ತುರುವೇಕೆರೆ: ತಾಲೂಕಿನ ಕೊಡಗೀಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಜಯಗಳಿಸಿದ ನೂತನ ನಿರ್ದೇಶಕರುಗಳು ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿದ್ದಲಿಂಗಪ್ಪ ನೇತೃತ್ವದಲ್ಲಿ ಸಹಕಾರ ಇಲಾಖೆ ಸಚಿವ ಕೆ.ಎನ್.ರಾಜಣ್ಣ ಅವರನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದ್ದಲ್ಲದೆ ಸಂಘದ ಅಭಿವೃದ್ದಿಗೆ ನೆರವು ಕೋರಿದರು.
ನೂತನ ನಿರ್ದೇಶಕರನ್ನು ಅಭಿನಂದಿಸಿ ಮಾತನಾಡಿದ ಸಹಕಾರ ಇಲಾಖೆ ಸಚಿವ ಕೆ.ಎನ್. ರಾಜಣ್ಣ, ಸಹಕಾರ ಸಂಘಗಳು ಕೃಷಿಕರ ಬೆನ್ನೆಲುಬಾಗಿದೆ. ಸಹಕಾರ ಸಂಘ ಉಳಿದಲ್ಲಿ ಕೃಷಿಕರಿಗೆ ಅನುಕೂಲವಾಗಲಿದೆ, ಕೃಷಿ ಕ್ಷೇತ್ರ ಸರ್ವತೋಮುಖ ಅಭಿವೃದ್ದಿಯಾಗಲಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಹಕಾರ ಸಂಘಗಳ ಸುಸ್ಥಿರತೆಗೆ, ಬಲವರ್ಧನೆಗೆ ಶ್ರಮಿಸಬೇಕು ಎಂದರು.
ಸಹಕಾರಿ ಸಂಘದ ಚುನಾವಣೆಯಲ್ಲಿ ಜಯಗಳಿಸಿರುವವರು ಯಾವುದೋ ಒಂದು ಪಕ್ಷದ ಕಾರ್ಯಕರ್ತರಾಗಿರಬಹುದು, ಆದರೆ ಸಹಕಾರ ಸಂಘದ ಕಾರ್ಯನಿರ್ವಹಣೆ ಜಾತ್ಯಾತೀತ ಹಾಗೂ ಪಕ್ಷಾತೀತವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ಅರ್ಹ ಫಲಾನುಭವಿಗೆ ಸಂಘದ ನೆರವು ದೊರೆಯುವಂತಾಗಬೇಕು. ಸಂಘದ ಸದಸ್ಯತ್ವ ಹೆಚ್ಚಿಸುವ ಮೂಲಕ ಸಹಕಾರಿ ಸಂಘದ ಬಲವರ್ಧನೆಗೆ ಮುಂದಾಗಬೇಕೆಂದು ಸಲಹೆ ನೀಡಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಕೊಡಗೀಹಳ್ಳಿ ಸಿದ್ದಲಿಂಗಪ್ಪ ಮಾತನಾಡಿ, ತುರುವೇಕೆರೆ ತಾಲ್ಲೂಕಿನ ಸಹಕಾರಿ ಸಂಘಗಳ ಪ್ರಗತಿಯಲ್ಲಿ ಸಚಿವ ಕೆ.ಎನ್.ರಾಜಣ್ಣನವರ ಪಾತ್ರ ಬಹಳಷ್ಟಿದೆ. ನಷ್ಟದ ಸುಳಿಯಲ್ಲಿ ಸಿಲುಕಿದ್ದ ಸಂಘಗಳನ್ನು ಲಾಭದೆಡೆಗೆ ಮುಖಮಾಡಲು, ಕೃಷಿಕರಿಗೆ ಸಂಘದ ಮೂಲಕ ಅಗತ್ಯ ಅನುಕೂಲಗಳನ್ನು ಕಲ್ಪಿಸಲು ಕೆ.ಎನ್.ರಾಜಣ್ಣನವರು ನೀಡಿದ ಕೊಡುಗೆ ಅಪಾರವಾದುದು ಎಂದು ಸ್ಮರಿಸಿದರು.
ನಂತರ ಕೊಡಗೀಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ, ತಂಡದ ಗೆಲುವು, ಸಂಘದ ಬೆಳವಣಿಗೆಯ ಬಗ್ಗೆ ಸಚಿವರಿಗೆ ಮಾಹಿತಿ ನೀಡಿ, ಸಂಘದ ಸರ್ವತೋಮುಖ ಪ್ರಗತಿಯಲ್ಲಿ ಸಚಿವರ ನೆರವನ್ನು ಕೋರಿದರು. ಕೊಡಗೀಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ನಿರ್ದೇಶಕರುಗಳು ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಅವರಿಗೆ ಬೃಹತ್ ಹಾರ ಹಾಕಿ, ಮೈಸೂರು ಪೇಟ ತೊಡಿಸಿ ಶಾಲು ಹೊದಿಸುವ ಮೂಲಕ ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಪ್ರಸನ್ನಕುಮಾರ್, ಗ್ರಾಪಂ ಸದಸ್ಯ ಹಾವಾಳ ರವಿ, ಮುಖಂಡ ಕೊಟ್ಟೂರನಕೊಟ್ಟಿಗೆ ಗೋವಿಂದರಾಜು, ಕೊಡಗೀಹಳ್ಳಿ ಸಹಕಾರ ಸಂಘದ ನೂತನ ನಿರ್ದೇಶಕರುಗಳು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್




