾಕ : ರಾಜ್ಯಾದ್ಯಂತ ನರೇಗಾ ಯೋಜನೆಯ 2025-26 ನೇ ಸಾಲಿಗೆ ಕಾರ್ಮಿಕ ಆಯವ್ಯಯ ಸಿದ್ದಪಡಿಸುವ ಸಲುವಾಗಿ ಕ್ರಿಯಾ ಯೋಜನೆಯನ್ನು ಒಂದು ತಿಂಗಳದಲ್ಲಿ ಗ್ರಾಮಸ್ಥರ ಸಮ್ಮುಖದಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗವುದು ಎಂದು ತಾ ಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಪರಶುರಾಮ ಘಸ್ತೆ ಹೇಳಿದರು.
ಅವರು ಸೋಮವಾರ ನಗರದ ತಾಲೂಕ ಪಂಚಾಯತ ಆವರಣದಲ್ಲಿ ನರೇಗಾ ಯೋಜನೆಯಡಿಯ “ಉದ್ಯೋಗ ಖಾತರಿ ನಡಿಗೆ ಸಬಲತೆಯೆಡೆಗೆ” ಅಭಿಯಾನದ ರಥಕ್ಕೆ ಹಸಿರು ನಿಶಾನೆ ತೋರುವ ಮೂಲಕ ನೀಡಿ ಮಾತನಾಡಿದ ಅವರು ಸನ್. 2025-26 ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ “ಉದ್ಯೋಗ ಖಾತರಿ ನಡಿಗೆ ಸಬಲತೆಯೆಡೆಗೆ” ಅಭಿಯಾನದಲ್ಲಿ ರೈತರಿಗೆ ಅನುಕೂಲವಾಗುವಂತಹ ಕಾಮಗಾರಿಗಳನ್ನು ಒಳಗೊಂಡ ಕ್ರಿಯಾ ಯೋಜನೆ ಸಿದ್ದ ಪಡಿಸಲಾಗುತ್ತಿದೆ. ಕ್ರಿಯಾ ಯೋಜನೆ ತಯಾರಿಕೆಗೆ ರೈತರು ತಮಗೆ ಅವಶ್ಯಕವಿರುವ ಕಾಮಗಾರಿಳ ಬೇಡಿಕೆ ಸಲ್ಲಿಸಬೇಕು ಮತ್ತು ಗ್ರಾಮ ಸಭೆಗಳಲ್ಲಿ ಭಾಗವಹಿಸಿ ಗ್ರಾಮೀಣ ಭಾಗದ ಉದ್ಯೋಗ ಚೀಟಿ ಹೊಂದಿದ ಪ್ರತಿ ಕಟುಂಬಕ್ಕೆ ವರ್ಷಕ್ಕೆ 100 ದಿನಗಳ ಉದ್ಯೋಗ ನೀಡಲಾಗುವುದು. ಒಂದು ಕುಟುಂಬವು ಜೀವಿತಾವಧಿಯಲ್ಲಿ ಗರಿಷ್ಠ ರೂ. 5.00 ಲಕ್ಷದವರೆಗೆ ಲಾಭಪಡೆಯಬಹುದು. ಆದ್ದರಿಂದ ರೈತರು ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳ ಬೇಡಿಕೆಯನ್ನು ಪಂಚಾಯತಿಯಲ್ಲಿ ಸಲ್ಲಿಸಬಹುದು. ರೂ. 349/- ಕೂಲಿ ಇದ್ದು, ಕೂಲಿ ಕಾರ್ಮಿಕರು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಈ ಉದ್ಯೋಗ ವಾಹಿನಿ ರಥವು ತಾಲೂಕಿನ 33 ಗ್ರಾಮ ಪಂಚಾಯತಿಗಳಲ್ಲಿ ಸಂಚರಿಸುವ ಮೂಲಕ ಯೋಜನೆಯ ಮಾಹಿತಿಯನ್ನು ಜನರಿಗೆ ತಲುಪಿಸುವ ಕಾರ್ಯ ನಡೆಯುತ್ತದೆ.
ಸಹಾಯಕ ನಿರ್ದೇಶಕರು (ಗ್ರಾ.ಉ), ವಿನಯಕುಮಾರ ಎಸ್ ಮಾತನಾಡಿ, ನರೇಗಾ ಯೋಜನೆಯಲ್ಲಿ ಗ್ರಾಮ ಸಭೆಗಳ ಮೂಲಕ ಕ್ರಿಯಾ ಯೋಜನೆಯನ್ನು ಸಿದ್ದಪಡಿಸಿಕೊಳ್ಳಲಾಗುತ್ತದೆ. ತಾಲೂಕಿನ ಎಲ್ಲಾ ನರೇಗಾ ಕಾಯಕ ಬಂಧು (ಮೇಟ್)ಗಳು ಹಾಗೂ ಕೂಲಿಕಾರರು ಬೇಡಿಕೆಗಳನ್ನು ಇ-ಡಿಮ್ಯಾಂಡ ಮೂಲಕ ಹಾಕುವ ಸಲುವಾಗಿ ಕ್ಯೂ-ಆರ್ ಕೋಡನ್ನು ಬಳಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದು. ನರೇಗಾ ಯೋಜನೆಯ ಕುರಿತು ವ್ಯಾಪಕವಾದ ಪ್ರಚಾರವನ್ನು ಮಾಡುವ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಕೆಲಸಕ್ಕೆ ಬರುವಂತೆ ಜನಸಾಮಾನ್ಯರಿಗೆ ತಿಳಿಸಲಾಗುವುದು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕರು (ಗ್ರಾ.ಉ), ವಿನಯಕುಮಾರ ಎಸ್ ತಾಪಂ ವ್ಯವಸ್ಥಾಪಕ ಈರಪ್ಪ ಹೊಸಮನಿ, ಸಹಾಯಕ ಲೆಕ್ಕಾಧಿಕಾರಿ ಲಕ್ಷ್ಮೀ ಬಂಡಾರಿ, ತಾಪಂ ತಾಂತ್ರಿಕ ಸಂಯೋಜಕ ಶಬ್ಬೀರ ಗಡ್ಡೇಕರ, ಐಇಸಿ ಸಂಯೋಜಕ ಶಂಕರ ಗುಜನಟ್ಟಿ, ಎಂಐಎಸ್ ಸಂಯೋಜಕ ರಾಹುಲ್ ಚೌಗಲಾ, ಆಡಳಿತ ಸಹಾಯಕಿ ಜ್ಯೋತಿ ಜವಳಿ, ತಾಪಂ ಸಿಬ್ಬಂದಿಗಳು, ಇನ್ನಿತರರು ಉಪಸ್ಥಿತರಿದ್ದರು.