ಧಾರವಾಡ :ಕರ್ನಾಟಕ ಉಚ್ಛ ನ್ಯಾಯಾಲಯ, ಧಾರವಾಡ ವಿಭಾಗೀಯ ಪೀಠ ಸುಮಾರು 145 ವರ್ಷಗಳ ಹಳೆಯ ವಿವಾದ ಇತ್ಯರ್ಥವಾಯಿತು.
ಧಾರವಾಡ 1991 ರಂದು ವಾದಿಯು ಪ್ರತಿವಾದಿಯವರ ವಿರುದ್ಧ ಅಸಲು ದಾವೆ (ಸಂಖ್ಯೆ:17/1991) ಯನ್ನು ಹಿರಿಯ ದಿವಾಣಿ ನ್ಯಾಯಾಲಯ ಅಥಣಿಯಲ್ಲಿ ದಾಖಲಿಸಿದ್ದರು. ಸದರಿ ದಾವೆಯಲ್ಲಿ ಪ್ರತಿವಾದಿಯು ತಮ್ಮ ಕುಟುಂಬದಲ್ಲಿ 1880 ನೇ ಇಸವಿಯಲ್ಲಿಯೇ ಕುಟುಂಬದ ಆಸ್ತಿಗಳ ವಿಭಾಗವಾಗಿದೆ ಹಾಗೂ ಇದೇ ಕುಟುಂಬದ ಆಸ್ತಿಗಳ ಬಗ್ಗೆ ಈ ದಾವೆಯ ಪ್ರತಿವಾದಿ ನಂ.1 ಇವರ ಅಜ್ಜನವರು ವಾದಿಯ ಮಾವನವರ ವಿರುದ್ದ 1898 ರಲ್ಲಿ ಅಥಣಿ ಸಿವಿಲ್ ಜಡ್ಜ್ ಜೂನಿಯರ ಡಿವಿಜನ್ ನ್ಯಾಯಾಲಯದಲ್ಲಿ ಸಹ ಕೆಲವು ಜಮೀನುಗಳ ಬಗ್ಗೆ ದಾವೆಯು ದಾಖಲಾಗಿ ಪ್ರತಿವಾದಿಯ ಅಜ್ಜನ ಪರವಾಗಿ ನಿಕಾಲಿಯಾಗಿತ್ತು ಎಂಬ ವಾದವನ್ನು ಮಂಡಿಸಿದ್ದರು.
ವಾದಿ ಮತ್ತು ಪ್ರತಿವಾದಿಯವರ ಹೇಳಿಕೆಗಳನ್ನು ಮತ್ತು ದಾಖಲಾತಿಗಳನ್ನು ಪರಮಾರ್ಶಿಸಿ ಹಿರಿಯ ದಿವಾಣಿ ನ್ಯಾಯಾಲಯ ಅಥಣಿ ನ್ಯಾಯಾದೀಶರು ಪ್ರತಿವಾದಿಯವರ ವಾದವನ್ನು ತಿರಸ್ಕರಿಸಿ ಅಸಲು ದಾವೆ (ಸಂಖ್ಯೆ:17/1991) ಯನ್ನು ನವೆಂಬರ್ 26, 2004 ರಂದು ವಾದಿಯ ಪರವಾಗಿ ಇತ್ಯರ್ಥಪಡಿಸಿತ್ತು.
ಈ ಅಸಲು ದಾವೆಯ ತೀರ್ಪನ್ನು ಪ್ರಶ್ನಿಸಿ, 2005 ರಂದು ಪ್ರತಿವಾದಿಯವರು ವಾದಿಯವರ ವಿರುದ್ದ ಉಚ್ಛ-ನ್ಯಾಯಾಲದಲ್ಲಿ (ಆರ.ಎಫ್.ಎ ಸಂಖ್ಯೆ 246/2005 ಮತ್ತು ಆರ್.ಎಫ್.ಎ ಸಂಖ್ಯೆ 414/2005 ರ) ಮೇಲ್ಮನವಿಗಳನ್ನು ದಾಖಲಿಸಲಾಗಿತ್ತು.
ಈ ವ್ಯಾಜ್ಯವು ಮೂರು ತಲೆಮಾರುಗಳಿಂದ ಬಗೆಹರಿಯದೆ ಇರುವುದನ್ನು ಗಮನಿಸಿದ ವಿಭಾಗೀಯ ಪೀಠದ ನ್ಯಾಯಮೂರ್ತಿ ಅಶೋಕ ಎಸ್. ಕಿಣಗಿ ಮತ್ತು ಉಮೇಶ.ಎಮ್.ಅಡಿಗ ಅವರು ಉಭಯ ಪಕ್ಷಗಾರರಿಗೆ ಅವರ ವಕೀಲರ ಸಮಕ್ಷಮ ಸಾಕಷ್ಟು ತಿಳುವಳಿಕೆ ನೀಡಿ, ರಾಜಿ ಸಂಧಾನ ಮಾಡಿಕೊಂಡು ಪ್ರಕರಣವನ್ನು ಇತ್ಯರ್ಥಪಡಿಸಿಕೊಳ್ಳುವಂತೆ ಸೂಚಿಸಿದ್ದರು.
ಅದರಂತೆ ಜನವರಿ 25, 2025 ರಂದು ವಿಭಾಗೀಯ ಪೀಠದ ಮುಂದೆ ಉಭಯ ಪಕ್ಷಗಾರರು ತಮ್ಮ ವಕೀಲರ ಮೂಲಕ ರಾಜಿ ಸಂಧಾನಕ್ಕೆ ಒಪ್ಪಿಕೊಂಡ ಆಧಾರದ ಮೇಲೆ ಸದರಿ ಪ್ರಕರಣಗಳನ್ನು ಅತ್ಯಂತ ಸರಳ ರೀತಿಯಲ್ಲಿ ಇತ್ಯರ್ಥಗೊಳಿಸಿಲಾಯಿತು.
ಈ ಮೂಲಕ ಸುಮಾರು 145 ವರ್ಷಗಳಿಂದ ಕುಟುಂಬದಲ್ಲಿ ಇದ್ದ ಅತ್ಯಂತ ಹಳೆಯ ವಿವಾದವನ್ನು ಸರಳ ರೀತಿಯಲ್ಲಿ ಬಗೆಹರಿಸಿರುವುದು ಒಂದು ಹೆಗ್ಗಳಿಕೆ. ಈ ಪ್ರಕರಣದಲ್ಲಿ ವಾದಿಗಳ ನ್ಯಾಯವಾದಿ ಜಿ. ಬಾಲಕೃಷ್ಣ ಶಾಸ್ತ್ರಿ ಅವರ ಪರವಾಗಿ ವಕೀಲ ಚೇತನ ಮುನವಳ್ಳಿ ಮತ್ತು ಪ್ರತಿವಾದಿಗಳ ನ್ಯಾಯವಾದಿಗಳಾದ ಆನಂದ ಆರ. ಕೊಳ್ಳಿ ಹಾಗೂ ಸೌರಭ ಎ. ಸಂಡೂರ ಅವರು ಹಾಜರಾಗಿದ್ದರು.
ಹೀಗಾಗಿ, ಎಷ್ಟೇ ಹಳೆಯದಾದ ವಿವಾದಗಳಿದ್ದರೂ ನ್ಯಾಯಾಲಯದಲ್ಲಿ ಕಾನೂನು ಅಡಿಯಲ್ಲಿ ರಾಜಿ ಮಾಡಿಕೊಳ್ಳಬಹುದಾದ ಪ್ರಕರಣಗಳನ್ನು ಇತ್ಯರ್ಥಗೊಳಿಸಿಕೊಂಡರೆ ವ್ಯಾಜ್ಯಗಳಿಂದ ಮುಕ್ತವಾದ ಜೀವನವನ್ನು ನಡೆಸಬಹುದೆಂಬುದಕ್ಕೇ ಈ ಪ್ರಕರಣವು ಒಂದು ನಿದರ್ಶನವಾಗಿದೆ.
ನ್ಯಾಯಾಲಯದಲ್ಲಿ ಬಾಕಿ ಇರುವ ಎಲ್ಲಾ ಪ್ರಕರಣಗಳಲ್ಲಿ ಕಾನೂನು ಅಡಿಯಲ್ಲಿ ರಾಜಿ ಮಾಡಿಕೊಳ್ಳಬಹುದಾದ ಪ್ರಕರಣಗಳನ್ನು ಕಾನೂನು ಸೇವಾ ಸಮಿತಿಗಳ ಮೂಲಕ ನಡೆಸಲಾಗುವ ಲೋಕ ಅದಾಲತ ಮೂಲಕ ಸಹ ರಾಜಿ ಮಾಡಿಕೊಳ್ಳಬಹುದು. ಇದಲ್ಲದೆ ಕಾನೂನು ಸೇವಾ ಸಮಿತಿಗಳ ಮೂಲಕ ನೇಮಕಗೊಂಡ ಮಧ್ಯಸ್ಥಿಕೆಗಾರರ ಮೂಲಕ ಸಹ ಅವರ ಮಾರ್ಗದರ್ಶನಲ್ಲಿಯೂ ಪ್ರಕರಣಗಳನ್ನು ಯಾವಾಗಲೂ ರಾಜಿ ಮಾಡಕೊಳ್ಳಬಹುದಾಗಿದೆ.
ಮುಂದಿನ ಲೋಕ ರಾಷ್ಟ್ರೀಯ ಲೋಕ ಅದಾಲತನ್ನು ಮಾರ್ಚ 8, 2025 ರಂದು ದೇಶದ್ಯಾದಂತ ತಾಲೂಕು, ಜಿಲ್ಲಾ ಮಟ್ಟದಿಂದ ಹಾಗೂ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹಮ್ಮಿಕೊಳ್ಳಲಾಗಿದ್ದು ಕಕ್ಷಿಗಾರರು ಇದರ ಸದುಪಯೋಗವನ್ನು ಪಡೆಯಬಹುದಾಗಿದೆ ಎಂದು ಧಾರವಾಡ ಪೀಠದ ಉಚ್ಛ ನ್ಯಾಯಾಲಯ ಕಾನೂನು ಸೇವಾ ಸಮಿತಿಯ ಕಾರ್ಯದರ್ಶಿಗಳು ಮತ್ತು ನ್ಯಾಯಾಂಗ ಅಧೀಕ ವಿಲೇಖನಾಧಿಕಾರಿ ಜೆರಾಲ್ಡ್ ರುಡಾಲ್ಫ್ ಮೆಂಡೋನ್ಸಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ: ವಿನಾಯಕ ಗುಡ್ಡದಕೇರಿ




