——————————————————————-ಕಂದಹಳ್ಳಿ ಗ್ರಾಮದ ರಸ್ತೆ ಚರಂಡಿಗಳ ಅವ್ಯವಸ್ಥೆ
ಚಾಮರಾಜನಗರ :ಜಿಲ್ಲೆಯ ಯಳಂದೂರು ತಾಲೂಕಿನ ದುಗ್ಗಹಟ್ಟಿ ಗ್ರಾಪಂ ವ್ಯಾಪ್ತಿಯ ಕಂದಹಳ್ಳಿ ಗ್ರಾಮದಲ್ಲಿ ಸಮರ್ಪಕ ಚರಂಡಿ ಇಲ್ಲದಿರುವುದು ಹಲವು ಸಮಸ್ಯೆಗಳಿಗೆ ಕಾರಣವಾಗಿದೆ.

ಚಾಮರಾಜನಗರ, ಕೊಳ್ಳೆಗಾಲದ ಮುಖ್ಯ ರಸ್ತೆಯ NH-948 ರ ಕಂದಹಳ್ಳಿ ಗ್ರಾಮದಲ್ಲಿ ರಸ್ತೆಯ ಎಡ ಮತ್ತು ಬಲ ಭಾಗದಲ್ಲಿ ಐದು ವರ್ಷಗಳಿಂದ ಚರಂಡಿ ನಿರ್ಮಾಣವನ್ನು ಪೂರ್ಣಮಾಡದೇ ತಾರತಮ್ಯ ತೋರುತಿದ್ದಾರೆ.
ಗ್ರಾಮದ ಈ ಚರಂಡಿ ನೀರು ರಸ್ತೆ ಹಾಗೂ ತೆಗ್ಗುಗಳಲ್ಲಿ ಸಂಗ್ರಹವಾಗುತ್ತಿದ್ದು, ಸೊಳ್ಳೆಗಳ ವಾಸಸ್ಥಾನವಾಗಿ ಮಾರ್ಪಟ್ಟು ಚಿಕನ್ ಗುನ್ಯಾ, ಡೇಘು, ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಜನರನ್ನು ಕಾಡುತ್ತಿದೆ.
ನಾಯಕ ಸಮುದಾಯದ ಹೆಬ್ಬಾಗಿಲಿನ ಮುಂಬಾಗ ಹಾಗೂ ಗ್ರಾಮದ ಶಾಂತರಾಜು, ಬಸವರಾಜು, ಎಂಬುವರ ಮನೆ ಮುಂಭಾಗ ಚರಂಡಿ ಕಾಮಗಾರಿ ಅರ್ಧಕ್ಕೆ ನಿಂತ ಪರಿಣಾಮ ಹೊಲಸು ನೀರು ಮುಂದೆ ಸಾಗದೆ ಅಲ್ಲಿಯೇ ನಿಂತು ಗಬ್ಬು ವಾಸನೆ ಬೀರುತ್ತಿದೆ. ಜೊತೆಗೆ ಸೊಳ್ಳೆಗಳ ಕಾಟದಿಂದ ಸುತ್ತಲಿನ ಮನೆಗಳ ಜನರು ಬೇಸತ್ತಿದ್ದಾರೆ.
ಚರಂಡಿಗಳಿಲ್ಲದ ಕಾರಣ ಕೆಲ ತಿಂಗಳ ಹಿಂದೆ ವಿಷ ಜಂತುಗಳು ಉತ್ಪತ್ತಿಯಾಗಿ ರೋಗಗಳು ಹರಡಿ ಹಲವರು ಕಾಯಿಲೆಯಿಂದ ಬಳಲಿದ್ದಾರೆ.. ಆದರೆ ಚರಂಡಿ ನಿರ್ಮಾಣ ಈಗ ಅರ್ಧಕ್ಕೆ ನಿಂತಿರುವುದು ಸಮಸ್ಯೆಗೆ ಕಾರಣವಾಗುತ್ತಿದೆ.
ಗ್ರಾಪಂ ಅಧಿಕಾರಿಗಳಿಗೆ ಈ ಕುರಿತು ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಗ್ರಾಪಂ ಆಡಳಿತ ಮಂಡಳಿ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
ಕೂಡಲೇ ಚರಂಡಿ ಕಾಮಗಾರಿಯನ್ನು ಸಂಬಂಧ ಪಟ್ಟ ಅಧಿಕಾರಿಗಳು ಪೂರ್ಣಗೊಳಿಸಿ ನೆಮ್ಮದಿ ಜೀವನ ಸಾಗಿಸಲು ಅನುವು ಮಾಡಿಕೊಡಬೇಕು. ಇಲ್ಲದಿದ್ದರೆ ಚಾಮರಾಜನಗರ, ಕೊಳ್ಳೆಗಾಲದ ಮುಖ್ಯ ರಸ್ತೆಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಕಂದಹಳ್ಳಿ ಗ್ರಾಮದ ರಮೇಶ್ , ಶಂಕರ್ ನಾಯಕ, ನಂಜುಂಡ ನಾಯಕ, ಮಹದೇವ ನಾಯಕ, ದೀಪಕ್, ಮಲ್ಲೇಶ, ಮಹೇಶ್, ಸೇರಿದಂತೆ ಮತ್ತಿತರರು ಆಗ್ರಹಿಸಿದ್ದಾರೆ.
ವರದಿ: ಸ್ವಾಮಿ ಬಳೇಪೇಟೆ




