ಬೀದರ : ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ಮಂಡಿಸಿದ ಬಜೆಟ್ ಹಿಂದುಳಿದ ಹಾಗೂ ನೇಕಾರ ಸಮುದಾಯಗಳಿಗೆ ತೀವ್ರ ನಿರಾಸೆಯನ್ನುಂಟು ಮಾಡಿದ್ದು, ಮೂಗಿಗೆ ತುಪ್ಪ ಸವರುವ ಪ್ರಯತ್ನ ಮಾಡಿದ್ದಾರೆ. ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡ, ಅಲೆಮಾರಿ, ಹಿಂದುಳಿದ ವರ್ಗಗಳ ಹಾಗೂ ನಿಗಮಗಳಿಗೆ ಒಟ್ಟಾರೆ ರೂ 1,500 ಕೋಟಿಗಳನ್ನು ಒದಗಿಸುವುದಾಗಿ ಘೋಷಿಸಲಾಗಿದೆ. ಆದರೆ ಯಾವ ಸಮುದಾಯಗಳ ನಿಗಮಗಳಿಗೆ ಎಷ್ಟು ಅನುದಾನ ನಿಗದಿಪಡಿಸಲಾಗಿದೆ ಎಂದು ಸ್ಪಷ್ಟವಾಗಿ ಘೋಷಿಸಿರುವುದಿಲ್ಲ. ಕರ್ನಾಟಕದ ಜನಸಂಖ್ಯೆಯ ಶೇ 50% ರಷ್ಟು ಮೀರುವ ಹಿಂದುಳಿದ ವರ್ಗದ ಕಲ್ಯಾಣ ಕಾರ್ಯಕ್ಕೆ ರೂ. 1,500 ಕೋಟಿ ಎಲ್ಲಿಗೆ ಸಾಲುತ್ತದೆ? ಅಲ್ಲಲ್ಲಿ ವಿದ್ಯಾರ್ಥಿ ನಿಲಯಗಳಿಗೆ ಒಂದಷ್ಟು ಅನುದಾನವನ್ನು ಒದಗಿಸುವುದಾಗಿ ಹೇಳಿರುವುದನ್ನು ಬಿಟ್ಟರೆ ಉಳಿದಂತೆ ಯಾವ ದೂರದೃಷ್ಟಿತ್ವದ ಯೋಜನೆಯನ್ನೂ ಘೋಷಣೆ ಮಾಡದೇ ಈ ಸಮುದಾಯಗಳನ್ನು ವಂಚಿಸಲಾಗಿದೆ.
ಇಡೀ ಬಜೆಟ್ನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯನ್ನು ಹಾಗೂ ನೇಕಾರರ ಬಗ್ಗೆ ಎಲ್ಲಿಯೂ ಪ್ರಸ್ತಾಪಿಸದೇ, ಆ ಇಲಾಖೆಗೆ ಎಷ್ಟು ಅನುದಾನ ನೀಡಲಾಗಿದೆ ಎಂದು ಸ್ಪಷ್ಟಪಡಿಸದೇ ಇರುವುದು ಹಿಂದುಳಿದ ವರ್ಗಗಳ ಹಾಗೂ ನೇಕಾರರ ಬಗ್ಗೆ ಮುಖ್ಯಮಂತ್ರಿಗಳಿಗಿರುವ ಅಸಡ್ಡೆಯನ್ನು ಎತ್ತಿ ತೋರಿಸುತ್ತದೆ.
ವೃತ್ತಿಗೆ ಆರಂಭಿಸಲು 5 ಲಕ್ಷಗಳ ವರೆಗೆ ಸಾಲದ ಸೌಲಭ್ಯ ನೀಡಲಾಗುವುದು ಎಂದು ಘೋಷಿಸಲಾಗಿದೆ. ಆದರೆ ಇವುಗಳಿಗಾಗಿ ಎಷ್ಟು ಅನುದಾನ ಮೀಸಲಿರಿಸಲಾಗಿದೆ ಎಂದು ಸ್ಪಷ್ಟಪಡಿಸಿಲ್ಲ.
ಇತರ ಅತೀ ಹಿಂದುಳಿದ ಸಮುದಾಯಗಳ ಜನರ ಆರ್ಥಿಕ ಏಳಿಗೆಗೆ ನೆರವು ನೀಡಲು ಪ್ರತ್ಯೇಕ ಕೆಲವು ನಿಗಮಗಳನ್ನು ಸ್ಥಾಪಿಸಲಾಗಿದೆ, ಎಂದಷ್ಟೇ ಘೋಷಿಸಲಾಗಿದೆ. ಈ ನಿಗಮಗಳಿಗೆ ಎಷ್ಟು ಅನುದಾನ ನೀಡಲಾಗುವುದು ಎನ್ನುವುದನ್ನು ಘೋಷಿಸಿರುವುದಿಲ್ಲ. ನೇಕಾರ ನಿಗಮ ಪ್ರಾರಂಭಿಸುವುದಾಗಿ ಹೇಳಿದ್ದನ್ನೂ ಮರೆತು, ಯುವ ಜನರಿಗೆ ಖಾಲಿ ಇರುವ ಉದ್ಯೋಗಗಳನ್ನು ತುಂಬದೇ ನಿರುದ್ಯೋಗಿಗಳನ್ನು ಅತಂತ್ರ ಸ್ಥಿತಿಯಲ್ಲಿಟ್ಟಿರುವ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ಯುವಜನರ ಹೆಸರಿನ ತನ್ನ ಪಂಚಭಾಗ್ಯಗಳಲ್ಲಿ ಒಂದಾದ ʼಯುವನಿಧಿʼಗೆ ಯಾವ ಅನುದಾನವನ್ನೂ ನೀಡದೇ ತಿಲಾಂಜಲಿ ನೀಡಿದೆ.
ರೈತ ಕಲ್ಯಾಣಕ್ಕಾಗಿ, ನೀರಾವರಿ ಯೋಜನೆಗಳಿಗಾಗಿ ಅವಶ್ಯವಿರುವಷ್ಟು ಅನುದಾನ ಘೋಷಿಸದೇ ರೈತ ಸಮುದಾಯಕ್ಕೂ ಕೂಡ ತೀವ್ರ ನಿರಾಸೆ ಉಂಟು ಮಾಡಲಾಗಿದೆ. ಮಹಿಳೆಯರ ಕಲ್ಯಾಣಕ್ಕಾಗಿ, ಶಿಕ್ಷಣ ಹಾಗೂ ಆರೋಗ್ಯಕ್ಕಾಗಿ ಯಾವುದೇ ರೀತಿಯ ಮಹತ್ತರ ಯೋಜನೆಗಳನ್ನು ಪ್ರಕಟಿಸದೇ ಈಗಾಗಲೇ 8 ಲಕ್ಷಕ್ಕೂ ಹೆಚ್ಚು ಸಾಲದ ಕೂಪದಲ್ಲಿ ಮುಳುಗಿರುವ ರಾಜ್ಯವನ್ನು ಇನ್ನಷ್ಟು ಸಾಲದ ಹೊರೆ ಹೊರೆಸಿ ಸಾಲದ ಶೂಲಕ್ಕೆ ಸಿಲುಕಿಸುವ ಬಜೆಟ್ ಇದಾಗಿದೆ.
ವರದಿ:ಸಂತೋಷ ಬಿಜಿ ಪಾಟೀಲ




