ಅರಭಾವಿ: ಅಮ್ಮಾ ಫೌಂಡೇಶನ ರಾಯಬಾಗ ಮತ್ತು ದಾನಿಗಳಾದ ಚೇತನ್ ಪಟೇಲ್ ಇವರುಗಳ ನೇತೃತ್ವದಲ್ಲಿ ಬೆಳಗಾವಿ ಜಿಲ್ಲೆಯ BE, LLB, BSc, BA ಮತ್ತು PUC ಓದುತ್ತಿರುವ ಮಾಜಿ ದೇವದಾಸಿ ಮಹಿಳೆಯರ ಮಕ್ಕಳು ಹಾಗೂ ಆರ್ಥಿಕವಾಗಿ ಹಿಂದುಳಿದ ಹೆಣ್ಣು ಮಕ್ಕಳಿಗೆ, ಉನ್ನತ ಶಿಕ್ಷಣ ನಿಧಿ ಚೆಕ್ ವಿತರಣೆ ಕಾರ್ಯಕ್ರಮವು, ಬುಧವಾರ ಅರಭಾವಿಯ ಶ್ರೀ ವಾಲ್ಮೀಕಿ ಭವನದಲ್ಲಿ ಭವ್ಯವಾಗಿ ಜರುಗಿತು.
ಶಿಕ್ಷಣದ ಮಹತ್ವವನ್ನು ಒತ್ತಿಹೇಳುವ ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಚಲನಚಿತ್ರದ ನಾಯಕ ನಟ ಶ್ರೀನಗರ ಕಿಟ್ಟಿ ಅವರು ಚೆಕ್ ವಿತರಣೆ ಮಾಡಿ, ಸಂಸ್ಥೆ ಮತ್ತು ದಾನಿಗಳಿಗೆ ಒಳ್ಳೆಯ ಶಿಕ್ಷಣ ಕಲಿತು ಅವರ ಋಣ ತೀರಿಸಿ ಮುಖ್ಯವಾಗಿ, ನಿಮ್ಮ ತಂದೆ ತಾಯಿಗಳಿಗೆ ಗೌರವ ಕೊಡಿ ಅವರನ್ನು, ಚೆನ್ನಾಗಿ ನೋಡಿಕೊಳ್ಳಿ, ಸಮಾಜಕ್ಕೆ ಮತ್ತು ದೇಶಕ್ಕೆ ಒಳ್ಳೆಯ ಪ್ರಜೆಯಾಗಿ ಎಂದು ಮಕ್ಕಳಿಗೆ ಸಲಹೆ ನೀಡಿದರು.
ಸಂಸ್ಥೆಯ ಕಾರ್ಯದಗಳಾದ ಶ್ರೀಮತಿ ಶೋಭಾ ಗಸ್ತಿ ಅವರು “ಮಾಜಿ ದೇವದಾಸಿ ಮಕ್ಕಳು ಮತ್ತು ಬಡ ವಿದ್ಯಾರ್ಥಿನಿಯರು ತಮ್ಮ ಕನಸುಗಳನ್ನು ಸಾಧಿಸಲು ಹಿಂಜರಿಯಬಾರದು. ಈ ನಿಧಿ ಅವರ ಬದುಕಿನಲ್ಲಿ ಹೊಸ ಅಧ್ಯಾಯ ಆರಂಭಿಸಲಿ” ಮಕ್ಕಳ ಭವಿಷ್ಯ ಒಳ್ಳೆಯ ಶಿಕ್ಷಣದಲ್ಲಿ ಅಡಗಿದೆ, ಬಾಲ್ಯವಿವಾಹ ಬಾಲ ಕಾರ್ಮಿಕತೆ ಮತ್ತು ಮೂಢನಂಬಿಕೆಗಳಿಗೆ ಒಳಗಾಗದೆ ಒಳ್ಳೆಯ ಶಿಕ್ಷಣ ಕಲಿತು ನಿಮ್ಮ ಬದುಕು ಉಜ್ವಲವಾಗಲೆಂದು ಹಾರೈಸಿದರು.“ಶಿಕ್ಷಣವೇ ಬದುಕಿನ ದಿಕ್ಕು ತೋರಿಸುವ ದೀಪ” ಎಂದು ದಾನಿಗಳಾದ ಚೇತನ್ ಪಟೇಲ್ ಅವರು ಹೇಳಿದರು, ಆರ್ಥಿಕ ಸಂಕಷ್ಟಗಳ ಕಾರಣದಿಂದ ಪ್ರತಿಭಾವಂತ ವಿದ್ಯಾರ್ಥಿನಿಯರ ವಿದ್ಯಾಭ್ಯಾಸ ನಿಲ್ಲದಂತೆ ಇಂತಹ ನೆರವು ನಿರಂತರವಾಗಿ ಮುಂದುವರಿಯಬೇಕೆಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಚಲನಚಿತ್ರ ನಿರ್ದೇಶಕ ಕಿಶನ್ ರಾವ್, ಸಂಕಲಕರಾದ ಶ್ರೀ ಹರೀಶ್ ಹಾಗೂ ಸಮಾಜ ಸೇವಕರಾದ ಶ್ರೀ ಸಾಗರ್ ಸರ್ ಸಂಸ್ಥೆಯ ನಿರ್ದೇಶಕರು ಸಲಹಾ ಸಮಿತಿಯ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರೆಲ್ಲರೂ ಹಾಜರಿದ್ದರು.
ಸಭಿಕರು ಅಮ್ಮಾ ಫೌಂಡೇಶನ್ನ ಸಂಸ್ಥೆಯ ನಿರಂತರ ಸೇವಾ ಚಟುವಟಿಕೆ, ಹಾಗೂ ದಾನಿಗಳ ಹೃದಯಸ್ಪರ್ಶಿ ಕೊಡುಗೆಗೆ ಭಾವಪೂರ್ಣ ಅಭಿನಂದನೆ ಸಲ್ಲಿಸಿದರು. ಫಲಾನುಭವಿಗಳ ಕಣ್ಣುಗಳಲ್ಲಿ ಕಂಡು ಬಂದ ಕೃತಜ್ಞತೆಯ ಹೊಳಪು, ಈ ಸಹಾಯವು ಎಷ್ಟು ಮಹತ್ವದ್ದೆಂಬುದನ್ನು ಮೌನವಾಗಿ ಸಾರುತ್ತಿತ್ತು.
ಕಾರ್ಯಕ್ರಮದ ಕೊನೆಯಲ್ಲಿ, ನಿಧಿ ಸ್ವೀಕರಿಸಿದ ವಿದ್ಯಾರ್ಥಿನಿಯರು ತಮ್ಮ ಭವಿಷ್ಯದ ಕನಸುಗಳನ್ನು ಹಂಚಿಕೊಂಡು, “ನಾವು ಕೂಡ ಮುಂದಿನ ದಿನಗಳಲ್ಲಿ ಸಮಾಜಕ್ಕೆ ಕೊಡುಗೆ ನೀಡುವ ವ್ಯಕ್ತಿಗಳಾಗುತ್ತೇವೆ” ಎಂದು ಭರವಸೆ ನೀಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಯಲ್ಲಪ್ಪ ಮಾದರ, ಸ್ವಾಗತ ಕಲ್ಲಪ್ಪ ಮಾಂಗ, ಸಂಸ್ಥೆಯ ಸಾಧನೆಯನ್ನು ಶ್ರೀಮತಿ ಭಾರತಿ ತರಕಾರಿ ಹಾಗೂ ವಂದನಾರ್ಪಣೆಯನ್ನು ರಾಜು ಗಸ್ತಿ ಅವರು ನೆರವೇರಿಸಿದರು ಹಾಗೂ ಮಂಜುಳಾ ಹರಿಜನ, ಸುನಿತಾ ಮದಾಳೆ, ಲಕ್ಷ್ಮಿ ಹರಿಜನ, ಶಿವಪ್ಪ ಮದಾಳೆ ಹಾಜರಿದ್ದರು.
ವರದಿ : ಪರಶುರಾಮ ತೆಳಗಡೆ




