ಪ್ರತಿವರ್ಷದಂತೆ ಈ ವರ್ಷವೂ ದಸರಾ ಆಚರಿಸುವಂತೆ ಆಗ್ರಹ
ಚಾಮರಾಜನಗರ: ಜಿಲ್ಲೆಯ ಸಂಸದರು, ಜಿಲ್ಲಾ ಉಸ್ತವಾರಿ ಸಚಿವರು ಹಾಗೂ ಶಾಸಕರ ನಿರ್ಲಕ್ಷ್ಯದಿಂದ ರಾಜ್ಯ ಸರ್ಕಾರ ಚಾಮರಾಜನಗರ ದಸರಾ ಆಚರಣೆ ಮಾಡುತ್ತಿಲ್ಲ ಎಂದು ಚಾಮರಾಜನಗರ ಜಿಲ್ಲಾ ಯುವ ಕಲಾವಿದರ ಬಳಗದ ಸದಸ್ಯ ಶಿವಶಂಕರ್ ಎನ್.ಚಟ್ಟು ಆರೋಪಿಸಿದರು.
ರಾಜ್ಯ ಸರ್ಕಾರ 2007 ರಿಂದ ಚಾಮರಾಜನಗರದಲ್ಲಿ ಗ್ರಾಮೀಣ ದಸರಾ ಎಂಬ ಹೆಸರಿನಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿತ್ತು. 2013 ರಿಂದ ಚಾಮರಾಜನಗರ ದಸರಾ ಎಂಬ ಹೆಸರಿನಿಂದಲೇ ದಸರಾ ಉತ್ಸವಗಳನ್ನು ಆಯೋಜನೆ ಮಾಡಿಕೊಂಡು ಬಂದಿದೆ
ಆದರೆ ಸೆ.20 ರಿಂದ ಅ.2 ರವರೆಗೆ ನಡೆಯಲಿರುವ ದಸರಾ ಆಚರಣೆಯನ್ನು ಚಾಮರಾಜನಗರದಲ್ಲಿ ನಡೆಸುವುದು ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿರುವುದು. ಜಿಲ್ಲೆಯ ಸಂಸದರು, ಜಿಲ್ಲಾ ಉಸ್ತವಾರಿ ಸಚಿವರು ಹಾಗೂ ಶಾಸಕರ ಇಚ್ಛಾಶಕ್ತಿ ಕೊರತೆಯನ್ನು ತೋರಿಸುತ್ತದೆ. ಒಂದು ವೇಳೆ ಚಾಮರಾಜನಗರ ದಸರಾ ಆಚರಣೆ ಮಾಡದಿದ್ದರೇ, ಜನಪ್ರತಿನಿಧಿಗಳಿಗೆ ಇದು ಕಪ್ಪುಚುಕ್ಕಿಯಾಗಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೋವಿಡ್ ಬಳಿಕ ಕಲಾವಿದರಿಗೆ ಸೂಕ್ತ ರೀತಿಯ ಕಾರ್ಯಕ್ರಮವಾಗಲಿ, ವೇದಿಕೆಗಳಾಗಲಿ ಸಿಗುತ್ತಿಲ್ಲ.
ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಲಾವಿದರು ಇದ್ದು, ಅವರೆಲ್ಲರೂ ಮೈಸೂರಿಗೆ ಹೋಗಲು ಸಾಧ್ಯವಿಲ್ಲ. ಅದಲ್ಲದೇ ಜಿಲ್ಲೆಯ ಸಾರ್ವಜನಿಕರು ಕೂಡ ಮೈಸೂರಿಗೆ ಬಂದು ದಸರಾ ವೈಭವವನ್ನು ವೀಕ್ಷಣೆ ಮಾಡಲು ಸಾಧ್ಯವಿಲ್ಲ. ಆಗಾಗಿ ಈಗಲಾದರೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಚಾಮರಾಜನಗರ ದಸರಾ ಆಚರಣೆ ಮಾಡಬೇಕು
ಇಲ್ಲವಾದರೇ ಮುಂದಿನ ದಿನಗಳಲ್ಲಿ ಕಲಾವಿದರೆಲ್ಲರೂ ಸೇರಿ ಜನಪ್ರತಿನಿಧಿಗಳಿಗೆ ತಕ್ಕಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ರಂಗಭೂಮಿ ಕಲಾವಿದ ದಡದಹಳ್ಳಿ ರಮೇಶ್, ರಮೇಶ್ ಪಾಪಯ್ಯ, ಸುಶೀಲಾ ರಾಮಸಮುದ್ರ, ಜಾನಪದ ಗಾಯಕ ಕೃಷ್ಣಮೂರ್ತಿ ಚಂಗಚಹಳ್ಳಿ, ಸ್ವಾಮಿ ಹೊಂಗನೂರು ಹಾಜರಿದ್ದರು.
ಜಿಲ್ಲೆಯ ಎಲ್ಲಾ ಕಲಾವಿದರು ಮೈಸೂರಿಗೆ ಹೋಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಾಧ್ಯವಿಲ್ಲ. ಆಗಾಗಿ ಜಿಲ್ಲೆಯ ಸಂಸದರು, ಶಾಸಕರು ಕಲಾವಿದರ ಸಂಕಷ್ಟವನ್ನು ಅರ್ಥಮಾಡಿಕೊಂಡು
ಚಾಮರಾಜನಗರ ದಸರಾ ಆಚರಣೆ ಮಾಡಬೇಕು. ಈ ಮೂಲಕ ಹಿರಿಯ ಕಲಾವಿದರಿಗೆ ಗೌರವ ಮತ್ತು ಯುವ ಕಲಾವಿದರಿಗೆ ಪ್ರೋತ್ಸಾಹವನ್ನು ನೀಡಬೇಕು.ಅವತಾರ್ ಪ್ರವೀಣ್, ನೃತ್ಯ ತರಬೇತುದಾರ
ವರದಿ: ಸ್ವಾಮಿ ಬಳೇಪೇಟೆ




