ನಂಬಿ ಕೊಟ್ಟ ಸಾಲ ವಾಪಸ್ ಬಾರದಿದ್ದಕ್ಕೆ ಮನನೊಂದ ಕೊಡಗಿನ ಉದ್ಯಮಿಯೊಬ್ಬರು ತನ್ನ ಕುಟುಂಬದೊಂದಿಗೆ ಕಾರಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಭೀಕರ ಘಟನೆ ಕೇರಳದ ವಯನಾಡಿನಲ್ಲಿ ನಡೆದಿದೆ. ಈ ದುರ್ಘಟನೆಯಲ್ಲಿ ಉದ್ಯಮಿ ಸಾವನ್ನಪ್ಪಿದ್ದು, ಪತ್ನಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಕೊಡಗು ಮೂಲದ ಉದ್ಯಮಿ ಸಜೀರ್, ಕೇರಳದ ವಯನಾಡ್ ನಿವಾಸಿ ಬಾಪು ಎಂಬುವವರಿಗೆ ಸುಮಾರು 20 ಲಕ್ಷ ರೂಪಾಯಿ ಸಾಲ ನೀಡಿದ್ದರು ಎನ್ನಲಾಗಿದೆ. ಆದರೆ, ಸಾಲ ಪಡೆದಿದ್ದ ಬಾಪು ಹಣವನ್ನು ವಾಪಸ್ ನೀಡದೆ ಸಜೀರ್ ಅವರಿಗೆ ಹಲವು ತಿಂಗಳಿನಿಂದ ಸತಾಯಿಸುತ್ತಿದ್ದ ಎನ್ನಲಾಗಿದೆ.
ಇದರಿಂದ ಕಂಗಾಲಾಗಿದ್ದ ಸಜೀರ್, ಹಣ ವಾಪಸ್ ಪಡೆಯಲು ಅಂತಿಮ ಪ್ರಯತ್ನವಾಗಿ ಕುಟುಂಬ ಸಮೇತ ಬಾಪು ನಿವಾಸಕ್ಕೆ ತೆರಳಿದ್ದರು.ಸಾಲಗಾರ ಬಾಪು ಅವರ ಮನೆ ಎದುರೇ ಉದ್ಯಮಿ ಸಜೀರ್ ಈ ನಿರ್ಧಾರ ಕೈಗೊಂಡಿದ್ದಾರೆ.
ಕಾರಿಗೆ ಬೆಂಕಿ : ವಯನಾಡಿನ ಕಲ್ಪೆಟ್ಟಾದಲ್ಲಿರುವ ಬಾಪು ಅವರ ಮನೆ ಮುಂದೆ ಕಾರನ್ನು ನಿಲ್ಲಿಸಿದ ಸಜೀರ್, ಪತ್ನಿ ಮತ್ತು ಮಕ್ಕಳಿದ್ದ ಕಾರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದಾರೆ.
ಮಕ್ಕಳ ರಕ್ಷಣೆ: ಕಾರಿನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಎಚ್ಚೆತ್ತ ಸ್ಥಳೀಯರು ತಕ್ಷಣ ಧಾವಿಸಿ ಬಂದಿದ್ದಾರೆ. ಸಮಯ ಪ್ರಜ್ಞೆ ಮೆರೆದ ಜನರು ಕಾರಿನಲ್ಲಿದ್ದ ಮಕ್ಕಳನ್ನು ಹರಸಾಹಸ ಪಟ್ಟು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದು, ದೊಡ್ಡ ಅನಾಹುತವೊಂದು ತಪ್ಪಿದೆ. ದುರದೃಷ್ಟವಶಾತ್ ತೀವ್ರವಾಗಿ ಸುಟ್ಟ ಗಾಯಗಳಾಗಿದ್ದ ಸಜೀರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ ಸಜೀರ್ ಅವರ ಪತ್ನಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.
ಸ್ಥಳಕ್ಕೆ ಭೇಟಿ ನೀಡಿದ ಕೇರಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಾಲಗಾರ ಬಾಪು ಅವರು ನೀಡುತ್ತಿದ್ದ ಕಿರುಕುಳವೇ ಈ ಆತ್ಮಹತ್ಯೆಗೆ ಪ್ರೇರಣೆಯೇ ಎಂಬ ನಿಟ್ಟಿನಲ್ಲಿ ತನಿಖೆ ಆರಂಭಿಸಿದ್ದಾರೆ. ಕೊಡಗು ಮತ್ತು ವಯನಾಡ್ ಗಡಿ ಭಾಗದಲ್ಲಿ ಈ ಘಟನೆ ತೀವ್ರ ಸಂಚಲನ ಮೂಡಿಸಿದೆ.




