ಸಮುದಾಯದ ಹಕ್ಕುಗಳ ಹೋರಾಟಕ್ಕೆ ಸಂಘಟನೆ ಅನಿವಾರ್ಯ: ಅನಾ ಮೂರ್ತಿ ಕರೆ
ಚೇಳೂರು : ಸಮುದಾಯದ ಸಂಘಟನೆ ಮತ್ತು ಬಲವರ್ಧನೆಗಾಗಿ ಪ್ರತಿಯೊಬ್ಬರೂ ಮಾದಾರ ಮಹಾಸಭಾದ ಸದಸ್ಯತ್ವ ಪಡೆಯುವ ಮೂಲಕ ಸಂಘಟಿತರಾಗಬೇಕು. ನಮ್ಮ ಹಕ್ಕುಗಳ ಹೋರಾಟಕ್ಕೆ ಬಲಿಷ್ಠ ಸಂಘಟನೆ ಅನಿವಾರ್ಯವಾಗಿದೆ ಎಂದು ಮಾದಾರ ಮಹಾಸಭಾದ ಬಾಗೇಪಲ್ಲಿ ತಾಲೂಕು ಅಧ್ಯಕ್ಷ ಅನಾ ಮೂರ್ತಿ ತಿಳಿಸಿದರು.
ತಾಲೂಕು ಕೇಂದ್ರದ ಪ್ರವಾಸಿ ಮಂದಿರದಲ್ಲಿ ಗುರುವಾರ ಕರ್ನಾಟಕ ಮಾದಾರ ಮಹಾಸಭಾ (ರಿ) ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸದಸ್ಯತ್ವ ನೋಂದಣಿ ಅಭಿಯಾನದ ವಿಶೇಷ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಈ ಅಭಿಯಾನದ ಮೂಲಕ ಸಮುದಾಯದ ಪ್ರತಿ ಮನೆಗೂ ತೆರಳಿ ಜಾಗೃತಿ ಮೂಡಿಸುವ ಹಾಗೂ ಅರ್ಹರನ್ನು ಸಂಘಟನೆಯ ತೆಕ್ಕೆಗೆ ತರುವ ಗುರಿ ಹೊಂದಲಾಗಿದೆ. ಆರ್ಥಿಕವಾಗಿ ಹಿಂದುಳಿದಿರುವ ಸಮುದಾಯದ ಬಡವರಿಗೆ ನನ್ನ ವೈಯಕ್ತಿಕ ಖರ್ಚಿನಲ್ಲಿ ಸದಸ್ಯತ್ವ ಕೊಡಿಸಿ ಸಂಘಟನೆಯನ್ನು ವಿಸ್ತರಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಕದಸಂಸ ಜಿಲ್ಲಾ ಸಂಚಾಲಕರು ಕಡ್ಡಿಲು ವೆಂಕಟರವಣಪ್ಪ ಮಾತನಾಡಿ, ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಮೂರು ತಾಲೂಕುಗಳಲ್ಲಿ ಆಹಾರ ಇಲಾಖೆ ಸಚಿವ ಕೆ.ಎಚ್. ಮುನಿಯಪ್ಪ ಅವರ ನೇತೃತ್ವದಲ್ಲಿ ಮಹಾಸಭಾದ ಕಾರ್ಯಚಟುವಟಿಕೆಗಳು ನಡೆಯುತ್ತಿವೆ. ಚೇಳೂರು ತಾಲೂಕಿನಾದ್ಯಂತ ಎಲ್ಲರೂ ಒಗ್ಗಟ್ಟಿನಿಂದ ಮನೆ ಮನೆಗೆ ತೆರಳಿ ಸದಸ್ಯತ್ವದ ಬಗ್ಗೆ ಅರಿವು ಮೂಡಿಸಿ, ಸಂಘಟನೆಯನ್ನು ಬಲಪಡಿಸೋಣ, ಎಂದರು.
ಕಸಾಪ ಅಧ್ಯಕ್ಷರಿಗೆ ಸನ್ಮಾನ: ಇದೇ ಸಂದರ್ಭದಲ್ಲಿ ನೂತನ ಚೇಳೂರು ತಾಲೂಕಿನ ಪ್ರಥಮ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ಜೆ.ಕೆ. ಆನಂದ್ ಅವರಿಗೆ ಮಾದಾರ ಮಹಾಸಭಾದ ವತಿಯಿಂದ ಶಾಲು ಹೊದಿಸಿ, ಪೇಟ ತೊಡಿಸಿ ಸನ್ಮಾನಿಸಿ ಗೌರವಿಸಲಾಯಿತು.
ಈ ವೇಳೆ ಮಾತನಾಡಿದ ಜಿಲ್ಲಾ ಅಧ್ಯಕ್ಷರು ಪಟ್ರೆನಹಳ್ಳಿ ಕೃಷ್ಣನ್ನ, ಜೆ.ಕೆ. ಆನಂದ್ ಅವರು ಸಾಹಿತ್ಯ ಮತ್ತು ಪತ್ರಿಕೋದ್ಯಮದ ಮೂಲಕ ಸಮಾಜಕ್ಕೆ ನೀಡುತ್ತಿರುವ ಕೊಡುಗೆ ಅಪಾರ. ಹೊಸ ತಾಲೂಕಿನ ಸಾಹಿತ್ಯಿಕ ಚಟುವಟಿಕೆಗಳಿಗೆ ಅವರ ನೇತೃತ್ವ ಶಕ್ತಿ ನೀಡಲಿದೆ ಎಂದು ಶ್ಲಾಘಿಸಿದರು.
ಸಭೆಯಲ್ಲಿ ಮಹಾಸಭಾದ ಉಪಾಧ್ಯಕ್ಷ ಬಾಬು, ಖಜಾಂಚಿ ಜಯಂತ್, ಸದಸ್ಯರಾದ ರಾಮಚಂದ್ರ ಸಿ.,ಜಿ ನರಸಿಂಹಪ್ಪ, ನಾಗೇಶ್ ಸೇರಿದಂತೆ ಸಮುದಾಯದ ಪ್ರಮುಖ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ :ಯಾರಬ್. ಎಂ.




