ಬಾಗಲಕೋಟೆ: ಬಿಜೆಪಿ ಉಚ್ಚಾಟಿತ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬೆಂಬಲಿಸಿದ ಹಿನ್ನೆಲೆಯಲ್ಲಿ ಪಂಚಮಸಾಲಿ ಸಮಾಜದ ಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ಪಂಚಮಸಾಲಿ ಸಮಾಜ ಟ್ರಸ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಇದರ ಬೆನ್ನಲ್ಲೇ ಜಯಮೃತ್ಯುಂಜಯ ಶ್ರೀಗಳ ಬದಲಾವಣೆಗೆ ಚಿಂತನೆ ನಡೆದಿದೆ.ಹುನಗುಂದ ಶಾಸಕ, ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಈ ಕುರಿತು ಸುಳಿವು ನೀಡಿದ್ದಾರೆ.
ಪಂಚಮಸಾಲಿ ಸಮಾಜ ಇವರನ್ನು ಗುರುಗಳನ್ನಾಗಿ ಮಾಡಿದೆ. ಗುರುಗಳು ಸ್ವಯಂ ಘೋಷಿತರಾಗಿ ಇವರೇ ಬಂದಿಲ್ಲ. ಬದಲಾವಣೆಯ ಕಾಲ ಬಂದಾಗ ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದು, ಕೂಡಲಸಂಗಮದ ಪಂಚಮಸಾಲಿ ಪೀಠಾಧ್ಯಕ್ಷ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಬದಲಾವಣೆ ಕುರಿತು ಪರೋಕ್ಷ ಸುಳಿವು ನೀಡಿದ್ದಾರೆ.
ಸಮಾಜ ಇವರನ್ನು ಗುರುಗಳನ್ನಾಗಿ ಮಾಡಿದೆ ಕಾಲ ಬಂದಾಗ ಯಾರೂ ತಡೆಯಲು ಆಗುವುದಿಲ್ಲ. ಅವರ ಕಾಲ ಮುಗಿದಿದೆ. ಬದಲಾವಣೆ ಹಾಗೇ ಆಗುತ್ತದೆ ಎಂದು ಕಾಶಪ್ಪನವರ್ ಹೇಳಿದ್ದಾರೆ.
ಯತ್ನಾಳ್ ಮುಖ್ಯಮಂತ್ರಿ ಆಗುವುದು ತಿರುಕನ ಕನಸು. ಮುಖ್ಯಮಂತ್ರಿ ಆಗುವುದಿರಲಿ, ಅವರು 2028ರಲ್ಲಿ ಗೆದ್ದು ವಿಧಾನಸೌಧಕ್ಕೆ ಬರಲಿ ನೋಡೋಣ ಎಂದು ಕಾಶಪ್ಪನವರ್ ಸವಾಲು ಹಾಕಿದ್ದಾರೆ.
2028ಕ್ಕೆ ನಾನೇ ಸಿಎಂ ಎನ್ನುವ ಯತ್ನಾಳ್ ಹೇಳಿಕೆಗೆ ತಿರುಗೇಟು ನೀಡಿದ ಕಾಶಪ್ಪನವರ್, ಮತ್ತೆ ಗೆಲ್ಲುತ್ತೇನೆ ಎನ್ನುವುದೇ ತಿರುಕನ ಕನಸು. ಅವರು ಹಗಲುಗನಸು ಕಾಣುವವರು ಎಂದು ವ್ಯಂಗ್ಯವಾಡಿದ್ದಾರೆ.