ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರವು ಕೇಂದ್ರದಲ್ಲಿ ಮೂರನೇ ಅವಧಿಯ ಮೊದಲ ವರ್ಷವನ್ನು ಪೂರ್ಣಗೊಳಿಸಿದ್ದು, ದೇಶದಲ್ಲಿ ನರೇಂದ್ರ ಮೋದಿ ಆಡಳಿತ ಆರಂಭವಾಗಿ ಇಂದಿಗೆ ಬರೋಬ್ಬರಿ 11 ವರ್ಷ ಪೂರ್ಣಗೊಂಡಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.
ಕಳೆದ 11 ವರ್ಷಗಳಲ್ಲಿ ಮೋದಿ ಸರ್ಕಾರವು ಭಾರತೀಯ ಪ್ರಜಾಪ್ರಭುತ್ವ, ಆರ್ಥಿಕತೆ ಮತ್ತು ಸಾಮಾಜಿಕ ರಚನೆಗೆ ತೀವ್ರ ಹಾನಿಯನ್ನುಂಟುಮಾಡಿದೆ. ಬಿಜೆಪಿ-ಆರ್ಎಸ್ಎಸ್ ಪ್ರತಿಯೊಂದು ಸಾಂವಿಧಾನಿಕ ಸಂಸ್ಥೆಯನ್ನು ದುರ್ಬಲಗೊಳಿಸಿದೆ.
ಈ ಅವಧಿಯಲ್ಲಿ, ರಾಜ್ಯಗಳ ಹಕ್ಕುಗಳನ್ನು ನಿರ್ಲಕ್ಷಿಸಲಾಗಿದೆ ಮತ್ತು ಒಕ್ಕೂಟ ರಚನೆಯನ್ನು ದುರ್ಬಲಗೊಳಿಸಲಾಗಿದೆ ಎಂದು ಆರೋಪಿಸಿದರು.
ಸಮಾಜದಲ್ಲಿ ದ್ವೇಷ, ಬೆದರಿಕೆ ಮತ್ತು ಭಯವನ್ನು ಹರಡಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ. ದಲಿತರು, ಬುಡಕಟ್ಟು ಜನಾಂಗದವರು, ಹಿಂದುಳಿದವರು, ಅಲ್ಪಸಂಖ್ಯಾತರು ಮತ್ತು ದುರ್ಬಲ ವರ್ಗಗಳ ಮೇಲಿನ ಶೋಷಣೆ ನಿರಂತರವಾಗಿ ಹೆಚ್ಚುತ್ತಿದೆ. ಅವರ ಮೀಸಲಾತಿ ಮತ್ತು ಸಮಾನ ಹಕ್ಕುಗಳನ್ನು ಕಸಿದುಕೊಳ್ಳುವ ಪಿತೂರಿ ಮುಂದುವರಿದಿದೆ. ಮಣಿಪುರದಲ್ಲಿ ನಿರಂತರವಾಗಿ ನಡೆಯುತ್ತಿರುವ ಹಿಂಸಾಚಾರವು ಬಿಜೆಪಿಯ ಆಡಳಿತ ವೈಫಲ್ಯಕ್ಕೆ ದೊಡ್ಡ ಪುರಾವೆಯಾಗಿದೆ ಎಂದರು.
ಬಿಜೆಪಿ-ಆರ್ಎಸ್ಎಸ್ ದೇಶದ ಜಿಡಿಪಿ ಬೆಳವಣಿಗೆ ದರವನ್ನು 5-6%ಗೆ ತಂದಿದೆ, ಇದು ಯುಪಿಎ ಅವಧಿಯಲ್ಲಿ ಸರಾಸರಿ 8%ರಷ್ಟಿತ್ತು. ಪ್ರತಿ ವರ್ಷ 2 ಕೋಟಿ ಉದ್ಯೋಗಗಳ ಭರವಸೆಯ ಬದಲು, ಕೋಟ್ಯಂತರ ಯುವ ಜನತೆಯಿಂದ ಉದ್ಯೋಗಗಳನ್ನು ಕಸಿದುಕೊಳ್ಳಲಾಯಿತು. ಹಣದುಬ್ಬರದಿಂದಾಗಿ, ಸಾರ್ವಜನಿಕ ಉಳಿತಾಯವು ಕುಸಿತ ಕಂಡಿದೆ.
ನೋಟು ರದ್ದತಿ, ಜಿಎಸ್ಟಿ, ಲಾಕ್ಡೌನ್ ಮತ್ತು ಅಸಂಘಟಿತ ವಲಯದ ಮೇಲೆ ಹೊಡೆತ ನೀಡುವ ಮೂಲಕ ಕೋಟ್ಯಂತರ ಜನರ ಭವಿಷ್ಯವನ್ನು ಹಾಳುಮಾಡಲಾಯಿತು. ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ, ಸ್ಟಾರ್ಟ್ಅಪ್ ಇಂಡಿಯಾ, ಸ್ಟ್ಯಾಂಡ್ ಅಪ್ ಇಂಡಿಯಾ, ಡಿಜಿಟಲ್ ಇಂಡಿಯಾ, ನಮಾಮಿ ಗಂಗೆ, 100 ಸ್ಮಾರ್ಟ್ ಸಿಟಿಗಳು ಎಲ್ಲವೂ ವಿಫಲವಾದವು. ರೈಲ್ವೆಗಳು ನಾಶವಾದವು. ಕಾಂಗ್ರೆಸ್-ಯುಪಿಎ ನಿರ್ಮಿಸಿದ ಮೂಲಸೌಕರ್ಯದ ರಿಬ್ಬನ್ಗಳನ್ನು ಮಾತ್ರ ಕತ್ತರಿಸಲಾಯಿತು ಎಂದು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ವ್ಯಂಗ್ಯ ವಾಡಿದ್ದಾರೆ.




