ಮೈಸೂರು : ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಕಾಶ್ಮೀರದಲ್ಲಿ ಉಗ್ರರ ಕೃತ್ಯಕ್ಕೆ ಭದ್ರತೆ ವೈಫಲ್ಯ ಕಾರಣ ಎಂದಿದ್ದಾರೆ. ಅಲ್ಲದೆ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯುದ್ಧದ ಪರ ಇಲ್ಲ, ಶಾಂತಿ ಸುವ್ಯವಸ್ಥೆ ಪರ. ಉಗ್ರರ ವಿರುದ್ಧ ಕೇಂದ್ರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಪಾಕ್ ಪ್ರಜೆಗಳನ್ನು ಪತ್ತೆ ಹಚ್ಚುವ ಕೆಲಸ ಮಾಡಲಾಗುತ್ತಿದೆ. ಪಾಕ್ ಪ್ರಜೆಗಳನ್ನು ಪತ್ತೆ ಹಚ್ಚಿ ಕೇಂದ್ರಕ್ಕೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಕಾಶ್ಮೀರದ ಭದ್ರತೆ ವಿಚಾರದಲ್ಲಿ ಕೇಂದ್ರ ಸರ್ಕಾರ ಜನರಿಗೆ ಟೋಪಿ ಹಾಕಿದೆ.ಭದ್ರತೆ ಇದೆ ಎಂದು ನಂಬಿಕೊಂಡು ಜನ ಕಾಶ್ಮೀರಕ್ಕೆ ಹೋದರು. ಆದರೆ ಅಲ್ಲಿ ಭದ್ರತೆಯ ವೈಫಲ್ಯ ಉಂಟಾಗಿದೆ.
ಹಾಗಾದರೆ ಇವರು ಮಾಡಿದ್ದು ಬರೀ ಭಾಷಣಾನಾ?.ಈಗ ಏನೇ ಕ್ರಮಕೈಗೊಂಡರೂ ಹೋದ 26 ಜೀವಗಳನ್ನು ವಾಪಸ್ ತರಲು ಸಾಧ್ಯಾನಾ? ಎಂದು ಸಿದ್ದು ಟಾಂಗ್ ನೀಡಿದರು.
ಪುಲ್ವಾಮಾ ಘಟನೆ ವಿಚಾರದಲ್ಲಿ ಮುಂದೆ ಏನಾಯಿತು ಎಂದು ಯಾರಿಗೆ ಗೊತ್ತಿದೆ ಹೇಳಿ.ಈಗ ಕೇಂದ್ರ ಸರ್ಕಾರ ಭದ್ರತಾ ವೈಫಲ್ಯವನ್ನು ಒಪ್ಪಿಕೊಂಡಿದೆ. ನಾನು ಮೊದಲೇ ಹೇಳಿದೆ, ನನ್ನ ಮಾತು ನಿಜವಾಗಿದೆ.ಸರ್ವ ಪಕ್ಷ ಸಭೆಗೆ ಪ್ರಧಾನಿ ಮೋದಿ ಹೋಗಿಲ್ಲ.
ಇಂತಹ ಸಭೆಗಿಂತ ಮಹತ್ವದ ಸಭೆ ಯಾವುದು ಇದೆ ಹೇಳಿ.ಚುನಾವಣಾ ಪ್ರಚಾರದ ಭಾಷಣ ಮುಖ್ಯನಾ? ಸಭೆ ಮುಖ್ಯಾನಾ?ಇವರಿಗೆ ಪರಿಸ್ಥಿತಿಯ ಗಂಭೀರತೆ ಗೊತ್ತಿದೆಯಾ? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಸಿದರು.