ನವದೆಹಲಿ: ಭಾರತದಲ್ಲಿ ಅಲ್ಪಸಂಖ್ಯಾತರು ಹಾಗೂ ದಮನಿತ ವರ್ಗಗಳ ವಿರುದ್ಧವೇ ದ್ವೇಶ ಭಾಷಣಗಳು ಹೆಚ್ಚಾಗಿದೆ. ಸುಪ್ರೀಂ ಕೋರ್ಟ್ಗೆ ಬರುವ ದ್ವೇಷ ಭಾಷಣದ ಪ್ರಕರಣಗಳಲ್ಲಿ ಹೆಚ್ಚಿನವು ಅಲ್ಪಸಂಖ್ಯಾತರು, ತುಳಿತಕ್ಕೊಳಗಾದವರಿಗೆ ಸಂಬಂಧಿಸಿದ ಪ್ರಕರಣಗಳೇ ಹೆಚ್ಚು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಎಸ್ ಓಕಾ ಹೇಳಿಕೆ ನೀಡಿದ್ದಾರೆ.
ಕೊಲಂಬಿಯಾ ಕಾನೂನು ಶಾಲೆಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ವರ್ಚುವಲ್ ಮೂಲಕ ಮಾತನಾಡಿದ ಎ.ಎಸ್. ಓಕಾ, ಈ ವರ್ಷ ಜನವರಿ 26ರಂದು ಸಂವಿಧಾನದ ಅಸ್ತಿತ್ವಕ್ಕೆ ಬಂದ 75 ವರ್ಷಗಳನ್ನು ಆಚರಿಸಿದೆವು. ಆದರೆ 75 ವರ್ಷಗಳ ನಂತರವೂ ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದ್ವೇಷ ಭಾಷಣಗಳು ಕಂಡು ಬರುತ್ತಿವೆ ಎಂದರು.
ಚುನಾವಣಾ ಲಾಭಕ್ಕಾಗಿ ರಾಜಕೀಯ ನಾಯಕರು ದ್ವೇಷ ಭಾಷಣ ಮಾಡುತ್ತಾರೆ. ಬಹುಸಂಖ್ಯಾತ ಸಮುದಾಯವನ್ನು ಪ್ರಚೋದಿಸಿ ಅಲ್ಪಸಂಖ್ಯಾತರ ಮೇಲೆ ಹಲ್ಲೆ ನಡೆಸಿ ಸಾಮಾಜಿಕ ಸೌಹಾರ್ದತೆ ಕದಡಲು ಇಂತಹ ಭಾಷಣ ಮಾಡುತ್ತಾರೆ ಎಂದು ಅವರು ಹೇಳಿದರು.
ಇಂತಹ ಭಾಷಣಗಳು ಭಾರತೀಯ ದಂಡ ಸಂಹಿತೆ ಮತ್ತು ಪ್ರಜಾಪ್ರತಿನಿಧಿ ಕಾಯ್ದೆಯಡಿ ಅಪರಾಧವಾಗಿದ್ದರೂ, ಅದನ್ನು ತಡೆಯಲು ಪರಿಣಾಮಕಾರಿ ಮಾರ್ಗವೆಂದರೆ ಜನರಲ್ಲಿ ಅರಿವು ಮೂಡಿಸುವುದಾಗಿದೆ. ಜನಸಾಮಾನ್ಯರಿಗೆ ಶಿಕ್ಷಣ ನೀಡುವ ಮೂಲಕ ಅವರ ಮನಸ್ಸನ್ನು ಬಲಪಡಿಸಬಹುದು ಎಂದು ನ್ಯಾಯಮೂರ್ತಿ ಓಕಾ ಹೇಳಿದರು.