ಬೆಂಗಳೂರು: ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಲ್ಲಿ ಹಾವು ಕಡಿತದ ಪ್ರಕರಣಗಳು ಆತಂಕಕಾರಿಯಾಗಿ ಏರಿಕೆಯಾಗಿದ್ದು, ಒಟ್ಟು 36,636 ಪ್ರಕರಣಗಳು ವರದಿಯಾಗಿವೆ.
ಈ ಪೈಕಿ 273 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿಧಾನ ಪರಿಷತ್ನಲ್ಲಿ ಮಾಹಿತಿ ನೀಡಿದ್ದಾರೆ.
ಬುಧವಾರ ನಡೆದ ಕಲಾಪದಲ್ಲಿ ಸದಸ್ಯ ಕೆ. ಗೋವಿಂದರಾಜ್ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಸಚಿವರು, ಹಾವು ಕಡಿತವನ್ನು ನಿಯಂತ್ರಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು.
ಗಮನಾರ್ಹ ಅಂಕಿ-ಅಂಶಗಳು
ಕಳೆದ ಮೂರು ವರ್ಷಗಳಲ್ಲಿ ಹಾವು ಕಡಿತದ ಪ್ರಕರಣಗಳು ಮತ್ತು ಸಾವಿನ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗಿರುವುದು ವರದಿಯಿಂದ ತಿಳಿದುಬಂದಿದೆ:
ವರ್ಷ ದಾಖಲಾದ ಪ್ರಕರಣಗಳು ಮೃತಪಟ್ಟವರ ಸಂಖ್ಯೆ
2023 6,596 19
2024 13,235 100
2025 16,805 154
ಒಟ್ಟು 36,636 273
‘ಘೋಷಿತ ಕಾಯಿಲೆ’ ಪಟ್ಟಿಗೆ ಸೇರ್ಪಡೆ
ಹಾವು ಕಡಿತದ ಪ್ರಕರಣಗಳ ಬಗ್ಗೆ ನಿಖರ ಮಾಹಿತಿ ಪಡೆಯಲು ಮತ್ತು ಸಾವಿನ ಪ್ರಮಾಣ ತಗ್ಗಿಸಲು ರಾಜ್ಯ ಸರ್ಕಾರ ಇದನ್ನು ‘ಘೋಷಿತ ಕಾಯಿಲೆ’ (Notifiable Disease) ಎಂದು 2024ರಲ್ಲಿ ಪ್ರಕಟಿಸಿದೆ. ಇದರಿಂದಾಗಿ ಇನ್ನು ಮುಂದೆ ಎಲ್ಲಾ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳು ಹಾವು ಕಡಿತದ ಪ್ರಕರಣಗಳನ್ನು ಕಡ್ಡಾಯವಾಗಿ ಸರ್ಕಾರಕ್ಕೆ ವರದಿ ಮಾಡಬೇಕಾಗುತ್ತದೆ.




