————————————-ವೀರೇಶಾನಂದ ಸರಸ್ವತಿ ಸ್ವಾಮೀಜಿ ವಿಷಾಧ
ತುರುವೇಕೆರೆ: ಸರ್ಕಾರಗಳ ದೃಷ್ಟಿಯಲ್ಲಿ ಶಿಕ್ಷಣ ಇಲಾಖೆ ಒಂದು ಅನುತ್ಪಾದಕ ಬಾಬತ್ತು ಎನಿಸಿರುವುದು ಬಹುದೊಡ್ಡ ದುರಂತ ಎಂದು ತುಮಕೂರಿನ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ವಿಷಾಧಿಸಿದರು.
ಪಟ್ಟಣದ ಮೂಲೇಶಂಕರೇಶ್ವರ ದೇವಾಲಯದ ಆವರಣದಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ಮೂಲೆಶಂಕರೇಶ್ವರ ದೇವಾಲಯ ಸಮಿತಿ, ಪತಂಜಲಿ ಯೋಗ ಶಿಕ್ಷಣ ಸಮಿತಿ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿದ್ಯಾಶಂಕರ ಕೌಶಲ ತರಬೇತಿ ಹಾಗೂ ವ್ಯಕ್ತಿತ್ವ ವಿಕಸನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು,ಪ್ರಜೆಗಳನ್ನು ಪ್ರಜ್ಞಾವಂತರನ್ನಾಗಿ ಮಾಡುವ ಶಿಕ್ಷಣಕ್ಕೆ ಸಿಗಬೇಕಾದಷ್ಟು ಪ್ರಾಮುಖ್ಯ ಸಿಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು
ಭಾರತ ಬುದ್ದಿವಂತಿಕೆ ಹಾಗೂ ಕೌಶಲ್ಯದಲ್ಲಿ ಪಾರಮ್ಯ ಮೆರೆದಿದ್ದು ಮಾನವೀಯ ನೆಲೆಯಲ್ಲಿ ಭಾವನಾತ್ಮಕ ಹಾಗೂ ಹೃದಯಪೂರ್ವಕ ಸಂಬಂಧಗಳನ್ನು ಗಟ್ಟಿಗೊಳಿಸುವ ಶಿಕ್ಷಣ ಇಂದಿನ ತುರ್ತು ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.
ಬುದ್ದಿವಂತಿಕೆ ಹಾಗೂ ಕೌಶಲಗಳು ಸಮುದಾಯದ ಹಿತಕ್ಕಿಂತ ಸ್ವಾರ್ಥ ಸಾಧನೆಗೆ ಬಳಕೆಯಾಗುವುದೇ ಹೆಚ್ಚಾಗಿದೆ. ಅವುಗಳ ಹರಿವು ಮತ್ತು ಉಪಯೋಗ ವ್ಯವಹಾರಿಕ ಉದ್ದೇಶಗಳಿಗೆ ಮೀಸಲಾಗುತ್ತಿದೆ. ಶಿಕ್ಷಣ ಕೇವಲ ಇಂತಹ ಶಾರ್ಟ್ಕಟ್ ಕೌಶಲಗಳನ್ನು ಕಲಿಸುವ ಕಾರ್ಯಾಗಾರ ಎನಿಸಬಾರದು. ಶಿಕ್ಷಣ ವ್ಯಕ್ತಿಯೊಬ್ಬನ ಸಮಗ್ರ ವ್ಯಕ್ತಿತ್ವವನ್ನು ರೂಪಿಸುವ, ಜ್ಞಾನದ ಅನಂತ ಶಾಖೆಗಳನ್ನು ಶೋಧಿಸುವ ಅನುಸಂಧಾನದ ನಿರಂತರ ಪ್ರಕ್ರಿಯೆಯಾಗಬೇಕು. ಅದಕ್ಕೆ ಪ್ರತಿಯೊಬ್ಬ ಶಿಕ್ಷಕನೂ ಶತಶತಮಾನಗಳ ದೂರದೃಷ್ಟಿಯುಳ್ಳ ಪ್ರವಾದಿಯಾಗಬೇಕು ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಆರ್.ಎ. ಚೇತನ್ ರಾಮ್ ಮಾತನಾಡಿ’ ವಿದ್ಯಾರ್ಥಿಗಳು ಯವುದೇ ಸವಾಲನ್ನು ಎದುರಿಸಲು ಮಾನಸಿಕವಾಗಿ ಸಿದ್ಧರಾಗಿದ್ದರೆ, ತಮ್ಮ ಕರ್ತವ್ಯಕ್ಕೆ ಬದ್ಧರಾಗಿದ್ದರೆ ಅವರು ಬುದ್ಧನಂತೆ ಜ್ಞಾನದ ಸಾಕ್ಷಾತ್ಕಾರ ಮಾಡಿಕೊಳ್ಳಬಹುದು. ಜ್ಞಾನ, ಕೌಶಲ, ಮನೋಭಾವದಲ್ಲಿ ಬದಲಾವಣೆಯಾದರೆ ತಾನಾಗೇ ಪರಿಸರ ಬದಲಾವಣೆ ಆಗುತ್ತದೆ. ಈ ನಾಲ್ಕೇ ವ್ಯಕ್ತಿಯ ಯಶಸ್ಸಿನ ಸೌಧದ ಆಧಾರ ಸ್ತಂಭಗಳು. ವ್ಯಕ್ತಿಯ ವ್ಯಕ್ತಿತ್ವ ಹಿರಿದಾಗಿ ಬೆಳೆದರೆ ಯಾವುದೇ ಸಮಸ್ಯೆ ಅದರ ಮುಂದೆ ನಗಣ್ಯವಾಗುತ್ತದೆ ಎಂದು ಹಲವು ನಿರ್ದೇಶನಗಳನ್ನು ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ್ ಮಾತನಾಡಿ ಎಸ್.ಎಸ್.ಎಲ್.ಸಿ ಫಲಿತಾಂಶ ಉತ್ತಮ ಪಡಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ಈ ಬಾರಿ ತಾಲ್ಲೂಕು ಜಿಲ್ಲೆಗೆ ಎರಡನೇ ಸ್ಥಾನ ಗಳಿಸಿದೆ. ಇಲಾಖೆಯೊಂದಿಗೆ ಸಮುದಾಯ ಕೈ ಜೋಡಿಸಿದರೆ ಇನ್ನೂ ಹೆಚ್ಚಿನ ಸಾಧನೆ ಮಾಡಬಹುದು ಎಂದರು.
ಸಮಾರಂಭದ ನಂತರ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳಲ್ಲಿ ಕೌಶಲ ತರಬೇತಿ ತರಗತಿಗಳನ್ನು ಹಮ್ಮಿಕೊಳ್ಳಲಾಗಿತ್ತು. ಸಮಾರಂಭದಲ್ಲಿ ವಾಸವಿ ಸತೀಶ್, ಗುರುರಾಜ್, ಬಾಲಕೃಷ್ಣ, ಕೆ.ಎಚ್.ಆನಂದರಾಜ್ ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್, ತುರುವೇಕೆರೆ




