ಹುಕ್ಕೇರಿ : ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ ಮನುಷ್ಯತ್ವವೇ ಮರೆತ ಘಟನೆಯೊಂದು ಬೆಳಕಿಗೆ ಬಂದಿದೆ. ಸತ್ತ ಮೇಲೆ ನೆಮ್ಮದಿಯಾಗಿ ಮಲಗಲು ಸರ್ಕಾರ ಕೊಟ್ಟ ಜಾಗವನ್ನೂ ಬಿಡದ ಭೂಗಳ್ಳರು, ಸ್ಮಶಾನವನ್ನೇ ಲೂಟಿ ಮಾಡುತ್ತಿದ್ದಾರೆ. ಹೌದು, ಇದು ಬಾಡ ಗ್ರಾಮದ ದಲಿತರ ರುದ್ರಭೂಮಿಯಲ್ಲಿ ನಡೆಯುತ್ತಿರುವ ಅಟ್ಟಹಾಸ!
ಇಲ್ಲಿ ನೋಡಿ, ಇದು ಬಾಡ ಗ್ರಾಮದ ದಲಿತರಿಗಾಗಿ ಮೀಸಲಿಟ್ಟ ರುದ್ರಭೂಮಿ. ಆದರೆ ಇಲ್ಲಿ ಈಗ ಶಾಂತಿ ಇಲ್ಲ, ಬದಲಾಗಿ ಜೆಸಿಬಿಯ ಘರ್ಜನೆ ಕೇಳುತ್ತಿದೆ. ಗುಂಡೂರಾವ್ ಈಶ್ವರ್ ಅಕ್ಕೊಳೆ ಎಂಬ ವ್ಯಕ್ತಿ, ದಲಿತರ ಸ್ಮಶಾನ ಭೂಮಿಯನ್ನು ಅಗೆದು ಅಲ್ಲಿನ ಮಣ್ಣು ಮತ್ತು ಕಡಕನ್ನು ಟ್ರ್ಯಾಕ್ಟರ್ಗಳ ಮೂಲಕ ಅಕ್ರಮವಾಗಿ ಸಾಗಿಸುತ್ತಿದ್ದಾನೆ.
ಸರ್ಕಾರ ದಲಿತರಿಗಾಗಿ ಈ ಭೂಮಿಯನ್ನು ನೀಡಿದ್ದರೆ, ಭೂಗಳ್ಳರು ಮಾತ್ರ ಇದನ್ನೇ ಬಂಡವಾಳ ಮಾಡಿಕೊಂಡಿದ್ದಾರೆ. ಸತ್ತವರ ಆತ್ಮಕ್ಕೆ ಗೌರವ ಕೊಡಬೇಕಾದ ಜಾಗದಲ್ಲಿ ಮಣ್ಣಿನ ವ್ಯಾಪಾರ ನಡೆಯುತ್ತಿದೆ. ಈ ಅಕ್ರಮಕ್ಕೆ ಶಕ್ತಿ ತುಂಬುತ್ತಿರುವ ಆ “ಅದೃಶ್ಯ ಕೈಗಳು” ಯಾರದ್ದು ಎಂಬ ಪ್ರಶ್ನೆ ಈಗ ಕಾಡುತ್ತಿದೆ.
ಇಷ್ಟೆಲ್ಲಾ ನಡೆಯುತ್ತಿದ್ದರೂ ಸ್ಥಳೀಯ ಆಡಳಿತ ಮಾತ್ರ ಕುರುಡಾಗಿದೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾದ ವಿ. ನಾಗರಾಜು ಅವರ ಗಮನಕ್ಕೆ ತಂದರೂ, “ಇದು ನಮಗೆ ಸಂಬಂಧವಿಲ್ಲ, ಬೇರೆ ಇಲಾಖೆಗೆ ಸೇರಿದ್ದು” ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುವ ಇಂತಹ ಅಕ್ರಮ ತಡೆಯುವುದು ಪಿಡಿಒ ಹೊಣೆ ಅಲ್ವಾ? ಎಂಬುದು ಸಾರ್ವಜನಿಕರ ಆಕ್ರೋಶ.
ಬಾಡ ಗ್ರಾಮದ ದಲಿತರಿಗೆ ನ್ಯಾಯ ಸಿಗಬೇಕಿದೆ. ಪಿಡಿಒ ವಿ. ನಾಗರಾಜು ಅವರು ಕೂಡಲೇ ಎಚ್ಚೆತ್ತುಕೊಂಡು, ಈ ಭೂಮಿಯನ್ನು ರಕ್ಷಿಸಿ, ಅಕ್ರಮ ಎಸಗುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳ್ಳುವ ಎಚ್ಚರಿಕೆ ನೀಡಲಾಗಿದೆ.
ವರದಿ : ರಾಜು ಮುಂಡೆ




