ಪಶ್ಚಿಮ ಪದವೀಧರ ಟಿಕೆಟ್ ಘೋಷಣೆ ಬೆನ್ನಲ್ಲೇ ಭುಗಿಲೆದ್ದ ಅಸಮಾಧಾನ
ಎಂಟು ದಿನಗಳಲ್ಲಿ ಸಂಕನೂರ ಬದಲಿಸದಿದ್ದರೆ ಮುಂದಿನ ನಿರ್ಧಾರ
ಹುಬ್ಬಳ್ಳಿ : ಬಿಜೆಪಿಯಲ್ಲಿ ನಿಷ್ಠಾವಂತ, ಪ್ರಾಮಾಣಿಕ ಕಾರ್ಯಕರ್ತರಿಗೆ ಬೆಲೆಯಿಲ್ಲ ಎನ್ನುವುದು ಮತ್ತೊಮ್ಮೆ ಸಾಭೀತಾಗಿದೆ. ಬಿಜೆಪಿಯಿಂದ ನನಗೆ ಅನ್ಯಾಯವಾಗಿದೆ. ಈ ಮೂಲಕ ಕಾರ್ಯಕರ್ತರಿಗೆ ಅನ್ಯಾಯ ಮಾಡಿದಂತಾಗಿದೆ ಎಂದು ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ್ ಆರೋಪಿಸಿದ್ದಾರಲ್ಲದೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಪಶ್ಚಿಮ ಪದವೀಧರ ಮತಕ್ಷೇತ್ರದ ಟಿಕೆಟ್ ನಿನ್ನೆ ಘೋಷಣೆಯಾಗಿದ್ದು ಮತ್ತೆ ಎಸ್ವಿ.ಸಂಕನೂರಗೆ ಮಣೆ ಹಾಕಿದ್ದರಿಂದ ತಮಗೆ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ತಮ್ಮ ನೋವು ತೊಡಿಕೊಂಡ ಅವಿಭಾಜ್ಯ ಧಾರವಾಡ ಜಿಲ್ಲೆಯ ಅತ್ಯಂತ ಹಿರಿಯ ಮುಖಂಡರಾದ ಅವರು, ಕಳೆದ ೩೭ ವರ್ಷಗಳಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ಪಕ್ಷ ನೀಡಿದ ಹಲವು ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ.
ಇದನ್ನು ಗುರುತಿಸದೇ ಪಕ್ಷ ಹೊರಗಿನಿಂದ ಬಂದವರಿಗೆ ಮಣೆ ಹಾಕಿ ಟಿಕೆಟ್ ನೀಡಿದ್ದು ಸಾಕಷ್ಟು ನೋವು ತರಿಸಿದೆ ಎಂದು ಭಾವುಕರಾದರು. ಅಧ್ಯಕ್ಷ ಸ್ನಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ರಾಜ್ಯಾಧ್ಯಕ್ಷರಿಗೆ ಬರೆದ ಪತ್ರವನ್ನೂ ಬಿಡುಗಡೆ ಮಾಡಿದ ಅವರು ಎಸ್.ವಿ.ಸಂಕನೂರ ಅವರಿಗೆ ಟಿಕೆಟ್ ನೀಡಲಾಗಿದೆ. ಅದನ್ನು ಬದಲಿಸಿ ನನಗೆ ಟಿಕೆಟ್ ನೀಡಲು ಇನ್ನೂ ಸಮಯ ಇದೆ. ಎಂಟು ದಿನಗಳಲ್ಲಿ ವರಿಷ್ಠರು ಈ ಬಗ್ಗೆ, ತೀರ್ಮಾನ ಮಾಡದಿದ್ದರೆ ನನ್ನ ಮುಂದಿನ ನಿರ್ಧಾರ ಪ್ರಕಟಿಸುವುದಾಗಿ ಹೇಳಿದರು.
ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಅವರು ಬೇರೆ ಪಕ್ಷದಿಂದ ಬಂದಿದ್ದಾರೆ. ಕಳೆದ ಬಾರಿ ಚುನಾವಣೆ ಸಂಕನೂರ ಅವರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಬಹಿರಂಗವಾಗಿ ಹೇಳಿದ್ದರು. ಈ ಬಾರಿ ಮತ್ತೆ ಟಿಕೆಟ್ ಕೇಳಿದರು. ಅವರಿಗೆ ಟಿಕೆಟ್ ನೀಡಬಾರದು ಎಂಬುದು ಬಹುತೇಕರ ಅಭಿಪ್ರಾಯವಾಗಿತ್ತು. ಎಂದರು. ಪಕ್ಷ ನನಗೆ ಮಾಡಿದ ಅನ್ಯಾಯ ಇಡೀ ಬಿಜೆಪಿ ಕಾರ್ಯಕರ್ತರಿಗೆ ಮಾಡಿದ ಅನ್ಯಾಯವಾಗಿದೆ. ಪಕ್ಷ ನನಗೆ ತಾಯಿ ಇದ್ದಂತೆ. ಪಕ್ಷ ಬಿಡುವುದಿಲ್ಲ. ಆದರೆ, ನನ್ನ ಕಾರ್ಯವೈಖರಿ ಬದಲಾಗಲಿದೆ ಎಂದು ಹೇಳಿದರು.
ನಿರಂತರವಾಗಿ ಕಾರ್ಯಕರ್ತರೊಂದಿಗೆ ಸಂಪರ್ಕದಲ್ಲಿದ್ದು, ಟಿಕೆಟ್ ದೊರೆಯುವುದು ನಿಶ್ಚಿತ ಎಂದು ಬಹುತೇಕ ಮೇಲುಸ್ತರದ ನಾಯಕರು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣೆಗೆ ಎಲ್ಲ ಸಿದ್ದತೆ ಮಾಡಿಕೊಂಡಿದ್ದೆ, ಆದರೆ ಪಕ್ಷ ಅಭ್ಯರ್ಥಿ ಹೆಸರನ್ನು ಘೋಷಣೆ ಮಾಡಿದ್ದನ್ನು ಗಮನಿಸಿದ ಮೇಲೆ ಬೇಸರವಾಯಿತು ಎಂದು ಅವರು ಕಣ್ಣೀರು ಹಾಕಿದರು.
ಪರ್ಯಾಯ ಶಕ್ತಿ ಬೆಳೆಯಬಾರದೆಂದು ಪಿತೂರಿ ( ಬಾಕ್ಸ ) ಬಿಜೆಪಿಯಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಬೆಲೆ ಇಲ್ಲ ಎಂಬುದು ಈಗ ಮತ್ತೆ ಸಾಭೀತಾಗಿದೆ. ರಾಜ್ಯದಲ್ಲಿ ಪಕ್ಷ ಬೆಳೆಯದಿರುವುದಕ್ಕೆ ಇದೇ ಕಾರಣ. ಹುಬ್ಬಳ್ಳಿ-ಧಾರವಾಡದಲ್ಲಿ ವರ್ಯಾಯ ರಾಜಕೀಯ ಶಕ್ತಿ ಬೆಳೆಯಬಾರದು ಎಂದು ನನಗೆ ಟಿಕೆಟ್ ತಪ್ಪಿಸಿರುವ ಸಾಧ್ಯತೆ ಇದೆ. ನನ್ನ ವಿರುದ್ಧ ಪಿತೂರಿ ಮಾಡಿದ್ದಾರೆ ಎಂದು ಲಿಂಗರಾಜ ಪಾಟೀಲ ಹೇಳಿದರು.
ವರದಿ : ಸುಧೀರ್ ಕುಲಕರ್ಣಿ




