
ರಾಮದುರ್ಗ: ಪಟ್ಟಣದಲ್ಲಿ ಇಂದು ಪವಿತ್ರ ರಂಜಾನ್ ಉಪವಾಸ ಮಾಸದ ಹಿನ್ನೆಲೆಯಲ್ಲಿ ಸೌಹಾರ್ದತೆ, ಸಹೋದರತ್ವ ಮತ್ತು ಪರಸ್ಪರ ಗೌರವವನ್ನು ಬಲಪಡಿಸುವ ಉದ್ದೇಶದಿಂದ ಸೌಹಾರ್ದ ಇಫ್ತಾರ್ ಕೂಟ ಕರ್ನಾಟಕ ಮುಸ್ಲಿಂ ಯುನಿಟಿಯಿಂದ ಆಯೋಜಿಸಲಾಯಿತು.
ʼಪವಿತ್ರ ರಂಜಾನ್ ಮಾಸದಲ್ಲಿ ಸರ್ವಧರ್ಮ ತತ್ವದ ಸಾರವನ್ನು ತಿಳಿದುಕೊಳ್ಳಲು ಇಂತಹ ಸೌಹಾರ್ದತೆಯ ಕೂಟಗಳು ಅತ್ಯಂತ ಅವಶ್ಯಕವಾಗಿವೆ, ರಾಮದುರ್ಗ ತಾಲೂಕಿನ ಹಿರಿಯರು ಹಿಂದಿನಿಂದಲೂ ಎಲ್ಲಾ ಸಮುದಾಯದವರು ಶಾಂತಿ, ಸೌಹಾರ್ದತೆ ಹಾಗೂ ಸಹೋದರತ್ವದಿಂದ ಬದುಕಿದ್ದಾರೆ. ಅದೇ ಪರಂಪರೆಯನ್ನು ಮುಂದುವರೆಸುವ ಜವಾಬ್ದಾರಿ ಯುವಕರ ಮೇಲಿದೆʼ ಎಂದು ಶ್ರೀ ಚಂದ್ರಶೇಖರ ಮಹಾಸ್ವಾಮೀಜಿ ಅಶಿರವಚನ ನೀಡಿದರು.
ವಿವಿಧ ಸಮುದಾಯದ ಮುಖಂಡರು ಮತ್ತು ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಮಾತನಾಡಿ, ʼಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಪರಸ್ಪರ ಗೌರವವನ್ನು ಬೆಳೆಸಲು ಸರ್ವಧರ್ಮ ತತ್ವದ ಸಾರವನ್ನು ತಿಳಿದುಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ವಿಭಿನ್ನ ಧರ್ಮಗಳ ಸಾರ ಒಂದೇ ಮಾನವೀಯ ಮೌಲ್ಯಗಳನ್ನು ಸಾರುತ್ತದೆ ಎಂಬುದನ್ನು ಜನರಿಗೆ ತಿಳಿಸಲು ಸೌಹಾರ್ದ ಕೂಟಗಳಂತಹ ಕಾರ್ಯಕ್ರಮಗಳು ಮುಖ್ಯ ಪಾತ್ರವಹಿಸುತ್ತವೆʼ ಎಂದರು.
ಈ ಸಂಧರ್ಭ ಕರ್ನಾಟಕ ಮುಸ್ಲಿಂ ಯುನಿಟಿ ರಾಮದುರ್ಗ ತಾಲೂಕ ಅಧ್ಯಕ್ಷ ಶಫಿ ಬೆಣ್ಣಿ ಸರ್ವರಿಗೂ ಧನ್ಯವಾದ ತಿಳಸಿದರು.
ವರದಿ: ಮಂಜುನಾಥ ಕಲಾದಗಿ




