ಸಿರುಗುಪ್ಪ : ತಾಲೂಕಿನ ದೇಶನೂರು ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯಂದು ಜರುಗಿದ ಗಲಭೆಯ ಆರೋಪಿಗಳ ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದಲಿತ ಹಕ್ಕುಗಳ ತಾಲೂಕು ಸಮಿತಿ ಹಾಗೂ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ತಾಲೂಕು ಸಮಿತಿಯ ವತಿಯಿಂದ ವೃತ್ತ ನೀರಿಕ್ಷಕ ಹನುಮಂತಪ್ಪ ಅವರ ಮೂಲಕ ಪೋಲೀಸ್ ಉಪಾಧೀಕ್ಷಕರಿಗೆ ಮನವಿ ಸಲ್ಲಿಸಲಾಯಿತು.

ಸಿಐಟಿಯು ಜಿಲ್ಲಾಧ್ಯಕ್ಷ ಸತ್ಯಬಾಬಯ ಅವರು ಮಾತನಾಡಿ ಗಲಭೆಯಲ್ಲಿ ದಲಿತರ ಮೇಲೆ ದಲಿತರನ್ನೇ ಎತ್ತಿಕಟ್ಟಿ ಷಡ್ಯಂತರ ನಡೆದಿರುವುದು ಕಂಡುಬಂದಿದೆ.
ಹಲ್ಲೆಗೊಳಗಾದ ಕೂಡಲೇ ಪೋಲೀಸ್ ಇಲಾಖೆ ಮದ್ಯಪ್ರವೇಶಿಸಿ ಶಾಂತಿಯನ್ನು ಕಾಪಾಡಬೇಕಾಗುತ್ತದೆ.
ಆದರೆ ಪೋಲೀಸರು ಹಲ್ಲೆಗೊಳಗಾದವರ ಪರ ನಿಲ್ಲದೇ ಹಲ್ಲೆ ಮಾಡಿದವರ ಪರ ನಿಂತಿರುವುದು ನಮಗೆ ಸ್ಪಷ್ಟವಾಗಿ ಅರ್ಥವಾಗುತ್ತಿದೆ. ಅಧಿಕಾರಿಗಳು ಸೂಕ್ತ ತನಿಖೆ ಕೈಗೊಂಡು ಅನ್ಯಾಯಕ್ಕೊಳಗಾದವರಿಗೆ ನ್ಯಾಯ ದೊರೆಕಿಸಬೇಕೆಂದರು.
ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಸಹಕಾರ್ಯದರ್ಶಿ ಜೆ.ಚಂದ್ರಕುಮಾರಿ ಅವರು ಮಾತನಾಡಿ ನಮ್ಮದು ದಲಿತರ ಪರವಾದ ಹೋರಾಟವಿರುತ್ತದೆ.
ಹಳ್ಳಿಗಳಲ್ಲಿ ಪುತ್ಥಳಿ ಅನಾವರಣದ ವೇಳೆ ಗಲಾಟೆಗಳು ಸಾಮಾನ್ಯ. ಆದರೆ ಪೋಲೀಸರು ಸೂಕ್ತ ಬಂದೋಬಸ್ತಿನ ವೈಫಲ್ಯವೇ ಇಂತಹ ಘಟನೆಗಳಿಗೆ ಕಾರಣವಾಗಿದೆಂದು ಆರೋಪಿಸಿದರು.
ದಲಿತ ಹಕ್ಕುಗಳ ಸಮಿತಿ ತಾಲೂಕಾಧ್ಯಕ್ಷ ಬಿ.ಎಲ್.ಈರಣ್ಣ ಅವರು ಮಾತನಾಡಿ ಈರಣ್ಣ ಮಾತನಾಡಿ ತಾಲೂಕಿನಲ್ಲಿ ಶಾಂತಿಗೆ ಭಂಗವುಂಟಾಗದಂತೆ ಪೋಲೀಸರು ಸೂಕ್ತ ತನಿಖೆ ಮಾಡಬೇಕೆಂದು ಒತ್ತಾಯಿಸಿದರು.
ದೇವದಾಸಿ ಮಹಿಳಾ ವಿಮೋಚನಾ ಸಂಘದ ತಾಲೂಕಾಧ್ಯಕ್ಷೆ ಕೆ.ಈರಮ್ಮ ಮಾತನಾಡಿ ಗಲಭೆಯ ನಂತರ ಪ್ರಕರಣ ದಾಖಲಿಸಲು ಪೋಲೀಸ್ ಇಲಾಖೆ ರಾತ್ರಿಯವರೆಗೂ ಹಿಂದೇಟು ಹಾಕಿದ್ದಕ್ಕೆ ಕಾರಣವೇನು?.
ಅವರನ್ನು ಹೀಗೆ ಬಿಟ್ಟರೆ ಈಗ ಒಂದು ಗ್ರಾಮದಲ್ಲಿ ಮಾಡಿದವರು ಇನ್ನೊಂದು ಗ್ರಾಮದಲ್ಲಿ ಗಲಭೆಗಳನ್ನು ಮಾಡುತ್ತಾ ಹೋಗುತ್ತಾರೆ. ಹಲ್ಲೆಗೈದವರ ಮೇಲೆ ಪೋಲೀಸ್ ಇಲಾಖೆ ಸೂಕ್ತ ಕ್ರಮ ಜರುಗಿಸಬೇಕೆಂದರು.
ಇದೇ ವೇಳೆ ಮುಖಂಡರಾದ ಹೆಚ್.ತಿಪ್ಪಯ್ಯ, ಹೆಚ್.ಬಿ.ಓಬಳೇಶ್ವರಪ್ಪ ಮಾತನಾಡಿದರು.
ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷೆ ಡಿ.ತರಂಗಿಣಿ, ತಾಲೂಕಾಧ್ಯಕ್ಷೆ ಮಂಗಮ್ಮ, ಇನ್ನಿತರ ಸಂಘಟನೆಗಳ ಮುಖಂಡರಿದ್ದರು.
ವರದಿ : ಶ್ರೀನಿವಾಸ ನಾಯ್ಕ




