ಸಿರುಗುಪ್ಪ: ಗೌರಿ ಪುಟ್ಟಿಯನ್ನು ಹೊತ್ತು ಮನೆ ಮನೆಗೆ ತೆರಳಿ ಹರಸುವ ಗೌರಮ್ಮನ ಮಕ್ಕಳಿಂದ ಜಾನಪದ ಸಾಹಿತ್ಯ ಜೀವಂತವಾಗಿದೆಂದು ಹೇಳಬಹುದಾಗಿದೆ. ಸಿರುಗುಪ್ಪ ನಗರದ ಪಾರ್ವತಿ ನಗರದಲ್ಲಿ ಹಾಡುಗಳು ಹಾಡುತ್ತಾ ಹರಸುವ ದೃಶ್ಯ ಕಂಡುಬಂದಿತು.

ಅತ್ಯಾಧುನಿಕ ಯುಗದಲ್ಲೂ ಪಾಶ್ಚಾತ್ಯೀಕರಣ ಸಂಸ್ಕೃತಿಯ ಮೊರೆ ಹೋಗಿರುವ ನಗರ ಭಾಗದಲ್ಲೂ ಅಚ್ಚಳಿಯದೇ ಉಳಿದಿದ್ದು, ಇವರನ್ನು ಜನಪದ ಸಾಹಿತ್ಯದ ಖಣಿಯೆಂದು ಕರೆಯಬಹುದಾಗಿದೆ.
ಯಾವುದೇ ಅಕ್ಷರಭ್ಯಾಸವಿಲ್ಲದೇ ಒಬ್ಬರ ಬಾಯಿಂದ ಮತ್ತೊಬ್ಬರು ಕಂಠಪಾಠದ ಮೂಲಕ ಕಲಿಯುವ ಗ್ರಾಮೀಣ ಭಾಗದ ಸೊಗಡಿನ ಜಾನಪದ ಸಂಸ್ಕೃತಿಯ ಕಲೆಯು ಜಾನಪದ ಗೀತೆಯಲ್ಲಿ ಶಿವ ಮತ್ತು ಗೌರಿಯನ್ನು ಕುರಿತಾದ ಸಂಸಾರಿಕ ಹಾಡುಗಳು ನೆರೆದವರನ್ನು ನಿಬ್ಬೆರಗಾಗಿಸಿದವು.

ವರ್ಷಕೊಮ್ಮೆ ಗೌರಿ ಹಬ್ಬದ ಮುಂಚಿತ ಹದಿನೈದು ದಿನಗಳ ಕಾಲ ನಗರದ ಭಾಗದಲ್ಲಿನ ಎಲ್ಲಾ ಮನೆಗಳಿಗೆ ತೆರಳಿ ಕುಟುಂಬದ ಸದಸ್ಯರ ಹೆಸರಿನಲ್ಲಿ ಹಾಡುತ್ತಾ ಅವರ ಕುಟುಂಬವು ಸೌಖ್ಯತೆಯ ಬಗ್ಗೆ ಹರಸುತ್ತೇವೆ.
ಮನೆಯವರು ನೀಡುವ ಧನ ದಾನ್ಯಗಳನ್ನು ಪಡೆಯುವ ಸಂಪ್ರದಾಯ ನಮ್ಮ ಪೂರ್ವಜರ ಕಾಲದಿಂದಲೂ ಬಂದಿದ್ದು, ಅದನ್ನು ನಾವು ಮುಂದುವರೆಸಿಕೊಂಡು ಬಂದಿರುವುದಾಗಿ ತಂಡದ ಸದಸ್ಯರಾದ ಗೌರಮ್ಮ, ಈರಮ್ಮ, ಮರೆಮ್ಮ, ಸಣ್ಯಮ್ಮ ತಿಳಿಸಿದರು. ಮೊದಲು ನಮ್ಮ ಹಿರಿಯರು ಹಾಡುತ್ತಿದ್ದರು ನಾವು ಅದನ್ನು ಮುಂದುವರೆಸಿಕೊಂಡು ಬಂದಿದ್ದೇವೆ.
ತಳ ಸಮುದಾಯದವರೇ ಆದ ನಮ್ಮ ಸಾಹಿತ್ಯವನ್ನು ಸರ್ಕಾರವು ಪರಿಗಣಿಸಿ ನಮಗೆ ನೆರವು ನೀಡಬೇಕೆಂದರು.
ನಗರವಾಸಿಯಾದ ಈಶ್ವರಮ್ಮ ಮಾತನಾಡಿ ನಾವು ಚಿಕ್ಕಂದಿನಿಂದಲೂ ನೋಡುತ್ತಾ ಬಂದಿದ್ದೇವೆ. ಇವರನ್ನು ಗೌರಮ್ಮನ ಮಕ್ಕಳು ಎಂದು ಕರೆಯಲಾಗುತ್ತದೆ.
ಮನೆ ಮನೆಗೆ ಬಂದು ನಮ್ಮ ಕುಟುಂಬದವರ ಮೇಲೆ ಹಾಡುಗಳನ್ನು ಹಾಡುತ್ತಾ ಹಿರಿಯರಾದ ಇವರು ನಮಗೆ ಆಶೀರ್ವಾದ ಮಾಡುತ್ತಾರೆ. ನಮ್ಮ ಕುಟುಂಬದ ಸೌಖ್ಯವನ್ನು ಬಯಸುವ ಇವರಿಗೆ ಕೈಲಾದಷ್ಟು ಸಹಾಯ ನೀಡುವುದಾಗಿ ತಿಳಿಸಿದರು.
ವರದಿ : ಶ್ರೀನಿವಾಸ ನಾಯ್ಕ




