ತುರುವೇಕೆರೆ: -ತಾಲ್ಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪಟ್ಟಣದ ತಾಲ್ಲೂಕು ಕಛೇರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು. ಶಾಸಕ ಎಂ.ಟಿ.ಕೃಷ್ಣಪ್ಪ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಜಯಂತಿಗೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ರಾಮಾಯಣ ಎಂಬ ಮಹಾಕಾವ್ಯವನ್ನು ರಚಿಸುವ ಮೂಲಕ ಮಹರ್ಷಿ ವಾಲ್ಮೀಕಿಯವರು ಜಗತ್ತಿಗೆ ಉತ್ತಮ ಸಂದೇಶವನ್ನು ನೀಡಿದ್ದಾರೆ. ವಾಲ್ಮೀಕಿ ಮಹರ್ಷಿಗಳ ಕಾವ್ಯಗಳು, ರಾಮಾಯಣದಲ್ಲಿನ ಮೌಲ್ಯ, ಆದರ್ಶಗಳು ಸರ್ವಕಾಲಕ್ಕೂ ಜೀವನಕ್ಕೆ ದಾರಿದೀಪವಾಗಿದೆ. ಮಹನೀಯರು ನೀಡಿರುವ ಅಮೂಲ್ಯ ಸಂದೇಶವನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕೆಂದರು.
ನಿವೃತ್ತ ಪ್ರಾಂಶುಪಾಲ ಆನಂದರಾಜು ಮಾತನಾಡಿ, ಮಹರ್ಷಿ ವಾಲ್ಮೀಕಿಯವರು ರಾಮಾಯಣ ಎಂಬ ಮಹಾಕಾವ್ಯದ ಮೂಲಕ ತೋರಿಸಿದವರು ಶ್ರೀರಾಮಚಂದ್ರನ ಹಾಗೂ ರಾಮರಾಜ್ಯ ಎಂಬ ಪರಿಕಲ್ಪನೆಯನ್ನು ಜಗತ್ತಿಗೆ ನೀಡಿದ್ದಾರೆ. ವಾಲ್ಮೀಕಿಯವರ ಜಯಂತಿ ಕೇವಲ ಒಂದು ದಿನದ ಕಾರ್ಯಕ್ರಮವಾಗದೆ ರಾಮಾಯಣದಲ್ಲಿನ ಪಾತ್ರಗಳು, ಸಂಬಂಧಗಳ ಅರ್ಥವನ್ನು ಅರಿತು ನಮ್ಮ ಜೀವನವನ್ನು ಶ್ರೇಷ್ಠಗೊಳಿಸಿಕೊಳ್ಳಬೇಕಿದೆ ಎಂದರು.
ವಾಲ್ಮೀಕಿ ಸಮಾಜದ ಅಧ್ಯಕ್ಷ ವಸಂತಕುಮಾರ್ ಮಾತನಾಡಿ, ಸರ್ಕಾರದ ಆದೇಶದಂತೆ ತಾಲೂಕು ಆಡಳಿತ ಅಧಿಕಾರಿ, ಸಿಬ್ಬಂದಿಗಳು ಹಾಗೂ ವಾಲ್ಮೀಕಿ ಸಮುದಾಯದ ಬಾಂದವರೊಂದಿಗೆ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ತಾಲ್ಲೂಕು ಕಛೇರಿಯಲ್ಲಿ ಆಚರಿಸಿದೆ. ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅದ್ದೂರಿಯಾಗಿ ನಡೆಸಬೇಕೆಂದು ನಮ್ಮ ಸಮಾಜ ತೀರ್ಮಾನಿಸಿದೆ. ಅದರಂತೆ ಅಕ್ಟೋಬರ್ ೨೫ರಂದು ದೊಡ್ಡ ಮಟ್ಟದಲ್ಲಿ ಪಟ್ಟಣದಲ್ಲಿ ಜಾನಪದ ಕಲಾತಂಡಗಳೊಂದಿಗೆ ವಾಲ್ಮೀಕಿ ಮಹರ್ಷಿಗಳ ಭಾವಚಿತ್ರ ಮೆರವಣಿಗೆ ನಡೆಸಿ ಶಾಸಕರು, ಅಧಿಕಾರಿಗಳು, ನಾಗರೀಕರು ಹಾಗೂ ವಾಲ್ಮೀಕಿ ಸಮುದಾಯದ ಬಾಂದವರೊಡಗೂಡಿ ಜಯಂತಿಯನ್ನು ನಡೆಸಲಾಗುವುದು. ಈ ಕಾರ್ಯಕ್ರಮಕ್ಕೆ ಪ್ರತಿಯೊಬ್ಬರೂ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಕುಂಇ ಅಹಮದ್, ಬಿಇಒ ಸೋಮಶೇಖರ್, ವೈದ್ಯಾಧಿಕಾರಿ ಡಾ.ರಂಗನಾಥ್, ಪಿಡಬ್ಲ್ಯೂಡಿ ಎಇಇ ಪ್ರಭಾಕರ್, ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಶೇಖರ್, ಬೋರೇಗೌಡ, ವಾಲ್ಮೀಕಿ ಸಮಾಜದ ಗೌರವಾಧ್ಯಕ್ಷ ಕೆ.ಆರ್.ಶಂಕರಯ್ಯ, ಉಪಾಧ್ಯಕ್ಷ ಕೃಷ್ಣಪ್ಪ, ಕಾರ್ಯದರ್ಶಿ ಶಿವಣ್ಣ, ಖಜಾಂಚಿ ಗಂಗರಂಗಯ್ಯ, ನಿವೃತ್ತ ಎಇಒ ಸೋಮಶೇಖರ್, ಶಿಕ್ಷಕ ಶ್ರೀನಿವಾಸ್, ಮುನಿಯೂರು ರಂಗಸ್ವಾಮಿ, ರಮೇಶ್, ಎನ್.ಗೋವಿಂದಯ್ಯ, ಬೋರಪ್ಪ, ಸಿ.ಎನ್.ಮಂಜುನಾಥ್, ಹುಲ್ಲೇಕೆರೆ ನಾಗರಾಜ್, ದಂ.ಕುಮಾರ್ ಸೇರಿದಂತೆ ವಾಲ್ಮೀಕಿ ಸಮುದಾಯದ ಬಾಂದವರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್