ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಬಿಜೆಪಿ ಪಕ್ಷಕ್ಕೆ ಮರಳಿ ಕರೆ ತರುತ್ತೇನೆಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.
ಬೆಳಗಾವಿ: ಜಿಲ್ಲೆಯ ರಾಮದುರ್ಗ ಪಟ್ಟಣದ ಹೊರ ವಲಯದಲ್ಲಿರುವ ನಟರಾಜ ಸಭಾ ಭವನದಲ್ಲಿ ಶನಿವಾರ ಜರುಗಿದ ಬಿಜೆಪಿ ರಾಮದುರ್ಗ ಮಂಡಲದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಉದ್ಘಾಟಿಸಿ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡಿ ನಂತರ ಮಾತನಾಡಿದ ಅವರು “ಮುಂದಿನ ದಿನಗಳಲ್ಲಿ ಎಲ್ಲ ಭಿನ್ನಾಭಿಪ್ರಾಯಗಳನ್ನು ದೂರಮಾಡಿ ಕೆಳ ಹಂತದಿಂದ ಪಕ್ಷವನ್ನು ಕಟ್ಟಿ ನಮ್ಮೆಲ್ಲ ನಾಯಕರನ್ನು ಒಟ್ಟುಗೂಡಿಸಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ.
ಏಪ್ರಿಲ್ 9 ರಂದು ದಾವಣಗೆರೆ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ ಉಪಚುನಾವಣೆ ನಡೆಯಲ್ಲಿದ್ದು ಎರಡೂ ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲ್ಲುತ್ತಾರೆಂದು ವಿಶ್ವಾಸವಿದೆ. ನಾನೂ ಕೂಡ ನಾಳೆ ದಾವಣಗೆರೆಗೆ ನಾಡಿದ್ದು ಬಾಗಲಕೋಟೆಗೆ ಪ್ರಚಾರ ಕಾರ್ಯಕ್ಕಾಗಿ ಹೋಗುತ್ತಿದ್ದೇನೆ.

ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಪಕ್ಷಕ್ಕೆ ಮರಳಿ ಬಂದರೆ ನಾವು ಸ್ವಾಗತಿಸುತ್ತೇವೆ. ಯತ್ನಾಳ ಅವರು ಉಚ್ಛಾಟಿತರಾದ ಮರುದಿನದಿಂದಲೇ ನಾನು ಅವರನ್ನು ಬಿಜೆಪಿ ಪಕ್ಷಕ್ಕೆ ಮರಳಿ ಕರೆ ತರುವ ಪ್ರಯತ್ನ ಮಾಡುತ್ತಿದ್ದೇನೆ. ಕೊನೆಯಲ್ಲಿ ನಮ್ಮ ಪಕ್ಷದ ಹೈ ಕಮಾಂಡ್ ಏನು ತಿರ್ಮಾನ ತೆಗೆದು ಕೊಳ್ಳುತ್ತದೆ ನೋಡೋಣ” ಎಂದು ಹೇಳಿದರು.
ಬಿಜೆಪಿ ರಾಮದುರ್ಗ ಮಂಡಲದ ತಾಲೂಕಾಧ್ಯಕ್ಷ ಕೆ ವಿ ಪಾಟೀಲ ಮಾತನಾಡಿದ ನೂತನವಾಗಿ ಜವಾಬ್ದಾರಿ ವಹಿಸಿಕೊಂಡಿರುವ ಎಲ್ಲಾ ಪದಾಧಿಕಾರಿಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಅಧಿಕಾರ ಅನ್ನೋದು ಕೇವಲ ಒಂದು ಸ್ಥಾನವಲ್ಲ, ಅದೊಂದು ದೊಡ್ಡ ಜವಾಬ್ದಾರಿ ಅನ್ನೋದನ್ನು ನೀವು ಮರೆಯಬಾರದು.
ಸುಮ್ಮನೆ ಪದವಿ ಸಿಕ್ಕಿತು ಅಂತ ಮನೆಯಲ್ಲಿ ಕೂರಬಾರದು. ಹಳ್ಳಿ-ಹಳ್ಳಿಗಳಿಗೆ ಹೋಗಿ, ಜನರ ಸಮಸ್ಯೆಗಳನ್ನು ಕೇಳಿ. ನಮ್ಮ ಸಿದ್ಧಾಂತ ಏನು? ನಮ್ಮ ಗುರಿ ಏನು? ಅನ್ನೋದನ್ನು ಜನರಿಗೆ ಮುಟ್ಟಿಸಿ. ನೀವು ಎಷ್ಟು ಸಕ್ರಿಯವಾಗಿ ಇರುತ್ತೀರೋ, ಅಷ್ಟು ನಮ್ಮ ಸಂಘಟನೆಗೆ ಶಕ್ತಿ ಬರುತ್ತದೆ.”
ಈ ಸಂಧರ್ಭ ಬಿಜೆಪಿ ಜಿಲ್ಲಾ ಹಾಗೂ ತಾಲೂಕಾ ಪದಾಧಿಕಾರಿಗಳು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ: ಮಂಜುನಾಥ ಕಲಾದಗಿ




