ತುರುವೇಕೆರೆ : ಸರ್ಕಾರಗಳು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಒದಗಿಸಿ ಗ್ರಾಮೀಣ ಪ್ರತಿಭೆಗಳು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಉನ್ನತವಾದುದನ್ನು ಅಧ್ಯಯನ ಮಾಡಿ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈಯಲು ಅವಕಾಶ ಕಲ್ಪಿಸಬೇಕಿದೆ ಎಂದು ಮಾಜಿ ಶಾಸಕ ಮಸಾಲಾ ಜಯರಾಮ್ ತಿಳಿಸಿದರು.

ತಾಲ್ಲೂಕಿನ ಟಿ.ಹೊಸಹಳ್ಳಿ ಗೇಟ್ ಬಳಿಯಿರುವ ಶ್ರೀ ತಿಮ್ಮಪ್ಪರಾಯಸ್ವಾಮಿ ಎಜುಕೇಷನಲ್ ಸೊಸೈಟಿ ಆಶ್ರಯದ ಮಾನಸ ಗಾರ್ಡನ್ ಇಂಗ್ಲಿಷ್ ಸ್ಕೂಲ್ ನ ಶಾಲಾ ವಾರ್ಷಿಕೋತ್ಸವ ಹಾಗೂ ಮಕ್ಕಳ ಕಲೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಿರಂತರ ಅಧ್ಯಯನ, ಕಠಿಣ ಶ್ರಮ ನಿಮ್ಮ ಬದುಕನ್ನು ಯಶಸ್ಸಿನ ಉತ್ತುಂಗಗಕ್ಕೇರಿಸುವಲ್ಲಿ ಸಹಕಾರಿಯಾಗುತ್ತದೆ. ಏಳಿ, ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ ಎಂಬ ಸ್ವಾಮಿ ವಿವೇಕಾನಂದ ವಾಣಿಯಂತೆ ನಿರಂತರ ಅಧ್ಯಯನ ವ್ಯಕ್ತಿಯಲ್ಲಿ ಸೃಜನಶೀಲತೆಯನ್ನು ಸೃಷ್ಟಿಸುತ್ತದೆ, ಸೃಜನಶೀಲತೆ ಚಿಂತನೆಯನ್ನು ಮೂಡಿಸುತ್ತದೆ, ಚಿಂತನೆ ಜ್ಞಾನವನ್ನು ವೃದ್ಧಿಸುತ್ತದೆ, ಜ್ಞಾನ ವ್ಯಕ್ತಿಯನ್ನು ಮಹೋನ್ನತ ವ್ಯಕ್ತಿಯನ್ನಾಗಿ ಮಾಡುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಅಧ್ಯಯನದಲ್ಲಿ ಹಿಂದುಳಿಯಬಾರದು ಎಂದರು.
ಯಾವುದೇ ಸಂಸ್ಥೆಯನ್ನು ಕಟ್ಟಿ ಬೆಳೆಸುವುದು ಸುಲಭದ ವಿಷಯವಲ್ಲ, ಸಂಸ್ಥೆಯ ಕಟ್ಟಬೇಕಾದರೆ ಅದಕ್ಕೆ ಪೂರಕ ಯೋಜನೆ, ಶ್ರಮ, ಆರ್ಥಿಕ ಕ್ರೋಢೀಕರಣ, ಇನ್ನಿತರ ಸೌಲಭ್ಯಗಳನ್ನು ಹೊಂದಬೇಕಾಗುತ್ತದೆ. ಅಂತಹ ಎಲ್ಲಾ ಸೌಕರ್ಯಗಳನ್ನು ಒಳಗೊಂಡು ತಾಲ್ಲೂಕಿನಲ್ಲಿ ದಶಕದ ಹಿಂದೆಯೇ ಮಾನಸ ಗಾರ್ಡನ್ ಶಾಲೆ ಸ್ಥಾಪಿಸಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉನ್ನತ ಗುಣಮಟ್ಟದ ಮೌಲ್ಯಯುತ, ಸಂಸ್ಕಾರಯುತ ಹಾಗೂ ಸ್ಪರ್ಧಾತ್ಮಕ ಶಿಕ್ಷಣವನ್ನು ನೀಡುತ್ತಿರುವ ಸಂಸ್ಥೆಯ ಸಂಸ್ಥಾಪಕರು, ಆಡಳಿತ ಮಂಡಳಿ ಅಭಿನಂದನಾರ್ಹರು ಎಂದರು.
ಸರ್ಕಾರಗಳು ಶಿಕ್ಷಣದ ಜೊತೆಗೆ ಕ್ರೀಡೆಗೂ ಹೆಚ್ಚಿನ ಅನುದಾನ ಒದಗಿಸಿ ಪ್ರೋತ್ಸಾಹಿಸಬೇಕಿದೆ. ಕ್ರೀಡಾಪಟುಗಳಲ್ಲಿ ಆತ್ಮಹತ್ಯೆ ಮಾಡಿಕೊಂಡವರ ಉದಾಹರಣೆ ಕಡಿಮೆ. ಇದಕ್ಕೆ ಪ್ರಮುಖ ಕಾರಣ ಕ್ರೀಡೆ ಬೌದ್ದಿಕ, ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗುವುದಲ್ಲದೆ ಶಾರೀರಿಕ ಸದೃಢತೆಗೆ ನೆರವಾಗುತ್ತದೆ. ಕ್ರೀಡಾಪಟುಗಳಲ್ಲಿ ತಾಳ್ಮೆ, ಆತ್ಮಸ್ಥೈರ್ಯ, ಧೈರ್ಯವನ್ನು ತುಂಬುತ್ತದೆ. ಇದರಿಂದ ಜೀವನದಲ್ಲಿ ಯಾವುದೇ ಅಡೆತಡೆ ಬಂದರೂ ಎದುರಿಸಿ ಬದುಕನ್ನು ಸದೃಢವಾಗಿ ಕಟ್ಟಿಕೊಳ್ಳುವ ಶಕ್ತಿಯನ್ನು ಕ್ರೀಡೆ ನೀಡುತ್ತದೆ ಎಂದ ಅವರು, ಕ್ರೀಡೆಯಲ್ಲಿ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಪಾಲ್ಗೊಂಡವರಿಗೆ ಉದ್ಯೋಗಕ್ಕೆ ಹೆಚ್ಚಿನ ಅವಕಾಶಗಳಿವೆ. ಭಾರತೀಯ ಸೇನೆ, ರೈಲ್ವೆ, ಪೊಲೀಸ್ ಇಲಾಖೆ ಸೇರಿದಂತೆ ಹಲವು ಇಲಾಖೆಗಳಲ್ಲಿ ಉದ್ಯೋಗಕ್ಕೆ ಕ್ರೀಡಾ ಮೀಸಲಿದ್ದು ವಿದ್ಯಾರ್ಥಿಗಳು ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ ಎಂದರು.
ವಾರ್ಷಿಕೋತ್ಸವದ ಅಧ್ಯಕ್ಷತೆಯನ್ನು ಶ್ರೀ ತಿಮ್ಮಪ್ಪರಾಯಸ್ವಾಮಿ ಎಜುಕೇಷನಲ್ ಸೊಸೈಟಿ ಅಧ್ಯಕ್ಷ ಹೆಚ್.ಆರ್.ಜಗದೀಶ್ ವಹಿಸಿದ್ದರು. ಪುಲ್ವಾಮಾದಲ್ಲಿ ಹುತಾತ್ಮರದ ವೀರಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿ ಗೌರವ ಸಮರ್ಪಿಸಲಾಯಿತು. ಮಾಜಿ ಶಾಸಕ ಮಸಾಲಾ ಜಯರಾಮ್ ಅವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ನಿವೃತ್ತ ಯೋಧ ಯೋಗಾನಂದ್, ಸಿ.ಆರ್.ಪಿ. ಲೋಕೇಶ್, ಉಪನ್ಯಾಸಕರಾದ ಸುನಿಲ್ ಎಂ.ಸಿ, ಮಂಜುನಾಥ್ ಎಸ್., ಡಿ.ಎಸ್.ಎಸ್. ಸಂಚಾಲಕ ಕೃಷ್ಣಮೂರ್ತಿ, ಸಾಮಾಜಿಕ ಕಾರ್ಯಕರ್ತ ದಿಲೀಪ್ ಅವರನ್ನು ಸನ್ಮಾನಿಸಲಾಯಿತು. ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ನೇತ್ರಾವತಿ ರಂಗಸ್ವಾಮಿ, ನಿರ್ದೇಶಕ ಪೂರ್ಣಚಂದ್ರ, ಖಾಸಗಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಜಿ.ಆರ್.ರಂಗೇಗೌಡ ಸೇರಿದಂತೆ ಬೋಧಕ, ಬೋಧಕೇತರ ವರ್ಗ, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್




