ತುರುವೇಕೆರೆ: ಪದಗಳಲ್ಲಿ ಅವಿತ ಕವಿತೆಯನ್ನು ಹುಡುಕಲಿಲ್ಲ, ಮನಸ್ಸು ಹೃದಯಗಳಲ್ಲಿ ಅವಿತ ಭಾವನೆಗಳಿಗೆ ಹೆಚ್.ಎಸ್.ವಿ. ಅಕ್ಷರ ರೂಪ ಕೊಟ್ಟರು ಎಂದು ಬರಹಗಾರ ತುರುವೇಕೆರೆ ಪ್ರಸಾದ್ ಅಭಿಪ್ರಾಯಪಟ್ಟರು.
ಪಟ್ಟಣದ ಚಿದಂಬರೇಶ್ವರ ಉಚಿತ ಗ್ರಂಥಾಲಯದಲ್ಲಿ ಗ್ರಂಥಾಲಯ ಮತ್ತು ಇತರೆ ಕನ್ನಡ ಪರ ಸಂಘಟನೆಗಳು ಹಮ್ಮಿಕೊಂಡಿದ್ದ ಎಚ್ಎಸ್ವಿ ಗೀತ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೆಚ್.ಎಸ್.ವಿ. ಅವರದ್ದು ಕಟ್ಟಿದ ಕಾವ್ಯವಲ್ಲ, ಸೃಜನಾತ್ಮಕವಾಗಿ ಹುಟ್ಟಿದ ಕಾವ್ಯ. ಹಾಗಾಗಿ ಅವರು ಶ್ರೇಷ್ಠ ಕಾವ್ಯವನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಲು ಸಾಧ್ಯವಾಯಿತು. ಹೆಚ್.ಎಸ್.ವಿ ಸಾಹಿತ್ಯ ಮುಂದಿನ ಪೀಳಿಗೆಯ ಸಾಹಿತಿಗಳಿಗೆ ಒಂದು ಶ್ರೇಷ್ಠ ಮಾದರಿಯಾಗಿದೆ’ ಎಂದರು.
ಕಾರ್ಯಕ್ರಮದಲ್ಲಿ ಅಗಲಿದ ಹಿರಿಯ ಕವಿ ಹೆಚ್.ಎಸ್.ವೆಂಕಟೇಶಮೂರ್ತಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ವಾಸವಿ ಸತೀಶ್, ಕವಿತಾ, ವಿರೂಪಾಕ್ಷ, ಶ್ರೀಧರ್, ಕುಮಾರಿ ವೈಷ್ಣವಿ ಹೆಚ್.ಎಸ್.ವಿ ಅವರ ಕವಿತೆಗಳನ್ನು ಹಾಡುವುದರ ಮೂಲಕ ಅವರಿಗೆ ಗೀತ ನಮನ ಸಲ್ಲಿಸಿದರು.
ಹಿರಿಯ ವೈದ್ಯ ಡಾ.ನಾಗರಾಜ್, ರೋಟರಿ ಕ್ಲಬ್ ಅಧ್ಯಕ್ಷ ಸಾ.ಶಿ.ದೇವರಾಜ್, ಕಾರ್ಯದರ್ಶಿ ಕೆ.ಎಸ್.ಶಿವರಾಜ್, ಖಜಾಂಚಿ ದಯಾನಂದ್, ಮಾಯಸಂದ್ರ ಸಿ.ಪಿ.ಪ್ರಕಾಶ್, ಕುವೆಂಪು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಂಸ್ಥಾಪಕ ವೆಂಕಟೇಶ್, ವಿಶ್ವಾರಾಧ್ಯ, ಉಷಾಶ್ರೀನಿವಾಸ್, ಲಲಿತಾ ರಾಮಚಂದ್ರ ಇತರರು ಭಾಗವಹಿಸಿದ್ದರು. ಕೃಷ್ಣ ಚೈತನ್ಯ ಸ್ವಾಗತಿಸಿದರು. ಗ್ರಂಥಾಲಯ ಸಂಸ್ಥಾಪಕ ಟಿ.ರಾಮಚಂದ್ರ ಕಾರ್ಯಕ್ರಮ ನಿರೂಪಿಸಿದರು.
ವರದಿ: ಗಿರೀಶ್ ಕೆ ಭಟ್, ತುರುವೇಕೆರೆ




