ಕಾರವಾರ(ಉತ್ತರ ಕನ್ನಡ): “ಬಿಜೆಪಿಯಲ್ಲಿ ಜಿಲೇಬಿ ತಿನ್ನುವವರು ತಿನ್ನುತ್ತಲೇ ಇದ್ದಾರೆ. ಜೈಲಿಗೆ ಹೋಗುವವರು ಹೋಗುತ್ತಲೇ ಇದ್ದಾರೆ” ಎಂದು ಶಾಸಕ ಶಿವರಾಮ್ ಹೆಬ್ಬಾರ್ ಅಸಮಾಧಾನ ವ್ಯಕ್ತಪಡಿಸಿದರು.
ಕಾರವಾರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಬಿಜೆಪಿ ಹೈಕಮಾಂಡ್ ನೀಡಿರುವ ನೋಟಿಸ್ ನಿನ್ನೆ(ಮಂಗಳವಾರ) ರಾತ್ರಿ ನನಗೆ ತಲುಪಿದೆ. ಅವರು ಕೇಳಿದ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಅವರು ಕೊಟ್ಟ ಕ್ರಮದಲ್ಲಿಯೇ ವಾಪಸ್ ಕಳುಹಿಸುತ್ತೇನೆ. ನಾವು ಯಾವುದೇ ಅಪರಾಧ ಮಾಡಿಲ್ಲ. ಯಾವುದೇ ಪಕ್ಷ ವಿರೋಧಿ ಕೆಲಸ ಮಾಡಿಲ್ಲ. ಆದರೆ ಪರವಾಗಿ ಕೆಲಸ ಮಾಡದೆ ಇರಬಹುದು, ಅದಕ್ಕೆ ಹಲವು ಕಾರಣಗಳಿವೆ” ಎಂದರು.
“ನಾವೇನೂ ಕಾಂಗ್ರೆಸ್ ಸಭೆಯಲ್ಲಿ ಭಾಗವಹಿಸಿಲ್ಲ ಅಥವಾ ಯಾವುದೇ ಪಕ್ಷದ ವಿರುದ್ಧ ಹೇಳಿಕೆ ಕೂಡ ನೀಡಿಲ್ಲ. ಪಕ್ಷದಿಂದಾದ ಅನ್ಯಾಯದ ಬಗ್ಗೆ ಕೇಳಿದಾಗ ಪತ್ರದ ಮೂಲಕವೇ ತಿಳಿಸಿದ್ದೇನೆ. ಈ ಪರಿಸ್ಥಿತಿಗೆ ಆ ನೋವುಗಳೇ ಕಾರಣ. ಯಾರು ಇದಕ್ಕೆ ಪ್ರಚೋದನೆ ನೀಡಿದ್ದಾರೋ ಆ ನಾಯಕರಿಗೆ ಏನೂ ಮಾಡಿಲ್ಲ. ಇವರು ಪಕ್ಷದ ಅಧ್ಯಕ್ಷರಿಗೆ, ನಾಯಕರಿಗೆ ಎಲ್ಲ ರೀತಿಯಿಂದಲೂ ಬೈದರೂ ಅವರ ಮೇಲೆ ಏನೂ ಕ್ರಮವಾಗಿಲ್ಲ” ಎಂದು ಹೇಳಿದರು.
“ರೇಣುಕಾಚಾರ್ಯ ಅವರು ಯಾರನ್ನು ಗೌರವಿಸಬೇಕು, ಯಾರನ್ನು ಬದುಕಿಸಬೇಕು ಎಂದು ರಸ್ತೆ ಮೇಲೆ ಬೈದಾಡಿದರೂ ಅವರ ಮೇಲೆ ಯಾವುದೇ ಕ್ರಮವಾಗಿಲ್ಲ. ಜೈ ಹಾಕುವವನೇ ಬೇರೆ, ಜಿಲೇಬಿ ತಿನ್ನುವವನೇ ಬೇರೆ. ಅವರೆಲ್ಲರೂ ಜಿಲೆಬಿ ತಿನ್ನುತ್ತಲೇ ಇದ್ದಾರೆ. ಜೈಲಿಗೆ ಹೋಗುವವರು ಹೋಗುತ್ತಲೇ ಇರುವುದು ಇವತ್ತಿನ ಸ್ಥಿತಿ” ಎಂದ ಹೆಬ್ಬಾರ್, ಯತ್ನಾಳ್ ಬಗ್ಗೆ ಕೇಳಿದಾಗ, “ಬೇರೆಯವರ ಬಗ್ಗೆ ನಾನು ಮಾತನಾಡುವುದಿಲ್ಲ. ವಾಸ್ತವ ಎಲ್ಲರಿಗೂ ಗೊತ್ತಿದೆ” ಎಂದಷ್ಟೇ ತಿಳಿಸಿದರು.