ತುರುವೇಕೆರೆ: ಮಾನಸಿಕ ಆರೋಗ್ಯವನ್ನು ಬಲಪಡಿಸುವ ರಾಷ್ಟ್ರೀಯ ಪ್ರಯತ್ನಗಳ ಸಂದರ್ಭದಲ್ಲಿ, ಎಲ್ಲರ ಮಾನಸಿಕ ಯೋಗಕ್ಷೇಮವನ್ನು ರಕ್ಷಿಸುವುದು ಮತ್ತು ಉತ್ತೇಜಿಸುವುದು ಮಾತ್ರವಲ್ಲದೆ, ಮಾನಸಿಕ ಆರೋಗ್ಯ ಸ್ಥಿತಿಗಳನ್ನು ಹೊಂದಿರುವ ಜನರ ಅಗತ್ಯಗಳನ್ನು ಪೂರೈಸುವುದು ಸಹ ಅತ್ಯಗತ್ಯ ಎಂದು ನಿಮ್ಹಾನ್ಸ್ ಸಹಾಯಕ ಪ್ರಾಧ್ಯಾಪಕ ಡಾ.ಶನಿವಾರಂ ರೆಡ್ಡಿ ತಿಳಿಸಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸರ್ಕಾರ, ನಿಮ್ಹಾನ್ಸ್, ಐಸಿಎಂಆರ್ ಸಯಯೋಗದಲ್ಲಿ ಆಯೋಜಿಸಿದ್ದ ಯೋಗ ಆಧಾರಿತ ವಿಸ್ತರಣಾ ಸೇವೆಗಳಿಗೆ ಚಾಲನೆ ಮತ್ತು 15+ ವರ್ಷಗಳ ಸಮುದಾಯ ಮಾನಸಿಕ ಆರೋಗ್ಯ ಸೇವೆಗಳ ಆಚರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಡಿಮೆ ಸಂಪನ್ಮೂಲ ಹೊಂದಿರುವ ಪ್ರದೇಶಗಳಲ್ಲಿ ವಾಸಿಸುವ ಮಾನಸಿಕ ಅಸ್ವಸ್ಥತೆ ಹೊಂದಿರುವ ರೋಗಿಗಳಿಗೆ ಮಾನಸಿಕ ಮತ್ತು ಮನಸ್ಸು ದೇಹದ ಮಧ್ಯಸ್ಥಿಕೆಗಳು ಹೆಚ್ಚಾಗಿ ಇರುವುದಿಲ್ಲ. ಇದಕ್ಕೆ ಸೂಕ್ತವಾದ ಯೋಗ ಅಗತ್ಯವಾಗಿರುತ್ತದೆ. ಭಾವನಾತ್ಮಕ ಕೌಶಲ್ಯಗಳು, ಮಾದಕ ವಸ್ತುಗಳ ಬಳಕೆ ಮತ್ತು ಬಡತನ, ಹಿಂಸೆ, ಅಸಮಾನತೆ ಮತ್ತು ಪರಿಸರ ಅಭಾವ ಸೇರಿದಂತೆ ಪ್ರತಿಕೂಲವಾದ ಸಾಮಾಜಿಕ, ಆರ್ಥಿಕ, ಭೌಗೋಳಿಕ ರಾಜಕೀಯ ಮತ್ತು ಪರಿಸರ ಪರಿಸ್ಥಿತಿಗಳಿಗೆ ಒಡ್ಡಿಕೊಳ್ಳುವುದರಿಂದ ಜನರು ಮಾನಸಿಕ ಆರೋಗ್ಯ ಸ್ಥಿತಿಗಳನ್ನು ಅನುಭವಿಸುವ ಅಪಾಯವನ್ನು ಹೆಚ್ಚಿಸುತ್ತಾರೆ. ಜೀವನದ ಎಲ್ಲಾ ಹಂತಗಳಲ್ಲಿ ಅಪಾಯಗಳು ಕಾಣಿಸಿಕೊಳ್ಳಬಹುದು, ಆದರೆ ಬೆಳವಣಿಗೆಯ ಸೂಕ್ಷ್ಮ ಅವಧಿಗಳಲ್ಲಿ, ವಿಶೇಷವಾಗಿ ಬಾಲ್ಯದಲ್ಲಿ ಸಂಭವಿಸುವ ಅಪಾಯಗಳು ವಿಶೇಷವಾಗಿ ಹಾನಿಕಾರಕವಾಗಿವೆ ಎಂದರು.
2009 ರ ಡಿಸೆಂಬರ್ ತಿಂಗಳಲ್ಲಿ ಸ್ಕಿಜೋಫ್ರಿನಿಯಾ ಹೊಂದಿರುವ ರೋಗಿಗಳನ್ನು ಗುರುತಿಸಿ ಚಿಕಿತ್ಸೆ ಸೌಲಭ್ಯ ಕಲ್ಪಿಸಲು ಪ್ರಾರಂಭಿಸಲಾಯಿತು. ಸ್ಕಿಜೋಫ್ರಿನಿಯಾ ಹೊಂದಿರುವ 325 ರೋಗಿಗಳನ್ನು ಈವರೆಗೆ ಗುರುತಿಸಲಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಇದಲ್ಲದೆ ಸ್ಥಳೀಯ ಲಯನ್ಸ್ ಸಂಸ್ಥೆಯೊಂದಿಗೆ ಸಮುದಾಯ ಆರೋಗ್ಯ ಶಿಬಿರ ನಡೆಸಿ ಮಾನಸಿಕ ಆರೋಗ್ಯದ ಬಗ್ಗೆ ಜನರಲ್ಲಿ ಅರಿವನ್ನು ಮೂಡಿಸಲಾಗಿದೆ. ಈ ಶಿಬಿರಗಳಲ್ಲಿ 3500 ಕ್ಕೂ ಅಧಿಕ ಮನೋವೈದ್ಯಕೀಯ ರೋಗಿಗಳು ಚಿಕಿತ್ಸೆ ಪಡೆದಿದ್ದಾರೆ. ಈ ಪೈಕಿ 500 ಕ್ಕೂ ಹೆಚ್ಚು ಮನೋವೈದ್ಯಕೀಯ ಅಂಗವೈಕಲ್ಯ ಹೊಂದಿರುವ ರೋಗಿಗಳಿಗೆ ನಿಮ್ಹಾನ್ಸ್ ತಂಡವು ಅಂಗವೈಕಲ್ಯ ಪ್ರಮಾಣ ಪತ್ರ ನೀಡಿದೆ ಎಂದರು.
ಮಾನಸಿಕ ಆರೋಗ್ಯ ಸೇವೆಗಳ ಆಚರಣಾ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಚಂದ್ರಶೇಖರ್ ಉದ್ಘಾಟಿಸಿದರು. ನಿಮ್ಹಾನ್ಸ್ ಮನಃಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ನವೀನ್ ಕುಮಾರ್, ಹೆಚ್ಚುವರಿ ಪ್ರಾಧ್ಯಾಪಕಿ ಡಾ.ಆರತಿ ಜಗನ್ನಾಥ್ ವರ್ಚುವಲ್ ಸಭೆ ಮೂಲಕ ಮಾನಸಿಕ ಆರೋಗ್ಯದ ಬಗ್ಗೆ ತಿಳಿಸಿಕೊಟ್ಟರು. ಡಿ.ಎಲ್.ಒ. ಡಾ.ರವೀಂದ್ರನಾಯಕ್, ಆಡಳಿತ ವೈದ್ಯಾಧಿಕಾರಿ ಡಾ.ನವೀನ್, ಆರೋಗ್ಯಾಧಿಕಾರಿ ಡಾ.ರಂಗನಾಥ್, ಹಿರಿಯ ವೈದ್ಯ ಡಾ.ನಾಗರಾಜ್, ಮನಃಶಾಸ್ತ್ರಜ್ಞ ಹರೀಶ್, ರಿಸರ್ಚ್ ಸೈಂಟಿಸ್ಟ್ ಪೂನಂ, ಲಯನ್ಸ್ ಅಧ್ಯಕ್ಷ ರಂಗನಾಥ್, ಲಯನ್ಸ್ ಕ್ಲಬ್ ಪದಾಧಿಕಾರಿಗಳು ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್, ತುರುವೇಕೆರೆ




