ವಿಜಯಪುರ: ಸಮಾಜಕ್ಕೆ ಉತ್ತಮ ನಾಗರಿಕರನ್ನು ನೀಡುವಲ್ಲಿ ಶಿಕ್ಷಣದ ಪಾತ್ರ ಮಹತ್ವದ್ದಾಗಿದೆ. ಪಾಲಕರು ಮಗುವಿನ ಉತ್ತಮ ಭವಿಷ್ಯಕ್ಕಾಗಿ ಶಿಕ್ಷಣ ಕೊಡಿಸಿ ಎಂದು ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಕರೆ ನೀಡಿದರು.

ಬಸವನ ಬಾಗೇವಾಡಿ ಪಟ್ಟಣದ ತೆಲಗಿ ರಸ್ತೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮೌಲಾನಾ ಆಜಾದ್ ಮಾದರಿ ಶಾಲೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಜಾಗತಿಕ ಮಟ್ಟದಲ್ಲಿ ಸುಮಾರು 2.30 ಕ್ಕೂ ಹೆಚ್ಚು ದೇಶಗಳಲ್ಲಿ ಇಂಗ್ಲಿಷ್ ಭಾಷೆಯೇ ಪ್ರಧಾನವ್ಯವಹಾರಿಕ ಭಾಷೆಯಾಗಿದೆ. ಸರ್ಕಾರ ರಾಜ್ಯದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮಕ್ಕಳ ಶಿಕ್ಷಣಕ್ಕಾಗಿ 100 ಮೌಲಾನ ಆಜಾದ ಆಂಗ್ಲ ಶಾಲೆ ಸ್ಥಾಪನೆಗೆ ಮುಂದಾಗಿದೆ.
ನಮ್ಮ ಕ್ಷೇತ್ರಕ್ಕೂ ಶಾಲೆ ಮಂಜೂರಾಗಿದೆ. ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ ಶಿಕ್ಷಕರು, ಶಾಲಾ ಕಟ್ಟಡ, ಪ್ರಯೋಗಾಲಯ ಸೇರಿ ಅಗತ್ಯ ಸೌಲಭ್ಯ ಕಲ್ಪಿಸವುದು ಅಗತ್ಯವಾಗಿದೆ. ಮೌಲಾನಾ ಆಜಾದ್ ಶಾಲೆಯಲ್ಲಿ ಎಲ್.ಕೆ.ಜಿಯಿಂದ ಪಿಯುಸಿವರೆಗೆ ಶಿಕ್ಷಣ ನೀಡುತ್ತಿದ್ದು, ಇದರ ಸದುಪಯೋಗ ಪಡೆಯಬೇಕು ಎಂದರು.
ಇದೇ ಸಮಯದಲ್ಲಿ ಲೋಕನಾಥ ಅಗರವಾಲ, ವೈ ಎಸ್ ಸೋಮನಕಟ್ಟಿ ಶಬ್ಬೀರ್ ಅಹ್ಮದ್ ನದಾಫ, ಪ್ರಶಾಂತ್ ಪೂಜಾರಿ ಅಶೋಕ್ ಹಾರಿವಾಳ ಸುನಿಲ್ ನಾಯಕ್ ಮಹಿಬೂಬ ನಾಯ್ಕೋಡಿ ಅಜೀಜ ಬಾ ಗವಾನ್ ಮತಾಬ ಬೊಮ್ಮನಹಳ್ಳಿ, ಮತ್ತು ಸರ್ಕಾರಿ ಅಧಿಕಾರಿಗಳು ಊರಿನ ಮುಖಂಡರು ಉಪಸ್ಥಿತರಿದ್ದರು.
ವರದಿ: ಕೃಷ್ಣಾ ರಾಠೋಡ




