ಸಿರುಗುಪ್ಪ: ನಗರದ ಗಾಯತ್ರಿ ವಿದ್ಯಾ ಮಂದಿರ ಶಾಲೆಯಲ್ಲಿ ವೈದೇಹಿ ಆಸ್ಪತ್ರೆ ಬೆಂಗಳೂರು, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ತಾಲೂಕು ಸಾರ್ವಜನಿಕ ಆಸ್ಪತ್ರೆ, ಆಯುಷ್ ಇಲಾಖೆಗಳ ಸಹಯೋಗದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಶಕೀಬ್ ಅವರು ಉದ್ಘಾಟಿಸಿದರು.

ನಂತರ ಮಾತನಾಡಿ ಆರೋಗ್ಯಕರ ವಾತಾವರಣವನ್ನು ನಿರ್ಮಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದ್ದು, ನೊಂದವರ, ಬಡವರ ಆರೋಗ್ಯದ ಪರೀಕ್ಷೆಯನ್ನು ಬೆಂಗಳೂರಿನ ಉನ್ನತ ಗುಣಮಟ್ಟದ ಆಸ್ಪತ್ರೆಗಳ ವೈದ್ಯರು ತಪಾಸಣೆ ಮಾಡುತ್ತಿರುವುದು ನನಗೆ ಹೆಮ್ಮೆಯ ವಿಷಯವಾಗಿದೆ ಎಂದರು.
ಡಾ.ಮದುಸೂಧನ ಕಾರಿಗನೂರು ಅವರು ಮಾತನಾಡಿ ಆರೋಗ್ಯವೇ ಮಹಾಭಾಗ್ಯವೆಂಬಂತೆ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಹಮ್ಮಿಕೊಂಡಿರುವ ಶಾಲಾ ಆಡಳಿತ ಮಂಡಳಿಯವರ ಬಡವರ ಪರ ಕಾಳಜಿಯು ಶ್ಲಾಘನೀಯ ಎಂದರು.

ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಜರೀನಾ ಶಕೀಬ್ ಅವರು ಮಾತನಾಡಿ ಮನುಷ್ಯನಿಗೆ ಆಯುಷ್ಯ ಎಷ್ಟು ಮುಖ್ಯವೋ ಅದರಂತೆ ಆರೋಗ್ಯವೂ ಮುಖ್ಯವಾಗಿದೆ. ನಮ್ಮೂರಿನ ಜನ ದೂರದ ಊರುಗಳಿಗೆ ಆರೋಗ್ಯಕ್ಕಾಗಿ ಅಲೆಯುವುದನ್ನು ತಪ್ಪಿಸಲು ಇಂತಹ ಕಾರ್ಯಕ್ರಮವನ್ನು ಏರ್ಪಡಿಸಿದ್ದು ನಾಗರೀಕರು ಇದರ ಸೌಲಭ್ಯವನ್ನು ಪಡೆಯಬೇಕೆಂದರು.
ಆರೋಗ್ಯ ತಪಾಸಣೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿಗಳು ಸೇರಿ ಒಟ್ಟು 285ಕ್ಕೂ ಅಧಿಕ ಜನರ ಹೃದಯ, ಕಿಡ್ನಿ, ನರರೋಗ, ಕ್ಯಾನ್ಸರ್, ಎಲುಬು ಕೀಲು, ಕಣ್ಣಿನ ತಪಾಸಣೆ, ಹಾಗೂ ಸಾಮಾನ್ಯ ರೋಗಗಳ ತಪಾಸಣೆ ನಡೆಸಲಾಗಿದ್ದು, ಸಾರ್ವಜನಿಕರಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಸಮಾಜಮುಖಿ ಕಾರ್ಯಕ್ಕೆ ಹರ್ಷ ವ್ಯಕ್ತಪಡಿಸಿದರು.
ಇದೇ ವೇಳೆ ಪ್ರಾಂಶುಪಾಲರಾದ ಸ್ಟ್ಯಾನ್ಲಿ, ವೈದೇಹಿ ಆಸ್ಪತ್ರೆಯ ಹೃದಯತಜ್ಞ ಡಾ.ಮೋಹಿತ್, ಎಲುಬು ಕೀಲು ರೋಗ ತಜ್ಞ ಡಾ.ರುಹಾನ್, ಸಾಮಾನ್ಯ ರೋಗಗಳ ತಜ್ಞ ಡಾ.ಅಜಯ್ ರಾಮಕೃಷ್ಣ, ನೇತ್ರತಜ್ಞ ಡಾ.ಮಹಾಂತೇಶ್, ಆಯುಷ್ ಇಲಾಖೆಯ ಡಾ.ಭಾರತಿ, ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿ ಮಲ್ಲಿಕಾರ್ಜುನ ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿಗಳು ಶಾಲಾ ಆಡಳಿತ ಮಂಡಳಿಯ ಸದಸ್ಯ ಅಬ್ದುಲ್ ಗನಿ ಇನ್ನಿತರ, ಶಿಕ್ಷಕವೃಂದ ಹಾಗೂ ಸಾರ್ವಜನಿಕರು ಇದ್ದರು.
ವರದಿ : ಶ್ರೀನಿವಾಸ ನಾಯ್ಕ




