ಸಿಂಧನೂರು : ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಈಜೆ ಹೊಸಳ್ಳಿ ಗ್ರಾಮದಲ್ಲಿ ವಿಶಿಷ್ಟ ಸಮಾಜಮುಖಿ ಕಾರ್ಯೊಂದು ನಡೆಯಿತು. ಮಂಗಳಮುಖಿ ಜಮುನಮ್ಮ ಅವರ ನೇತೃತ್ವದಲ್ಲಿ ಆರನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲಾಯಿತು. ಭಿಕ್ಷಾಟನೆ ಮೂಲಕ ಸಂಗ್ರಹಿಸಿದ ಹಣದಿಂದ ಬಡ ಜೋಡಿಗಳಿಗೆ ಮದುವೆ ಮಾಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ತಾಲೂಕಿನ ಈಜೆ ಹೊಸಳ್ಳಿ ಗ್ರಾಮದ ದುರ್ಗಾದೇವಿ ದೇವಸ್ಥಾನದ ಆವರಣದಲ್ಲಿ ಆರನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಮಂಗಳಮುಖಿ ಜಮುನಮ್ಮ ಹಾಗೂ ಅವರ ತಂಡ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ದಿನಾಲು ಭಿಕ್ಷಾಟನೆ ಮಾಡಿ ಸಂಗ್ರಹಿಸಿದ ಹಣವನ್ನು ಜೋಡಿಸಿ ವರ್ಷಕ್ಕೊಮ್ಮೆ ಬಡ ಕುಟುಂಬಗಳ ಜೋಡಿಗಳನ್ನು ಆಯ್ಕೆ ಮಾಡಿ ಅವರಿಗೆ ಸಾಮೂಹಿಕ ವಿವಾಹ ಮಾಡಿಸುವ ಕಾರ್ಯವನ್ನು ಅವರು ನಡೆಸುತ್ತಿದ್ದಾರೆ
ಇಂದಿನ ದಿನಗಳಲ್ಲಿ ಸಾಮೂಹಿಕ ವಿವಾಹಗಳನ್ನು ರಾಜಕಾರಣಿಗಳು ಮತ್ತು ವಿವಿಧ ಸಂಘ ಸಂಸ್ಥೆಗಳು ಆಯೋಜಿಸುವುದು ಸಾಮಾನ್ಯ. ಆದರೆ ಸಿಂಧನೂರಿನಲ್ಲಿ ಮಂಗಳಮುಖಿಯರು ಭಿಕ್ಷೆಯಿಂದ ಬಂದ ಹಣದಲ್ಲೇ ಬಡವರಿಗೆ ಮದುವೆ ಮಾಡಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು, ಗ್ರಾಮಸ್ಥರು ಭಾಗವಹಿಸಿ ನವದಂಪತಿಗಳಿಗೆ ಆಶೀರ್ವಾದ ನೀಡಿದರು.
ಒಟ್ಟಿನಲ್ಲಿ ಸಮಾಜದಲ್ಲಿ ಸಹಾಯದ ಮನೋಭಾವ ಇನ್ನೂ ಜೀವಂತವಾಗಿರುವುದನ್ನು ಈ ಸಾಮೂಹಿಕ ವಿವಾಹ ಕಾರ್ಯಕ್ರಮ ಮತ್ತೆ ಸಾಬೀತುಪಡಿಸಿದೆ ಎಂದು ಸಾರ್ವಜನಿಕರ ಮಾತಾಗಿದೆ.
ವರದಿ : ಬಸವರಾಜ ಬುಕ್ಕನಹಟ್ಟಿ.




