ಬೆಳಗಾವಿ : ಜಿಲ್ಲೆಯ ಮುಗಳಖೋಡದ ಬಳಿಯ ಖಣದಾಳ ಗ್ರಾಮದಲ್ಲಿ ವಿಚಿತ್ರ ಘಟನೆ ಜನರ ಹುಬ್ಬೇರುವಂತೆ ಮಾಡಿದೆ. ಇಲ್ಲಿನ ಹುಲಿಕಾಂತೇಶ್ವರ ದೇವಾಲಯದ ಹುಂಡಿಯಲ್ಲಿ ಹರಕೆಯ ಚೀಟಿಯೊಂದು (Chit) ದೊರೆತಿದೆ.
ಬಿಳಿ ಕಾಗದದ ಮೇಲೆ “ಮುಂದಿನ ಜಾತ್ರೆಯೊಳಗೆ ನನ್ನ ಅತ್ತೆ ಸಾವಿಗೀಡಾಗಲಿ” ಎಂದು ಬರೆಯಲಾಗಿದ್ದು, ಅದರೊಂದಿಗೆ ₹100 ನೋಟನ್ನು ಜೋಡಿಸಿ ಹಾಕಿರುವುದು ಕಂಡುಬಂದಿದೆ.
ಫೆಬ್ರವರಿ 13ರಿಂದ 17ರವರೆಗೆ ಜಾತ್ರೆ ನಡೆದಿದ್ದು , ಇದಾದ ನಂತರ ದೇವಾಲಯದ ಸಮಿತಿಯವರು ಹುಂಡಿ ತೆರೆಯುವ ವೇಳೆ ಈ ಪತ್ರ ಕಂಡುಬಂದಿದೆ. ಹುಂಡಿ ಎಣಿಕೆಯ ಸಂದರ್ಭದಲ್ಲಿ ವಿವಿಧ ಹರಕೆಗಳ ನಡುವೆ ಈ ವಿಚಿತ್ರ ಮನವಿ ಅಚ್ಚರಿ ಮೂಡಿಸಿದೆ.
ಈ ಕುರಿತು ಸಮಿತಿ ಅಧ್ಯಕ್ಷ ರಾಮಕೃಷ್ಣ ದಳವಾಯಿ ಪ್ರತಿಕ್ರಿಯಿಸಿ, ಎರಡು ಚೀಟಿಗಳು ಸಿಕ್ಕಿವೆ ಎಂದು ತಿಳಿಸಿದ್ದಾರೆ. ಒಂದರಲ್ಲಿ ಕಷ್ಟ ನಿವಾರಣೆಗೆ ಪ್ರಾರ್ಥನೆ ಇದ್ದರೆ, ಮತ್ತೊಂದರಲ್ಲಿ ಅತ್ತೆಯ ಮರಣದ ಬೇಡಿಕೆ ಉಲ್ಲೇಖವಾಗಿದೆ. ಇದನ್ನು ಯಾರು ಬರೆದಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಇಂತಹ ಮನಸ್ಥಿತಿಯ ಚೀಟಿ ಮೊದಲ ಬಾರಿಗೆ ಪತ್ತೆಯಾಗಿದೆ ಎಂದು ಅವರು ಹೇಳಿದ್ದಾರೆ.




