ವಿಜಯಪುರ: ನ್ಯಾಯಮೂರ್ತಿ ನಾಗಮೋಹನ ದಾಸ್ ಆಯೋಗ ವರದಿ ನೀಡಿದ ತಕ್ಷಣವೇ ಸರ್ಕಾರ ಸ್ವೀಕರಿಸಬೇಕು ಹಾಗೂ ಜೂನ್ನಲ್ಲೇ ಒಳ ಮೀಸಲಾತಿ ಜಾರಿ ಮಾಡಲೇಬೇಕು ಎಂದು ಮಾಜಿ ಸಚಿವ ಎಚ್.ಆಂಜನೇಯ ಆಗ್ರಹಿಸಿದರು.
ನಗರದಲ್ಲಿ ಗುರುವಾರ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಆದೇಶದ ಬಳಿಕ ಪರಿಶಿಷ್ಟ ಜಾತಿಯಲ್ಲಿರುವ ಎಲ್ಲ ಸಮಾಜಗಳು ಒಳ ಮೀಸಲಾತಿಗೆ ಒಪ್ಪಿವೆ. ಮುಖ್ಯಮಂತ್ರಿ ಅವರೂ ಈಗಾಗಲೇ ಒಳ ಮೀಸಲಾತಿ ಜಾರಿಗೆ ಒಪ್ಪಿದ್ದಾರೆ ಎಂದರು.
ಒಳ ಮೀಸಲಾತಿ ಜಾರಿ ಆಗುವವರೆಗೂ ಯಾವುದೇ ಹೊಸ ಹುದ್ದೆಗಳಿಗೆ ಭರ್ತಿ ಮಾಡುವಂತಿಲ್ಲ ಎಂದು ಸರ್ಕಾರದ ಮೇಲೆ ಒತ್ತಡ ತರಲಾಗಿದೆ ಎಂದು ಹೇಳಿದರು.
ಸಮೀಕ್ಷೆಯಲ್ಲಿ ಮೊಬೈಲ್ ಆ್ಯಪ್ ಬಳಸಲಾಗುತ್ತಿದ್ದು, ಒಂದಷ್ಟು ತಾಂತ್ರಿಕ ಸಮಸ್ಯೆ ಎದುರಾಗಿದೆ. ಅದನ್ನು ಈಗಾಗಲೇ ಸರಿಪಡಿಸಿ, ಸಮೀಕ್ಷೆ ಸುವ್ಯವಸ್ಥಿತವಾಗಿ ಸಾಗಿದೆ ಎಂದರು.
ಕ್ರಮಕ್ಕೆ ಆಗ್ರಹ:
ವೀರಶೈವ ಲಿಂಗಾಯತ ಜಂಗಮರಿಗೂ ಬೇಡ ಜಂಗಮರಿಗೂ ವ್ಯತ್ಯಾಸ ಇದೆ. ಸದ್ಯ ಬೇಡ ಜಂಗಮರು ನಶಿಸಿ ಹೋಗಿದೆ. ಬೇಡ ಜಂಗಮ ಹೆಸರನ್ನು ಎಸ್.ಸಿ ಪಟ್ಟಿಯಿಂದ ತೆಗೆದುಹಾಕಬೇಕು ಎಂದು ಒತ್ತಾಯಿಸಿದರು.
ಲಿಂಗಾಯತ ಜಂಗಮರು ಬೇಡ ಜಂಗಮ ಹೆಸರಲ್ಲಿ ಮೀಸಲಾತಿ ಪಡೆದಿದ್ದರೆ ತೆಗೆದು ಹಾಕಬೇಕು, ವೀರಶೈವ ಲಿಂಗಾಯತ ಜಂಗಮರು ಮೀಸಲಾತಿ ಪಡೆಯುವುದು ಅನ್ಯಾಯ. ಲಿಂಗಾಯತ ಜಂಗಮರಿಗೆ ಬೇಡ ಜಂಗಮ ಸರ್ಟಿಫಿಕೇಟ್ ನೀಡಿದ ಅಧಿಕಾರಿಗಳನ್ನು ಜೈಲಿಗೆ ಹಾಕಬೇಕು ಎಂದು ಆಗ್ರಹಿಸಿದರು.
ಆದಿ ದ್ರಾವಿಡ, ಆದಿ ಕರ್ನಾಟಕ, ಆದಿ ಆಂಧ್ರ ಎಂಬ ಹೆಸರುಗಳು ಮಾದಿಗ ಸಮಾಜಕ್ಕೆ ಅಪಾಯಕಾರಿ ಆಗಿ ಮಾರ್ಪಟ್ಟಿದೆ. ಹೀಗಾಗಿ ಇದನ್ನು ತೆಗೆದುಹಾಕಬೇಕು ಎಂದರು. ವಿಜಯಪುರ ಜಿಲ್ಲಾ ಸಮುದಾಯದ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಇದ್ದರು…




