ಶುಕ್ರವಾರ ನಿಧನರಾದ ಹೆಸರಾಂತ ನಟ-ನಿರ್ದೇಶಕ ಮನೋಜ್ ಕುಮಾರ್ ಅವರ ಅಂತ್ಯಕ್ರಿಯೆ ಇಂದು (ಏಪ್ರಿಲ್ 5) ಮುಂಬೈನ ಜುಹುನಲ್ಲಿ ನಡೆಯಿತು. ಹಲವು ಬಾಲಿವುಡ್ ತಾರೆಯರು ಹಾಜರಿದ್ದರು.
ತಾರೆಯ ಪಾರ್ಥೀವ ಶರೀರವನ್ನು ಅವರ ಮುಂಬೈ ನಿವಾಸಕ್ಕೆ ತರಲಾಯಿತು. ಕುಟುಂಬ ಸದಸ್ಯರು ಮತ್ತು ಆಪ್ತರು ಗೌರವ ಸಲ್ಲಿಸಿದರು. ಅಂತಿಮವಾಗಿ ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು. ಚಿತ್ರರಂಗ, ವಿವಿಧ ಕ್ಷೇತ್ರಗಳ ಗಣ್ಯರೂ ಸೇರಿದಂತೆ ಅಭಿಮಾನಿಗಳು ಕುಮಾರ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ: ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಸಲಾಯಿತು. ಪ್ರೊಟೋಕಾಲ್ ಪ್ರಕಾರ, ಅವರ ಪಾರ್ಥೀವ ಶರೀರವನ್ನು ಭಾರತೀಯ ರಾಷ್ಟ್ರಧ್ವಜದಲ್ಲಿ ಸುತ್ತಿಡಲಾಗಿತ್ತು. ಅಂತ್ಯಕ್ರಿಯೆ ವೇಳೆ ಕುಮಾರ್ ಅವರ ಪತ್ನಿ ಶಶಿ ಗೋಸ್ವಾಮಿ ಕಣ್ಣೀರಲ್ಲಿ ಮುಳುಗಿದ್ದು ಕಂಡುಬಂತು.
ದೇಶಭಕ್ತಿ ಪ್ರಧಾನ ಚಿತ್ರಗಳಿಂದ ಜನಮನ್ನಣೆ: ಮನೋಜ್ ಕುಮಾರ್ ತಮ್ಮ ದೇಶಭಕ್ತಿ ಪ್ರಧಾನ ಚಿತ್ರಗಳಿಂದ ಹೆಸರುವಾಸಿಯಾದವರು. ಅವರ ಸಿನಿಮಾಗಳು ಅವರನ್ನು ಹಿಂದಿ ಚಿತ್ರರಂಗದಲ್ಲಿ ಪ್ರೀತಿಯ ಮತ್ತು ಪ್ರಮುಖ ವ್ಯಕ್ತಿಯನ್ನಾಗಿ ಮಾಡಿದವು. ಶಾಹಿದ್ (1965), ಉಪ್ಕಾರ್ (1967), ಪೂರಬ್ ಔರ್ ಪಶ್ಚಿಮ್ (1970) ಮತ್ತು ಕ್ರಾಂತಿ (1981)ಯಂತಹ ಚಿತ್ರಗಳಲ್ಲಿನ ಪಾತ್ರಗಳ ಮೂಲಕ ಭಾರತದಲ್ಲಿ ಮನೆಮಾತಾದರು. ರಾಷ್ಟ್ರೀಯ ಹೆಮ್ಮೆಯನ್ನು ಹೆಚ್ಚಿಸುವಂತಹ ವಿಷಯಗಳಿಂದ ಅವರ ಸಿನಿಮಾಗಳು ಬಹಳ ಜನಪ್ರಿಯವಾಗಿದ್ದವು. ಈ ಮೂಲಕ “ಭರತ್ ಕುಮಾರ್” ಎಂಬ ಬಿರುದನ್ನು ಸಂಪಾದಿಸಿದರು.