ಸೇಡಂ: ಯಡ್ರಾಮಿ ತಾಲೂಕಿನಲ್ಲಿ ಪತ್ರಕರ್ತ ಪ್ರಶಾಂತ್ ಚವ್ಹಾಣ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಕೂಡಲೇ ಬಂಧಿಸಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸೇಡಂ ತಾಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಯಡ್ರಾಮಿ ತಾಲೂಕು ಮಳ್ಳಿ ಗ್ರಾಮದಲ್ಲಿ ನಡೆದಿದ್ದ ಅಕ್ರಮ ಪಡಿತರ ಅಕ್ಕಿ ದಾಸ್ತಾನು ಹಾಗೂ ಶಾಲಾ ಶಿಕ್ಷಕನ ತಪ್ಪುಗಳ ಬಗ್ಗೆ ಧೈರ್ಯವಾಗಿ ವರದಿ ಮಾಡಿದ್ದಕ್ಕೆ ಕನ್ನಡಪ್ರಭ ದಿನಪತ್ರಿಕೆಯ ಯಡ್ರಾಮಿ ತಾಲೂಕು ವರದಿಗಾರ ಪ್ರಶಾಂತ ಚವ್ಹಾಣ ಅವರ ಮೇಲೆ ಭೀಕರ ಹಲ್ಲೆ ನಡೆದಿದೆ ಎಂಬುದು ಕೇಳಿ ನಾಗರೀಕ ಸಮಾಜವನ್ನೇ ತಲೆತಗ್ಗಿಸುವಂತೆ ಮಾಡಿದೆ.
ಪತ್ರಕರ್ತರ ಧೈರ್ಯವನ್ನು ಕುಂಠಿತಗೊಳಿಸುವ ಉದ್ದೇಶದಿಂದ ಈ ದಾಳಿ ನಡೆದಿದೆ. ಘಟನೆಯಿಂದ ಜಿಲ್ಲೆಯ ಪತ್ರಕರ್ತರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಪತ್ರಿಕಾ ಸ್ವಾತಂತ್ರ್ಯವು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದರೂ ವರದಿಗಾರರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಸಂಘದ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು. ಹಲ್ಲೆಗೆ ಒಳಗಾದ ಪತ್ರಕರ್ತರಿಗೆ ರಕ್ಷಣೆ ಒದಗಿಸಬೇಕು. ಕಿಡಿಗೇಡಿಗಳನ್ನು ತಕ್ಷಣ ಬಂಧಿಸಲು ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು. ರಾಜ್ಯದಲ್ಲಿ ಪತ್ರಕರ್ತರ ಮೇಲೆ ನಡೆಯುತ್ತಿರುವ ಹಲ್ಲೆ ತಡೆಗಟ್ಟಲು ಪತ್ರಕರ್ತರ ರಕ್ಷಣಾ ನೀತಿ ಜಾರಿಗೆ ತರಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಶರಣು ಮಹಗಾಂವ್, ಕಾರ್ಯದರ್ಶಿ ಸಿದ್ದಲಿಂಗಯ್ಯ ಸ್ವಾಮಿ ಆಡಕಿ, ನಾಗಯ್ಯ ಸ್ವಾಮಿ ಬೊಮ್ನಳ್ಳಿ, ಅವಿನಾಶ್ ಬೊರಂಚಿ, ಶರಣಯ್ಯ ಸ್ವಾಮಿ ಬೊಮ್ನಳ್ಳಿ, ಜಗನ್ನಾಥ ತರನಳ್ಳಿ, ಸುಧೀರ್ ಬಿರಾದಾರ್, ರಾಧಾಕೃಷ್ಣ ಕೆ , ಶಫೀಕ್ ಉಡಗಿ, ಸುನೀಲ್ ರಾಣಿವಾಲ್, ಗಣೇಶ ನೀಲಹಳ್ಳಿ ಉಪಸ್ಥಿತರಿದ್ದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




