ಬೆಂಗಳೂರು: ರಾಜ್ಯಾಧ್ಯಕ್ಷ ಸ್ಥಾನದಿಂದ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಕುಟುಂಬ ಮುಕ್ತಿ ಆಗುವವರೆಗೂ ನಾನು ಬಿಜೆಪಿಗೆ ವಾಪಸ್ ಆಗಲ್ಲ ಎಂದು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಶಪಥ ಮಾಡಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ವಿಜಯೇಂದ್ರ ಚೇಲಾಗಳು ಯತ್ನಾಳ್ ರಾಜೀನಾಮೆ ಕೊಡಬೇಕು ಅಂತ ಹೇಳುತ್ತಾರೆ.ಮೊದಲು ವಿಜಯೇಂದ್ರ ರಾಜೀನಾಮೆ ಕೊಡಬೇಕು.
ಡಿಕೆಶಿ ಕೊಟ್ಟ ಭಿಕ್ಷೆಯಿಂದ ಶಾಸಕ ಆಗಿರೋದು. ಮೊದಲು ವಿಜಯೇಂದ್ರ ರಾಜೀನಾಮೆ ಕೊಟ್ಟು ಶಿಕಾರಿಪುರದಿಂದ ಆರಿಸಿ ಬರಲಿ. ವಿಜಯೇಂದ್ರ ಚೇಲಾಗಳ ಕೈಯಲ್ಲಿ ಹೇಳಿಸೋದು ಬಿಟ್ಟು ಧಮ್ ಇದ್ದರೆ ನನ್ನ ಎದುರಿಗೆ ವಿಜಯೇಂದ್ರ ಮಾತಾಡಲಿ. 4 ಚೇಲಾಗಳನ್ನ ಇಟ್ಟುಕೊಂಡು ಹಂದಿಗಳಿಂದ ಮಾತಾಡಿಸಬೇಡ ಎಂದು ವಿಜಯೇಂದ್ರ ವಿರುದ್ಧ ಕಿಡಿಕಾರಿದರು.
ಯತ್ನಾಳ್ರನ್ನ ವಾಪಸ್ ಬಿಜೆಪಿಗೆ ತರಲು ರಮೇಶ್ ಜಾರಕಿಹೊಳಿ ಫಡ್ನವಿಸ್ ಜೊತೆ ಮಾತುಕತೆ ಮಾಡಿರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಮೇಶ್ ಜಾರಕಿಹೊಳಿ ಕೃಷ್ಣ ಮತ್ತು ಭೀಮಾ ನದಿಗೆ ನೀರು ಬಿಡುವಂತೆ ಫಡ್ನವಿಸ್ ಭೇಟಿಯಾಗಿದ್ದು. ನನ್ನ ಸಲುವಾಗಿ ಚರ್ಚೆ ಮಾಡೋದು ಅವಶ್ಯಕತೆ ಇಲ್ಲ. ಯಾಕೆಂದರೆ 6 ವರ್ಷ ಹೊರಗೆ ಹಾಕಿದ್ದಾರೆ. ಯಡಿಯೂರಪ್ಪ ಕುಟುಂಬ ರಾಜ್ಯಾಧ್ಯಕ್ಷ ಸ್ಥಾನದಿಂದ ಮುಕ್ತಿಯಾಗುವವರೆಗೆ ನಾನು ಬಿಜೆಪಿಗೆ ಹೋಗಲ್ಲ ಎಂದರು.
ಹೊಸ ಪಕ್ಷ ಕಟ್ಟುತ್ತೇವೆ ಅಂತ ಯಾರು ಹೇಳಿದ್ರು? ನಾವು ಮೊದಲು ಸರ್ವೆ ಮಾಡುತ್ತೇವೆ. ಈ ಕೆಟ್ಟ ಯಡಿಯೂರಪ್ಪ ಕುಟುಂಬಕ್ಕೆ ಬಿಜೆಪಿ ಮುಂದುವರೆಸಿದರೆ ಹೊಸ ಪಕ್ಷದ ಬಗ್ಗೆ ಚಿಂತನೆ ಮಾಡುತ್ತೇವೆ. ಈ ಕೆಟ್ಟ ಕುಟುಂಬ ತೆಗೆದರೆ ಮಾತ್ರ ಬಿಜೆಪಿಗೆ ಕರ್ನಾಟಕದಲ್ಲಿ ಭವಿಷ್ಯ ಇದೆ ಎಂದು ಆರೋಪಿಸಿದರು.