ನವದೆಹಲಿ: ದೆಹಲಿಯಲ್ಲಿ ದಟ್ಟ ಮಂಜು, ಹೊಗೆಯ ವಾತಾವರಣದಿಂದಾಗಿ ವಿನಾನಗಳ ಹಾರಾಟದಲ್ಲಿ ವ್ಯತ್ಯಯವುಂಟಾಗಿದ್ದು, ರಾಜ್ಯದ ಹಲವು ಶಾಸಕರು, ಸಚಿವರು ವಿಮಾನದಲ್ಲಿಯೇ ಲಾಕ್ ಆಗಿರುವ ಘಟನೆ ನಡೆದಿದೆ.
ಮತಗಳ್ಳತನದ ವಿರುದ್ಧ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ಹೋಗಿದ್ದ ಸಚಿವರು, ಶಾಸಕರು ರಾಜ್ಯಕ್ಕೆ ವಾಪಾಸ್ ಆಗಲು ವಿಮಾವೇರಿ ಕುಳಿತಿದ್ದಾರೆ.
ಆದರೆ ಹವಾಮಾನ ವೈಪರೀತ್ಯದಿಂದಾಗಿ ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಿದೆ. ದೆಹಲಿಯಿಂದ ಬೆಳಗಾವಿಗೆ ಹೋಗುವ ಇಂಡಿಗೋ ವಿಮಾನವೇರಿ ಕುಳಿತಿದ್ದ ರಾಜ್ಯದ 21 ಶಾಸಕರು ವಿಮಾನದ ಒಳಗೆ ಲಾಕ್ ಆಗಿದ್ದಾರೆ. ಆದರೆ ಎಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ತಿಳಿದುಬಂದಿದೆ.
ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು ನಿಧನರಾಗಿರುವ ಹಿನ್ನೆಲೆಯಲ್ಲಿ ಇಂದು ದಾವಣಗೆರೆಯಲ್ಲಿ ಅವರ ಅಂತಿಮ ದರ್ಶನ ಪಡೆಯಲು ತೆರಳಲು ಶಾಸಕರು, ಸಂಸದರು ದೆಹಲಿಯಿಂದ ವಿಮಾನ ಹತ್ತಿದ್ದಾರೆ.
ಆದರೆ ದಟ್ಟ ಮಂಜು ಕವಿದ ವಾತಾವರಣದಿಂದಾಗಿ ವಿಮಾನ ಹಾರಾಟದಲ್ಲಿ ವಿಳಂಬವಾಗಿದೆ. ಇಂದು ಬೆಳಿಗ್ಗೆ5:30ಕ್ಕೆ ದೆಹಲಿಯಿಂದ ಬೆಳಗಾವಿಗೆ ವಿಮಾನ ಹೊರಡಬೇಕಿತ್ತು. ವಿಮಾನವೇರಿದ ಬಳಿಕ ಹವಾಮಾನ ವೈಪರೀತ್ಯ ಹೆಚ್ಚಿದ್ದರಿಂದ ವಿಮಾನ ಹಾರಾಟ ತಡವಾಗಿದೆ.
ಸಚಿವರಾದಲಕ್ಷ್ಮೀ ಹೆಬ್ಬಾಳಕರ್, ಹೆಚ್.ಕೆ.ಪಾಟೀಲ್,ಶರಣ ಪ್ರಕಾಶ್ ಪಾಟೀಲ್ ಸೇರಿದಂತೆ 21 ಶಾಸಕರು ವಿಮಾನದ ಒಳಗೇ ಸಿಲುಕಿದ್ದಾರೆ. ಸುಮಾರು ನಾಲ್ಕು ಗಂಟೆಗಳಿಂದ ಶಾಸಕರು ವಿಮಾನದ ಒಳಗೇ ಕುಳಿತಿದ್ದಾರೆ. ಬೆಳಿಗ್ಗೆ 10 ಗಂಟೆಯಾದರೂ ವಿಮಾನ ಟೆಕಾಫ್ ಆಗಿಲ್ಲ.
ದೆಹಲಿಯಲ್ಲಿ ದಟ್ಟ ಮಂಜು ಕವಿದ ವಾತಾವರಣದಿಂದಾಗಿ ಎಲ್ಲಾ ವಿಮಾನಗಳ ಟೇಕಾಫ್, ಲ್ಯಾಂಡಿಂಗ್ ನಲ್ಲಿ ವ್ಯತ್ಯಯವಾಗಿದೆ.




