ಬೆಂಗಳೂರು : ದಿಢೀರ್ ಬೆಳವಣಿಗೆ ಎಂಬಂತೆ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಅವರು ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ.ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸುವ ಮೂಲಕ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.ತಮ್ಮ ರಾಜೀನಾಮೆಗೆ ಪತ್ರದಲ್ಲಿ ಪರಿಸರದ ಕಾಳಜಿ ಬಗ್ಗೆ ರಾಮಸ್ವಾಮಿ ಅವರು ಉಲ್ಲೇಖಿಸಿದ್ದಾರೆ
ಬೆಟ್ಟ, ಗುಡ್ಡ, ಅರಣ್ಯಗಳ ನಾಶದಿಂದ ಜಲ ಮೂಲಗಳು ಬತ್ತಿ ಹೋಗುತ್ತಿವೆ. ಜೀವ ಸಂಕುಲಗಳು ಸಂಕಷ್ಟಕ್ಕೆ ಸಿಲುಕಿವೆ. ಜಾಗತಿಕ ತಾಪಮಾನ ವಿಪರೀತ ಏರಿಕೆ, ಹವಾಮಾನ ಹಠಾತ್ ಬದಲಾವಣೆಯಿಂದ ಜಗತ್ತಿನಲ್ಲಿ ಅಸಮತೋಲನ ಉಂಟಾಗಿದೆ.
ಇಂತಹ ಪರಿಸ್ಥಿತಿಯಲ್ಲಿ ರಾಜಕಾರಣಕ್ಕಿಂತ ಪರಿಸರದ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುವುದು ಅಗತ್ಯವಿದೆ. ಹಾಗಾಗಿ ತಾವು ಆ ನಿಟ್ಟಿನಲ್ಲಿ ತೊಡಗಿಸಿಕೊಳ್ಳುವುದಾಗಿ ರಾಜೀನಾಮೆ ಪತ್ರದಲ್ಲಿ ರಾಮಸ್ವಾಮಿ ಅವರು ಕಾರಣಗಳನ್ನು ಉಲ್ಲೇಖಿಸಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆ ವೇಳೆ ಜೆಡಿಎಸ್ ತೊರೆದು ರಾಮಸ್ವಾಮಿಯವರು ಬಿಜೆಪಿಗೆ ಸೇರಿದ್ದರು. ಬಳಿಕ ಬಿಜೆಪಿ-ಜೆಡಿಎಸ್ ಮೈತ್ರಿ ನಂತರ ಬೇಸರಗೊಂಡಿದ್ದ ಅವರು, ಪಕ್ಷದಿಂದ ಅಂತರವನ್ನು ಕಾಯ್ದುಕೊಂಡು ಇದೀಗ ರಾಜೀನಾಮೆ ಸಲ್ಲಿಸಿದ್ದಾರೆ.