ವಿಜಯಪುರ : ರೆಬಲ್ ನಾಯಕ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿಯಿಂದ 6 ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿದ್ದು, ಪಂಚಮಸಾಲಿ ಸಮುದಾಯ ಕೆರಳುವಂತೆ ಮಾಡಿದೆ.
ಯತ್ನಾಳ್ ಬೆಂಬಲಕ್ಕೆ ನಿಂತಿರುವ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರು, ಯತ್ನಾಳ್ ಹೊಸ ಪಕ್ಷ ಕಟ್ಟಿದರೆ ನಾವೆಲ್ಲರೂ ಸಂಪೂರ್ಣವಾಗಿ ಅವರ ಬೆಂಬಲಕ್ಕೆ ನಿಲ್ಲುತ್ತೇವೆ ಎಂದು ಘೋಷಣೆ ಮಾಡಿದರು.
ಯತ್ನಾಳ್ ಅವರಿಗೆ ನಮ್ಮ ಹಾಗೂ ಸುಮುದಾಯದ ಸಹಕಾರ ಇರಲಿದೆ. ನಮ್ಮ ಸಮಾಜ, ನಮ್ಮ ನಾಯಕ, ನಮ್ಮ ಹೋರಾಟ ಇದು. ಇದರಲ್ಲಿ ಬೇರೆ ಸಮಾಜದವರು ಮೂಗು ತೂರಿಸುವ ಅವಶ್ಯವಿಲ್ಲ. ಪಕ್ಷಾತೀತವಾಗಿ ನಮ್ಮ ನಾಯಕನ ಬೆನ್ನಿಗೆ ನಾವು ನಿಂತಿದ್ದೇನೆ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.
ಇದಲ್ಲದೇ ಉಚ್ಚಾಟನೆಯ ನಿರ್ಧಾರವನ್ನು ಹೈಕಮಾಂಡ್ ಏ.10ರೊಳಗೆ ಹಿಂಪಡೆಯಿದ್ದರೆ ಏ.13ರಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದೂ ಸ್ವಾಮೀಜಿ ನಿನ್ನೆಯಷ್ಟೇ ಎಚ್ಚರಿಕೆ ನೀಡಿದ್ದರು.
ಇನ್ನು ಉಚ್ಚಾಟನೆಯನ್ನು ವಿರೋಧಿಸಿ ಯತ್ನಾಳ್ ಅವರ ಬೆಂಬಲಿಗರು ವಿಜಯಪುರದ ಗಾಂಧಿಚೌಕ್ನಲ್ಲಿ ಬೃಹತ್ ಹೋರಾಟ ನಡೆಸಿದ್ದು, ವಿಜಯೇಂದ್ರ, ಯಡಿಯೂರಪ್ಪ ಅವರ ಅಣಕು ಶವಯಾತ್ರೆ ಮಾಡಿ ಭಾವಚಿತ್ರಗಳನ್ನು ದಹಿಸಿ ಆಕ್ರೋಶ ಹೊರ ಹಾಕಿದರು.