ಚಿಕ್ಕಮಗಳೂರು: ಆಧುನಿಕ ಶಿಕ್ಷಣ ಪದ್ದತಿ ವಿದ್ಯಾರ್ಥಿಗಳನ್ನು ಯಂತ್ರಗಳಂತೆ ಸಿದ್ದ ಪಡಿಸುತ್ತಿದೆ. ವಿದ್ಯಾರ್ಥಿಗಳಲ್ಲಿರುವ ಕಲೆಯನ್ನು ಪೋಷಿಸುವ ಕಾರ್ಯ ನಡೆಯಬೇಕು. ಈ ನಿಟ್ಟಿನಲ್ಲಿ ಸಂಘಟನೆ ಕಾರ್ಯಪ್ರವೃತ್ತವಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.
ನಗರದ ಹೇಮಾಂಗಣ ಸಭಾಂಗಣದಲ್ಲಿ ಸೋಮವಾರ ನಡೆದ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ, ಬೆಂಗಳೂರು ಇವರ ನೂತನ ಚಿಕ್ಕಮಗಳೂರು ಘಟಕದ ಪದ ಪ್ರಧಾನ ಹಾಗೂ ಯುವ ಸಾಧಕ ರಿಗೆ ಪುರಸ್ಕಾರ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
1999ರಲ್ಲಿ 70000 ಕ್ಕಿಂತ ಹೆಚ್ಚು ಯುವಕ ಸಂಘಗಳಿದ್ದವು, ಆದರಿಂದು 2-3 ಸಾವಿರ ಯುವಕ ಸಂಘಗಳಿವೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ನೊಂದಣಿ ಕಾಯ್ದೆ ಕಡ್ಡಾಯ ಮಾಡಿದ ಪರಿಣಾಮ ಯುವ ಸಂಘಗಳು ಕ್ಷೀಣಿಸಿವೆ. ಸ್ಥಿರ ನಿಧಿಯನ್ನು ನೀಡದಿರುವ ಕಾರಣ ಸಂಘಗಳಿಗೆ ಯಾವ ಪ್ರಯೋಜನವಿಲ್ಲ, ಈ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪಿಸುವೆ ಎಂದು ಭರವಸೆ ನೀಡಿದರು.
ಕಲೆಯನ್ನೇ ಆರಾಧಿಸಿ ಬದುಕಿದ ಹಲವಾರು ಕಲಾವಿದರಿಗೆ ಮಾಸಾಶನ ಸರಿಯಾಗಿ ಬರುತ್ತಿಲ್ಲ. ಕೂಡಲೇ ಇದರತ್ತ ಗಮನ ಹರಿಸಿ ಅವರ ವೃದ್ಧಾಪ್ಯಕಾಲದಲ್ಲಿ ಸರ್ಕಾರ ಮಾಶಾಸನ ನೀಡಿ ನೆರವಾಗಬೇಕು. ಕಲೆಯನ್ನು ನಂಬಿಕೊಂಡು ಬದುಕು ಸಾಗಿಸುವ ಕಲಾವಿದರಿಗೆ ಸ್ಪಂದಿಸುವ ಜೊತೆಗೆ ಆರ್ಥಿಕ ಶಕ್ತಿ ತುಂಬಲು ಮಾಶಾಸನದ ಅವಶ್ಯಕತೆಯಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಜ್ಯ ಯುವ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ ಡಾ ಜಾನಪದ ಬಾಲಾಜಿ ಇತ್ತೀಚಿನ ದಿನಗಳಲ್ಲಿ ರಾಜ್ಯದ ಯುವಜನ ಮೇಳಗಳು, ರಾಜ್ಯ ಜಿಲ್ಲಾ ಯುವ ಪ್ರಶಸ್ತಿಗಳು, ಯುವ ಸಂಪರ್ಕ ಸಭೆಗಳು, ಸಂಘಗಳ ಕ್ರೀಡಾ ಹಾಗೂ ಸಾಂಸ್ಕೃತಿಕ ಸಾಮಗ್ರಿಗಳ ಯೋಜನೆ, ಗರುಡಿ ಮನೆ ಉಪಕರಣಗಳು ನೀಡು ವುದನ್ನು ಸರ್ಕಾರ ಪುನರಾರಂಭಿಸಬೇಕು ಎಂದರು.
ಕರವೇ ಜಿಲ್ಲಾಧ್ಯಕ್ಷ ಕೆಂಪನಹಳ್ಳಿ ಅಶೋಕ್ ಮಾತನಾಡಿ ಕನ್ನಡ ಮತ್ತು ಕರ್ನಾಟಕದ ಹಿರಿಮೆಯನ್ನು ಜಾಗೃತಿ ಮೂಡಿಸುವ ಕಾಲಘಟ್ಟಕ್ಕೆ ಬಂದಿದ್ದೇವೆ. ಕನ್ನಡ ಎಂದಿಗೂ ಜೀವಂತವಾಗಿರಲಿದೆ ಎಂದರು.
ಇದೇ ವೇಳೆ ಒಕ್ಕೂಟದ ನೂತನ ಜಿಲ್ಲಾಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗೆ ಮಾಜಿ ಸಚಿವರಾದ ಸಿ.ಟಿ.ರವಿ ಪದಪತ್ರ ವಿತರಿಸಿದರು. ತಾಲೂಕಿನ ಯುವ ಸಂಘಟಕ ಹೇಮಂತ್ ಕುಮಾರ್ ಹಾಗೂ ಮೂಡಿಗೆರೆ ಯುವ ಕಲಾವಿದೆ ಶುಭಾ ಹೊಸಕೆರೆ ಅವರಿಗೆ ಯುವ ಪುರಸ್ಕಾರ ನೀಡಿ ಗೌರವಿಸಲಾಯಿತು.
ನೂತನ ಪದಾಧಿಕಾರಿಗಳು: ವಿಜಯ್ (ಅಧ್ಯಕ್ಷ) ಪ್ರತಿಭಾ (ಉಪಾಧ್ಯಕ್ಷ), ರಂಜಿತ್ (ಪ್ರ.ಕಾರ್ಯ ದರ್ಶಿ), ಎಸ್.ಹರ್ಷಿತ್ ಕುಮಾರ್ (ಖಜಾಂಚಿ), ಎನ್.ಎಂ.ಮಹೇಶ್ (ಜಂಟಿ ಕಾರ್ಯದರ್ಶಿ), ಭರತ್ (ಸಂ. ಕಾರ್ಯದರ್ಶಿ), ವಿಜಯಲಕ್ಷ್ಮೀ (ಪತ್ರಿಕಾ ಕಾರ್ಯದರ್ಶಿ), ಎಂ.ಎಂ.ದಿವ್ಯಾ (ಕ್ರೀಡಾ ಕಾರ್ಯದರ್ಶಿ), ಗಿರೀಶ್ (ಸಂಚಾಲಕ) ತೇಜೇಸ್ (ಸಹ ಸಂಚಾಲಕ), ಜೋಯಲ್, ಕೀರ್ತಿ (ಸದಸ್ಯರು).
ಕಾರ್ಯಕ್ರಮದಲ್ಲಿ ದಸಾಪ ಜಿಲ್ಲಾಧ್ಯಕ್ಷ ಶಾಂತಮೂರ್ತಿ, ಜಿ.ಸಾಂ.ಕಲಾವಿದರ ಸಂಘ ಗೌರವಾಧ್ಯಕ್ಷ ಎಸ್.ಎಸ್.ಶಿವಣ್ಣ, ಅಧ್ಯಕ್ಷ ಜಯಪ್ರಕಾಶ್, ತಾಲ್ಲೂಕು ಅಧ್ಯಕ್ಷ ಅಶೋಕ್ ರಾಜರತ್ನಂ, ಮೂಡಿಗೆರೆ ಅಧ್ಯಕ್ಷ ಹೆಚ್.ಎಸ್. ರವಿ, ಜನಪವ ಯುವ ಬ್ರಿಗೇಡ್ ಗ್ರಾಮೀಣ ಸಂಚಾಲಕ ದಿಲೀಪ್, ನಗರ ಸಂಚಾಲಕ ಅಮಿತ್, ಮುಖಂಡರುಗಳಾದ ಸುರೇಶ್, ಪವಿತ್ರಾ ವಿಜಯ್, ಬಿ.ಜಿ.ಮಧು ಇದ್ದರು.




