ಕೊಪ್ಪಳ: ಬಿಸಿಲನಾಡು ಕೊಪ್ಪಳ ಜಿಲ್ಲೆಯಾದ್ಯಂತ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ 42 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಈ ಸಮಯದಲ್ಲಿ ಅಂಗನವಾಡಿಗೆ ಬಂದ ಮಕ್ಕಳು ಬಿಸಿಲಿನ ತಾಪಮಾನಕ್ಕೆ ಬಸವಳಿಯುತ್ತಿದ್ದಾರೆ. ಹೀಗಾಗಿ ಅಂಗನವಾಡಿಯ ಸಮಯ ಬದಲಾವಣೆಗೆ ಪಾಲಕರು ಒತ್ತಾಯಿಸಿದ್ದಾರೆ.
600 ಅಂಗನವಾಡಿಗಳಿಗೆ ಸ್ವಂತ ಕಟ್ಟಡವಿಲ್ಲ: ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 1,950 ಅಂಗನವಾಡಿಗಳಿವೆ. ಅವುಗಳಲ್ಲಿ ಸುಮಾರು 600 ಅಂಗನವಾಡಿಗಳಿಗೆ ಸ್ವಂತ ಕಟ್ಟಡವಿಲ್ಲ. ಬಹುತೇಕ ಅಂಗನವಾಡಿಗಳು ಬಾಡಿಗೆ ಕಟ್ಟಡ, ತಗಡಿನ ಶೆಡ್ಡು, ದೇವಸ್ಥಾನಗಳ ಆವರಣದಲ್ಲಿ ನಡೆಯುತ್ತಿವೆ. ಅಂಗನವಾಡಿಗೆ ಬರುವ ಮಕ್ಕಳ ಸಂಖ್ಯೆಯೂ ಕಡಿಮೆಯಾಗಿದೆ. ಮಧ್ಯಾಹ್ನದ ವೇಳೆಗೆ ಬಿಸಿಲಿನ ಜಳ ಹೆಚ್ಚಳದಿಂದ ಪಾಲಕರೇ ಬಂದು ಅಂಗನವಾಡಿಗಳಿಂದ ಮಕ್ಕಳನ್ನು ಕರೆದುಕೊಂಡು ಹೋಗುತ್ತಾರೆ. ಅದಕ್ಕಾಗಿ ಅಂಗನವಾಡಿಗಳ ಸಮಯ ಬದಲಾವಣೆ ಮಾಡಬೇಕು ಎಂದು ಪಾಲಕರು ಆಗ್ರಹಿಸಿದ್ದಾರೆ.
“ಅಂಗನವಾಡಿಗಳಿಗೆ ಮಕ್ಕಳು ಸರಿಯಾಗಿ ಬರುತ್ತಿಲ್ಲ. ಶಾಲಾ ಪೂರ್ವ ಶಿಕ್ಷಣವನ್ನು 9.30 ರಿಂದ 1.30 ರವರೆಗೂ ನೀಡಲಾಗುತ್ತದೆ. ಮುಂದಿನ 4 ಗಂಟೆಯವರೆಗೂ ಮಕ್ಕಳನ್ನು ಅಂಗನವಾಡಿಯಲ್ಲಿ ಮಲಗಿಸಬೇಕು. ಈ ಅವಧಿಯಲ್ಲಿ ಮಕ್ಕಳನ್ನು ಮಾತ್ರ ಅವರ ಮನೆಗೆ ಕಳುಹಿಸಲು ಅವಕಾಶ ನೀಡಿ” ಎಂದು ಅಂಗನವಾಡಿ ಕಾರ್ಯಕರ್ತೆ ಮುಮ್ತಾಜ್ ಬೇಗಂ ಹೇಳುತ್ತಿದ್ದಾರೆ.
ಈ ಬಗ್ಗೆ ಜಿಲ್ಲಾಧಿಕಾರಿಗಳನ್ನು ಕೇಳಿದರೆ, “ಅಂಗನವಾಡಿಗೆ ವಿವಿಧ ಯೋಜನೆಗಳಿವೆ. ನಮ್ಮ ಅಂಗನವಾಡಿಗಳು ಸರಿಯಾಗಿವೆ. ಅವಧಿ ಬದಲಾವಣೆ ಮಾಡುವುದು ಸರಕಾರಕ್ಕೆ ಬಿಟ್ಟಿದ್ದು. ಆದರೆ ಕೆಲವು ಪಾಲಕರು ತಮ್ಮ ಮಕ್ಕಳು ಅಂಗನವಾಡಿಯಲ್ಲೇ ಇರಲಿ ಎನ್ನುತ್ತಾರೆ. ಹೀಗಾಗಿ ಸದ್ಯ ನಾವೇನು ಕ್ರಮ ಕೈಗೊಳ್ಳಲು ಆಗುವುದಿಲ್ಲ” ಎಂದು ಉತ್ತರ ನೀಡುತ್ತಿದ್ದಾರೆ.
“ಬೇಸಿಗೆ ಅವಧಿಯಲ್ಲಿ ಸರಕಾರಿ ಕಚೇರಿಗಳ ಅವಧಿಯ ಸಮಯ ಬದಲಾವಣೆಯಾಗುತ್ತಿದೆ. ಈ ಸಮಯದಲ್ಲಿ ಮಕ್ಕಳ ಆರೋಗ್ಯದ ದೃಷ್ಠಿಯಿಂದ ಅಂಗನವಾಡಿಗಳ ಸಮಯ ಬದಲಾವಣೆ ಮಾಡುವುದು ಅವಶ್ಯವಾಗಿದೆ” ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ