ಇತ್ತೀಚೆಗೆ ಮೀರತ್ನಲ್ಲಿ ನಡೆದ ಭೀಕರ ಕೊಲೆಯೊಂದು ಇಡೀ ಉತ್ತರ ಪ್ರದೇಶವನ್ನು ಬೆಚ್ಚಿಬೀಳಿಸಿತ್ತು. ಅದೇ ಮಾದರಿಯ ಘಟನೆ ತನ್ನ ಜೀವನದಲ್ಲೂ ಸಂಭವಿಸಬಹುದು ಎಂಬ ಆತಂಕದಿಂದ ಬುಲಂದ್ಶಹರ್ನ ವ್ಯಕ್ತಿಯೊಬ್ಬರು ತನ್ನ ಪತ್ನಿಯನ್ನು ಆಕೆಯ ಪ್ರಿಯಕರನ ಜೊತೆಗೇ ಕಳುಹಿಸಿಕೊಟ್ಟಿದ್ದಾರೆ.
ಬುಲಂದ್ಶಹರ್ನ ಗುಲಾವತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಇಲ್ಲಿನ ನಿವಾಸಿಯೊಬ್ಬರ ಪತ್ನಿ ಕಳೆದ ಕೆಲವು ಸಮಯದಿಂದ ಬೇರೊಬ್ಬ ಯುವಕನ ಜೊತೆ ಪ್ರೇಮ ಸಂಬಂಧ ಹೊಂದಿದ್ದಳು.
ಈ ವಿಷಯ ಪತಿಗೆ ತಿಳಿದು ಮನೆಯಲ್ಲಿ ಜಗಳವಾಗಿತ್ತು.ಪತ್ನಿ ತನ್ನ ಪ್ರಿಯಕರನನ್ನೇ ಮದುವೆಯಾಗುವುದಾಗಿ ಹಠ ಹಿಡಿದಿದ್ದಳು.
ಇತ್ತೀಚೆಗೆ ಮೀರತ್ನಲ್ಲಿ ಪ್ರಿಯಕರನ ಜೊತೆ ಸೇರಿ ಪತ್ನಿಯೇ ಪತಿಯನ್ನು ಕೊಲೆ ಮಾಡಿ ಶವವನ್ನು ‘ನೀಲಿ ಬಣ್ಣದ ಡ್ರಮ್’ ನಲ್ಲಿ ಅಡಗಿಸಿಟ್ಟಿದ್ದ ಘಟನೆ ವರದಿಯಾಗಿತ್ತು.ಈ ಸುದ್ದಿಯನ್ನು ಓದಿದ ಬುಲಂದ್ಶಹರ್ನ ಪತಿ ತೀವ್ರ ಆತಂಕಕ್ಕೊಳಗಾಗಿದ್ದರು.
“ನನ್ನ ಪತ್ನಿ ಕೂಡ ತನ್ನ ಪ್ರಿಯಕರನ ಜೊತೆ ಸೇರಿ ನನ್ನನ್ನು ಕೊಲೆ ಮಾಡಬಹುದು ಅಥವಾ ಅನಾಹುತ ಸಂಭವಿಸಬಹುದು” ಎಂದು ಅವರು ಹೆದರಿದ್ದರು.
ಹೀಗಾಗಿ, ಯಾವುದೇ ಪ್ರಾಣಾಪಾಯ ಬೇಡ ಎಂಬ ಕಾರಣಕ್ಕೆ ಅವರು ಪಂಚಾಯಿತಿಯ ಮೊರೆ ಹೋಗಿ, ಪತ್ನಿಯ ಇಚ್ಛೆಯಂತೆ ಆಕೆಯನ್ನು ಪ್ರಿಯಕರನ ಜೊತೆ ಕಳುಹಿಸಲು ಒಪ್ಪಿಗೆ ನೀಡಿದ್ದಾರೆ.
ಪೊಲೀಸ್ ಮಧ್ಯಪ್ರವೇಶ: ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಇಬ್ಬರನ್ನೂ ವಿಚಾರಣೆ ನಡೆಸಿದ್ದಾರೆ. ಪತ್ನಿ ತನ್ನ ಪ್ರಿಯಕರನ ಜೊತೆ ಹೋಗಲು ದೃಢ ನಿರ್ಧಾರ ಮಾಡಿರುವುದಾಗಿ ತಿಳಿಸಿದ್ದಾಳೆ. ಈ ಘಟನೆಯು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.




