ಸಿರುಗುಪ್ಪ : ತಾಲೂಕಿನಾದ್ಯಂತ ಮುಸ್ಲೀಮ್ ಬಾಂಧವರಿಂದ ಶುಕ್ರವಾರದಂದು ಈದ್ ಮಿಲಾದ್ ಹಬ್ಬದ ಸಂಭ್ರಮಾಚರಣೆ ಕಂಡುಬಂದಿತು.
ನಗರದ ರಾಜಬೀದಿಯಲ್ಲಿ ಸಾಯಂಕಾಲ ಟಿಪ್ಪು ವೃತ್ತದಿಂದ ಆರಂಭದ ಮೆರವಣಿಗೆಯು ರಾಜಬೀದಿಗಳಲ್ಲಿ ನಂತರ ಮಸೀದಿಗಳಿಗೆ ವಾಪಸ್ಸು ಆಗಮಿಸಿ ಸಮಾಪ್ತಿಗೊಂಡಿತು.
ಅದ್ದೂರಿಯಾಗಿ ನಡೆದ ಮೆರವಣಿಗೆಯಲ್ಲಿ ವಿವಿಧ ಮಸೀದಿಗಳ ಕಮಿಟಿಯ ಪದಾಧಿಕಾರಿಗಳ ನೇತೃತ್ವದಲ್ಲಿ ಮೆಕ್ಕಾ, ಮದೀನಾ, ಕುತ್ಬ್ ಮಿನಾರ್ ಇಲ್ಲಿನ ಮಸೀದಿಗಳ ಆಕೃತಿಗಳು ಸೇರಿದಂತೆ ಇನ್ನಿತರ ಆಕೃತಿಗಳ ಅಲಂಕಾರದ ಪ್ರದರ್ಶನ, ವಿವಿಧ ವಾಹನಗಳಲ್ಲಿ ನೂತನ ವಸ್ತ್ರ ತೊಟ್ಟ ಚಿಣ್ಣರು ನೋಡುಗರನ್ನು ಆಕರ್ಷಿಸಿದರು.
ಹಿರಿಯರು ಪ್ರವಾದಿ ಮಹಮದ್ ಪೈಗಂಬರರ ಸಂದೇಶ ಸಾರುವ ಹಾಡುಗಳನ್ನು ಹಾಡುತ್ತಾ ಬಂದರು. ಹಬ್ಬದ ಸಂಭ್ರಮಾಚರಣೆಯನ್ನು ವೀಕ್ಷಿಸಲು ರಸ್ತೆಯ ಇಕ್ಕೆಲಗಳಲ್ಲಿ ಮಹಿಳೆಯರು ನೆರೆದಿದ್ದರು.
ಇದೇ ವೇಳೆ ಬಾಲ ಕಾರ್ಮಿಕ ಪದ್ದತಿಯನ್ನು ವಿರೋಧಿಸಿ ದುಡಿಮೆ ಬೇಡ ಶಿಕ್ಷಣ ಬೇಕು, ರಕ್ತದಾನ ಮಹಾದಾನ ಎಂಬ ಸಂದೇಶದ ಭಿತ್ತಿಪತ್ರಗಳನ್ನು ಪ್ರದರ್ಶಿಸಲಾಯಿತು.
ಯುವಕರು ಧ್ವನಿವರ್ಧಕ ಹಾಡುಗಳಿಗೆ ನೃತ್ಯಗೈದು, ಬಾವುಟಗಳನ್ನು ತಿರುಗಿಸುತ್ತಾ ಸಂಭ್ರಮಿಸಿದರು.
ಮದರಸಾದ ಮಕ್ಕಳು ಒಂದೇ ಸಮವಸ್ತ್ರವನ್ನು ತೊಟ್ಟು ಸಾಲಾಗಿ ಹೋಗುತ್ತಾ ಇಸ್ಲಾಂ ಧರ್ಮದ ತಿರುಳನ್ನು ತಿಳಿಸುತ್ತಾ ನೆರದಿದ್ದವರ ಗಮನ ಸೆಳೆದರು.
ಮೆರವಣಿಗೆಯ ನಿಮಿತ್ತ ಅಲ್ಲಲ್ಲಿ ನೀರು ಇನ್ನಿತರ ಪಾನೀಯಗಳನ್ನು ವಿತರಣೆ ಮಾಡಲಾಯಿತು.
ಮೆರವಣಿಗೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಸ್.ಪಿ ಡಾ.ಶೋಭಾರಾಣಿ.ವಿ.ಜೆ ಅವರ ಮಾರ್ಗದರ್ಶನದಂತೆ ಜಿಲ್ಲಾ ಪೋಲೀಸ್ ಇಲಾಖೆಯಿಂದ ಮುಂಜಾಗ್ರತೆಯಾಗಿ ಭದ್ರತೆಯ ವಹಿಸಲಾಗಿತ್ತು.
ವರದಿ : ಶ್ರೀನಿವಾಸ ನಾಯ್ಕ




