Ad imageAd image

ಶಿಕ್ಷಕರ ದಿನಾಚರಣೆ ನಿಮಿತ್ಯ ನನ್ನದೊಂದು ಬರವಣಿಗೆ

Bharath Vaibhav
ಶಿಕ್ಷಕರ ದಿನಾಚರಣೆ ನಿಮಿತ್ಯ ನನ್ನದೊಂದು ಬರವಣಿಗೆ
WhatsApp Group Join Now
Telegram Group Join Now

ನಮ್ಮ ಹೆಮ್ಮೆಯ ಶಿಕ್ಷಕರ ಬಗ್ಗೆ ಬರೀಬೇಕು ಅನಿಸಿತು ಅದಕ್ಕೆ ಇದ್ದಿದ್ದೂ ಇದ್ದಂಗೆ ಬರೆದಿದ್ದಿನಿ ನನ್ನ ಅರೆ ಬರೆ ಜ್ಞಾನದ ಕುಂಚದಿಂದ…✒️ನಾನು ನಿಮ್ಮ ಬಸವರಾಜು. ಪತ್ರಕರ್ತರು ಹಾಗೂ ಬರಹಗಾರರು. 6360224654

ಪ್ರತಿ ವರ್ಷದಂತೆ ಈ ಬಾರಿಯೂ ಶಿಕ್ಷಕರ ದಿನಾಚರಣೆ ಬಂದಿದೆ, ನಮ್ಮ ಹೆಮ್ಮೆಯ ಮೇಷ್ಟ್ರುಗಳನ್ನು ಹೊಗಳಲು ಎಲ್ಲರೂ ಸಜ್ಜಾಗಿದ್ದೇವೆ, ಅವರಿಗೆ ಹೊಗಳಿಕೆ ಅಷ್ಟೇ ಸಾಕೆ ? ಬದಲಾದ ಕಾಲದಲ್ಲಿ ತನ್ನ ಸ್ಥಾನಕ್ಕಾಗಿ ಹೊಡೆದಾಡುವ ಈ ಹೊತ್ತಿನಲ್ಲಿ, ಶಿಕ್ಷಕರ ದಿನದಂದು ಅವರ ಮುಖದಲ್ಲಿ ಒಂದು ನಗು ತರುವ ಪ್ರಯತ್ನವಾದರೂ ಆಗಬೇಕಾಗಿದೆ. ಆಗ ಮಾತ್ರ ಈ ದಿನಕ್ಕೊಂದು ಅರ್ಥ ಬರುತ್ತದೆ.

ಮಕ್ಕಳು ನಲಿಯುತ್ತಾ ಕಲಿಯಬೇಕು. ಅದರಂತೆ ಕಲಿಸುವವರು ಕೂಡ ಅಷ್ಟೇ ಖುಷಿಯಿಂದ ಕಲಿಸಬೇಕು. ಆಗ ಮಾತ್ರ ಬೋಧನೆ ಪರಿಣಾಮಕಾರಿ, ನಾವೀಗ ಯೋಚಿಸಬೇಕಾದದ್ದು ಕಲಿಸುವವರ ಮುಖದಲ್ಲಿ ನಗು ಇದೆಯಾ ಎಂಬ ಬಗ್ಗೆ, ‘ಶಿಕ್ಷಕರ ಸ್ಥಾನಮಾನಗಳು ಉತ್ತಮವಾಗಿ ಇಲ್ಲದ ನಾಡು ಪ್ರಗತಿ ಕಾಣುವುದು ಕಷ್ಟ”.

ತಂದೆ ತಾಯಿಯರ ಪಾತ್ರಗಳೇ ದುರ್ಬಲ ವಾಗುತ್ತಿರುವ ಹೊತ್ತಿನಲ್ಲಿ, ಶಿಕ್ಷಕನಾದವರು ಮಾತ್ರ ಅದೇ ಮೊದಲಿನ ಗುರುವಿನಂತೆ ಇರಬೇಕೆಂದು ಬಯಸುವುದು ತಪ್ಪಾಗುತ್ತದೆ. ಅಷ್ಟಕ್ಕೂ ಪಾಠ ಹೇಳುವುದು ಹೆಚ್ಚಿನವರಿಗೆ ಒಂದು ಜೀವನೋಪಾಯದ ವೃತ್ತಿಯಾಗಿದೆಯೇ ವಿನಾ ಅದು ಸೇವೆಯ ಗಡಿ ದಾಟಿ ತುಂಬಾ ದಿನಗಳಾದವು. ಸಾಮಾಜಿಕ ವ್ಯವಸ್ಥೆಯು ತಾನು ಮಾತ್ರ ಬಹಳ ದೂರಬಂದಿದೆ ಆದ್ರೇ ಶಿಕ್ಷಕರು ಮಾತ್ರ ಈ ಮೊದಲಿದ್ದಂತೆ ಉಳಿದ ಹಾಗೆಯೇ ಇರಬೇಕೆಂದು ಬಯಸುವುದು ತರವಲ್ಲ.ಶಿಕ್ಷಕರು ಆದವರು ಸಾಮಾಜಿಕ ವ್ಯವಸ್ಥೆಯ ಮಧ್ಯದಿಂದಲೇ ಬಂದವರು ವಿನಾ ಎಲ್ಲಿಂದಲೋ ಅವತರಿಸಿದವರಲ್ಲ…! ಹಾಗಾಗಿ ಇವತ್ತಿನ ಸಾಮಾಜಿಕ ವ್ಯವಸ್ಥೆಗೆ ತಕ್ಕಂತೆ ಶಿಕ್ಷಕರು ಕೂಡ ಇರುತ್ತಾರೆ.(ಹಾಗಾಗಬಾರದೆಂಬುದು ನನ್ನ ಅಭಿಪ್ರಾಯ ಕೂಡ)ಆದರೆ ಈಗ ಬರೀ ಕಲಿಸುವುದಷ್ಟೇ ಶಿಕ್ಷಕರ ಕೆಲಸವಲ್ಲ.

ಅವರಷ್ಟು…ಏಕಪಾತ್ರಾಭಿನಯ ಮಾಡುವವರು ಯಾರೂ ಇಲ್ಲ. ಪಠ್ಯಪುಸ್ತಕ, ಯೂನಿಫಾರಂ ಹೊರಬೇಕು, ಜನ, ದನ, ಕೋಳಿ ಕುರಿ ಎಣಿಸಬೇಕು, ಚುನಾವಣೆ ಕಾರ್ಯಕ್ಕೆ ಹೋಗಬೇಕು, ಅಡುಗೆ ಲೆಕ್ಕ, ತರಕಾರಿ, ಮೊಟ್ಟೆ, ಚಿಕ್ಕಿ, ಬಾಳೆಹಣ್ಣು ಖರೀದಿ, ಶೌಚಾಲಯ ಜಾಗೃತಿ, ಆನ್‌ಲೈನ್‌ನಲ್ಲಿ ಮಕ್ಕಳ ಕಲಿಕಾ ಮಾಹಿತಿ ಸತತವಾಗಿ ತುಂಬುವುದು, ನಿರಂತರ ಮೌಲ್ಯ ಮಾಪನ, ಕಂಪ್ಯೂಟರ್ ಮುಂದೆ ಕೂತು, ಪಾಲಕರ ಪರವಾಗಿ ಸ್ಕಾಲ‌ರಶಿಪ್ ಅರ್ಜಿ ಹಾಕುವುದರಿಂದ ಹಿಡಿದು ಶಾಲೆ ಸೋರುತ್ತಿದ್ದರೆ ಹತ್ತಿ ಹೆಂಚು ಹೊದಿಸುವವರೆಗೂ ಅವರ ಕೈಯಲ್ಲಿ ಕೆಲಸಗಳಿವೆ, ಪಾತ್ರಗಳಿವೆ.

ಇವುಗಳ ಮಧ್ಯ ಪಠ್ಯಕ್ರಮ ಕರಾರುವಕ್ಕಾಗಿ ಮುಗಿಸಬೇಕು.ಪರೀಕ್ಷೆ ನಡೆಸಬೇಕು.ಮೌಲ್ಯ ಮಾಪನ‌ಮಾಡಿ ಪರಿಣಾಮ‌ಪಟ್ಟಿ ಸಿದ್ದಪಡಿಸಿ ಮಕ್ಕಳಿಗೆ ಮಾತ್ರವಲ್ಲ ಇಲಾಖೆಯ ಅಧಿಕಾರಿಗಳಿಗೆ ತಲುಪಿಸಬೇಕು.ಶಿಕ್ಷಕರ ಕೆಲಸ ಶಾಲೆಯಲ್ಲಿ ಮಾತ್ರವಲ್ಲದೆ ಮನೆಯಲ್ಲೂ ನಿರಂತರ…ಒಟ್ಟಾರೆ 24×7.ಇತ್ತೀಚಿನ ವರದಿಯೊಂದು ಕಾರ್ಯ ಒತ್ತಡದ ಪರಿಣಾಮವಾಗಿ ಶೇ. 42ರಷ್ಟು ಶಿಕ್ಷಕ ಹಾಗೂ ಶಿಕ್ಷಕಿಯರು ಮಧುಮೇಹ ಮತ್ತು ರಕ್ತದೊತ್ತಡದಿಂದ ಬಳಲುತ್ತಿದ್ದಾರೆ ಎನ್ನುತ್ತದೆ. ಆದರೆ ಈ ಸಮಾಜ ಒಂದೆರಡು ಉದಾಹರಣೆಗಳನ್ನು ತೆಗೆದುಕೊಂಡು, ಈಗೀಗ ಮೇಷ್ಟ್ರುಗಳು ಸರಿಯಿಲ್ಲ ಅನ್ನುವ ತೀರ್ಮಾನಕ್ಕೆ ಬರುತ್ತದೆ.

ರಸ್ತೆಯಲ್ಲಿ ನಡೆದುಹೋಗುವ ಯಾವುದೋ ಹುಡುಗನ ಉದ್ಧಟತನವನ್ನು ಕಂಡ ಸಮಾಜ ‘ಯಾರು ನಿಂಗೆ ಪಾಠ ಹೇಳಿದ್ದು?’ ಅಂತ ನೇರವಾಗಿ ಶಿಕ್ಷಕರ ಬುಡಕ್ಕೆ ಬರುತ್ತದೆ. ಆದರೆ ಅದೇ ಸಾಧನೆ ಮಾಡಿದರೆ ಮಾತ್ರ ‘ಯಾರ ಮಗ’ ಎಂದು ಕೇಳುತ್ತದೆ. ಈಗೀಗ ಮಗುವಿನ ಮೇಲೆ ಶಿಕ್ಷಕರಿಗಿಂತ, ಶಾಲೆಗಿಂತ ಹೆಚ್ಚು ಪ್ರಭಾವ ಬೀರಲು ಅವನದೇ ಮನೆಯ ಪರಿಸರ, ಹಾಗೂ ಮಾಧ್ಯಮಗಳಿವೆ. ಮಕ್ಕಳನ್ನು ಅಡ್ಡದಾರಿಗೆ ಎಳೆಯುವ ಹೆದ್ದಾರಿಗಳು ಮನೆ ಮುಂದೆ ಬಂದು ನಿಂತಿವೆ, ಕಲಿಸುವ ಶಿಕ್ಷಕರು ಗೌಣವಾಗುತ್ತಿರುವುದು ಇದೇ ಕಾರಣಕ್ಕೆ, ‘ಯ ರ ಲ ವ ಕಲಿಸಿದವರನ್ನೇ “ಯಾರ್ಲೆ ಅಂವಾ ಅಂತ ಅನ್ನುವ ಪೀಳಿಗೆಯ ಮಧ್ಯೆ, ಒಬ್ಬ ಒಳ್ಳೆಯ ಶಿಕ್ಷಕ ನಿಜಕ್ಕೂ ಕಳೆದು ಹೋಗುತ್ತಿದ್ದಾನೆ.

ಒಟ್ಟಾರೆ ಈ ವೃತ್ತಿ ಈ ಮೊದಲಿನಂತೆ ಇಲ್ಲವಾಗಿದೆ. ಈ ಮಧ್ಯದಲ್ಲೂ ಆದ್ಯತೆಯ ಆಯ್ಕೆಯಾಗಿ ಶಿಕ್ಷಕ ವೃತ್ತಿಯನ್ನು ಆಯ್ದುಕೊಂಡು ಮಕ್ಕಳಿಗಾಗಿ ಕೆಲಸ ಮಾಡುವ ಶಿಕ್ಷಕರ ಕೊರತೆ ಇಲ್ಲ.ಜೀವನದ ಮಾರ್ಗದಲ್ಲಿ ಸಮಯಾನುಸಾರ ಜ್ಞಾನ ದಾನ ಮಾಡಿದ ಎಲ್ಲರೂ ಶಿಕ್ಷಕರೇ. ತಂದೆ-ತಾಯಿ,ಗುರು ಹಿರಿಯರು,ಸ್ನೇಹಿತರು,ಬಂಧು ವರ್ಗದವರು ಮಾತ್ರವಲ್ಲ ಈ ಅದ್ಭುತ ಸೃಷ್ಟಿ ಕೂಡ ನಮ್ಮ ಕಲಿಕೆಗೆ ದಾರಿ ತೋರಿದೆ. ಕಾರಣ ನಮ್ಮ ಜೀವನದ ಸರ್ವತೋಮುಖ ಪ್ರಗತಿಗೆ ಕಾರಣರಾದ ಎಲ್ಲರಿಗೂ ನಮಿಸುವದು, ಸ್ಮರಿಸುವದು ನಮ್ಮ ಆದ್ಯ ಕರ್ತವ್ಯ.ವಿಶೇಷವಾಗಿ ಈ ದಿನವನ್ನು ಆಚರಿಸಲು ಕಾರಣ ಕರ್ತರಾದ ಡಾ‌. ಸರ್ವಪಲ್ಲಿ ರಾಧಾಕೃಷ್ಣನ್ ಅವರನ್ನೊಳಗೊಂಡಂತೆ ಎಲ್ಲರಿಗೂ ಶಿರಬಾಗಿ ನಮಿಸುತ್ತಾ ಒಂದೆರಡು ನನ್ನ ಭಾವನಾತ್ಮಕ ಮಾತಿನ ಬರವಣಿಗೆ..👍

ಶಿಕ್ಷಕರು ಯಾವತ್ತೂ ನಮಗೆ ಮಾರ್ಗದರ್ಶನ ಮಾಡುವವರು. ನಮಗೆ ಸ್ಫೂರ್ತಿ ತುಂಬಿ ನಮ್ಮನ್ನು ಸಮಾಜದ ಉತ್ತಮ ನಾಗರಿಕರನ್ನಾಗಿ ರೂಪಿಸುವವರು. ಶಿಕ್ಷಕರು ನಮ್ಮ ಜೀವನದ ಭದ್ರ ಬುನಾದಿ ಹಾಕಿಕೊಡುವವರು. ಮನೆಯೇ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರುವು ಎಂಬ ಮಾತೊಂದಿದೆ. ಆ ಬಳಿಕದ ಸ್ಥಾನ ಶಾಲೆಯಲ್ಲಿ ಪಾಠ ಕಲಿಸುವ ಗುರುವಿಗೆ ಸಲ್ಲುತ್ತದೆ. ಶಿಕ್ಷಕರ ದಿನಾಚರಣೆಯನ್ನು ಪ್ರತಿ ವರ್ಷ ಸಪ್ಟೆಂಬರ್ 5 ರಂದು ಆಚರಿಸಲಾಗುತ್ತದೆ. ಇದು ಶಿಕ್ಷಕರಿಗೆ ಗೌರವ, ಅಭಿನಂದನೆ, ಶುಭಹಾರೈಕೆ ಹೇಳುವ ದಿನ. ಇದು ಶಿಕ್ಷಕ, ವಿದ್ವಾಂಸ ಮತ್ತು ತತ್ವಜ್ಞಾನಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನ. ರಾಧಾಕೃಷ್ಣನ್ ಅವರು ದೇಶದ ಮೊದಲ ಉಪ ರಾಷ್ಟ್ರಪತಿ ಹಾಗೂ ಎರಡನೇ ರಾಷ್ಟ್ರಪತಿಯೂ ಹೌದು.

ಇವರು ಉಪರಾಷ್ಟ್ರಪತಿಯಾದ ಸಂದರ್ಭದಲ್ಲಿ
ಡಾ.ರಾಧಾಕೃಷ್ಣನ್ ಅವರು ಮೈಸೂರು ವಿಶ್ವವಿದ್ಯಾಲಯದ ಮಹಾರಾಜ ಕಾಲೇಜಿನಲ್ಲಿ ತತ್ತ್ವಶಾಸ್ತ್ರ ವಿಭಾಗದಲ್ಲಿ ಅಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ತಮ್ಮ ಗುರು ಉಪರಾಷ್ಟ್ರಪತಿಯಾಗಿ ದೆಹಲಿಗೆ ಹೊರಡುವ ಸಂದರ್ಭದಲ್ಲಿ ಮಹಾರಾಜ ಕಾಲೇಜಿನ ವಿದ್ಯಾರ್ಥಿಗಳು, ಅವರನ್ನು ಕಳುಹಿಸಿ ಕೊಡಲು ಸಾರೋಟನ್ನು ತಂದು ಅಲಂಕರಿಸಿ, ಕುದುರೆಯ ಬದಲು ತಾವೇ ಕುದುರೆಗಳಂತೆ, ರಾಧಾಕೃಷ್ಣನ್ ಅವರು ಕುಳಿತ ಸಾರೋಟನ್ನು ಪ್ರೀತಿಪೂರ್ವಕವಾಗಿ ರೈಲ್ವೆ ನಿಲ್ದಾಣದವರೆಗೂ ಎಳೆದು ಕೊಂಡು ಹೋಗಿ, ಭಾವಪೂರ್ಣ ವಿದಾಯ ಹೇಳಿದ್ದರು. ಈ ಸನ್ನಿವೇಶವನ್ನು ಕಂಡು ರಾಧಾಕೃಷ್ಣನ್ ಅವರು ಭಾವುಕರಾಗಿದ್ದರಂತೆ. ಅವರು ಆಗಾಗ ಈ ಸಂದರ್ಭವನ್ನು ನೆನೆಸಿಕೊಳ್ಳುತ್ತಿದ್ದರು.

ಇದೇ ಸಂದರ್ಭದಲ್ಲಿ ರಾಧಾಕೃಷ್ಣನ್ ಕುರಿತು ಅಮೆರಿಕಾದಲ್ಲಿ ‘ಫಿಲಾಸಫಿ ಆಫ್ ಡಾ.ಸರ್ವಪಲ್ಲಿ ರಾಧಾಕೃಷ್ಣನ್’ ಪುಸ್ತಕ ಬಿಡುಗಡೆಗೊಂಡಿತು.
‘ಡಾ. ರಾಜೇಂದ್ರ ಪ್ರಸಾದ್’ ನಂತರ, 1962 ರಲ್ಲಿ ಭಾರತದ ಎರಡನೇ ರಾಷ್ಟ್ರಪತಿಯಾಗಿ ಆಯ್ಕೆಯಾದ ರಾಧಾಕೃಷ್ಣನ್, ತಮ್ಮ ಅಧಿಕಾರಾವಧಿಯಲ್ಲಿ ದೇಶದ ಸರ್ವತೋಮುಖ ಏಳಿಗೆಗೆ ಅವಿರತ ಶ್ರಮಿಸಿದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸಂಬಂಧಗಳನ್ನು ಉನ್ನತೀಕರಣಗೊಳಿಸುತ್ತಾ, ದೇಶದೊಳಗಿನ ಆಂತರಿಕ ಕಲಹಗಳಿಗೆ ತಿಲಾಂಜಲಿ ನೀಡುತ್ತಾ, ದೇಶವನ್ನು ಸುಭಿಕ್ಷವಾಗಿಸಿದ ಕೀರ್ತಿ ‘ಡಾ.ರಾಧಾ ಕೃಷ್ಣನ್’ ಅವರಿಗೆ ಸಲ್ಲುತ್ತದೆ.

1962 ರಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್ ಭಾರತದ ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿದರು. ಅವರ ಕೆಲ ವಿದ್ಯಾರ್ಥಿಗಳು ಹಾಗೂ ಗೆಳೆಯರು ಅವರನ್ನು ಭೇಟಿಯಾಗಿ ಅವರ ಹುಟ್ಟುಹಬ್ಬವನ್ನು ಆಚರಿಸಲು ಅನುಮತಿ ಕೇಳಿದರಂತೆ. ಆದರೆ, ಅವರು ಸಪ್ಟೆಂಬರ್ 5 ನ್ನು ಹುಟ್ಟುಹಬ್ಬ ಎಂದು ಆಚರಿಸುವ ಬದಲು ಶಿಕ್ಷಕರ ದಿನ ಎಂದು ಆಚರಿಸಿದರೆ ಹೆಚ್ಚು ಸಂತೋಷ ಎಂದು ಪ್ರತಿಕ್ರಿಯಿಸಿದರಂತೆ. ಆ ಬಳಿಕ, ಸಪ್ಟೆಂಬರ್ 5ನ್ನು ಶಿಕ್ಷಕರ ದಿನ ಎಂದು ಆಚರಣೆ ಮಾಡಲಾಗುತ್ತಿದೆ. ಸರ್ವಪಲ್ಲಿ ರಾಧಾಕೃಷ್ಣನ್ ಸಪ್ಟೆಂಬರ್ 5, 1888 ರಂದು ತಮಿಳುನಾಡಿನ ತಿರುಮಾಣಿ ಹಳ್ಳಿಯ ಬ್ರಾಹ್ಮಣ ಕುಟುಂಬ ಒಂದರಲ್ಲಿ ಜನಿಸಿದರು. ಅವರು ಬಾಲ್ಯದಲ್ಲೇ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಿದ್ದರು. ಹಾಗೂ ಸ್ವಾಮಿ ವಿವೇಕಾನಂದರಿಂದ ಸ್ಫೂರ್ತಿ ಪಡೆದಿದ್ದರು. ರಾಧಾಕೃಷ್ಣನ್ 1975 ಏಪ್ರಿಲ್ 17 ರಂದು ಚೆನ್ನೈನಲ್ಲಿ ನಿಧನ ಹೊಂದಿದರು.

ಶಿಕ್ಷಕರ ದಿನಕ್ಕೆ ವಿಶೇಷ ಗೌರವ ಇದೆ. ಈ ದಿನದಂದು ಎಲ್ಲಾ ಶಿಕ್ಷಣ ವಿಭಾಗದ, ಎಲ್ಲಾ ಶೈಕ್ಷಣಿಕ ಹಂತದ ವಿದ್ಯಾರ್ಥಿಗಳು ತಮ್ಮ ಗುರುಗಳಿಗೆ ಗೌರವ ಸಲ್ಲಿಸುತ್ತಾರೆ. ಸಮಾಜದ ಬೆಳವಣಿಗೆಯಲ್ಲಿ ಶ್ರಮಿಸುವ ಶಿಕ್ಷಕ ವರ್ಗಕ್ಕೆ ಶುಭ ಹಾರೈಸಲಾಗುತ್ತದೆ.ಶಿಕ್ಷಕರ ದಿನದಂದು ವಿದ್ಯಾರ್ಥಿಗಳು ಶಿಕ್ಷಕರಿಗೆ ಪೆನ್, ಗುಲಾಬಿ, ಹೂಗುಚ್ಛ ಇತ್ಯಾದಿಗಳನ್ನು ನೀಡಿ ಶುಭಹಾರೈಸುತ್ತಾರೆ. ಶಿಕ್ಷಕರ ದಿನಾಚರಣೆ ಎಂಬ ಪರಿಕಲ್ಪನೆ ಭಾರತ ಮಾತ್ರವಲ್ಲ ವಿದೇಶಗಳಲ್ಲಿಯೂ ಇದೆ.

ಉದಾಹರಣೆಗೆ, ಚೀನಾದಲ್ಲಿ ಸಪ್ಟೆಂಬರ್ 10 ರಂದು ಶಿಕ್ಷಕರ ದಿನ ಆಚರಿಸಲಾಗುತ್ತದೆ. ಅಮೇರಿಕಾದಲ್ಲಿ ಮೇ 6, ಅಕ್ಟೋಬರ್​ನ ಕೊನೆಯ ಶುಕ್ರವಾರದಂದು ಆಸ್ಟ್ರೇಲಿಯಾದಲ್ಲಿ, ಅಕ್ಟೋಬರ್ 15 ರಂದು ಬ್ರೆಜಿಲ್​ನಲ್ಲಿ, ಅಕ್ಟೋಬರ್ 5 ರಂದು ಪಾಕಿಸ್ತಾನದಲ್ಲಿ ಶಿಕ್ಷಕರ ದಿನ ಆಚರಿಸಲಾಗುತ್ತದೆ.ಅಕ್ಟೋಬರ್ 5 ರಂದು ವಿಶ್ವ ಶಿಕ್ಷಕರ ದಿನ ಎಂದು ಆಚರಿಸಲಾಗುತ್ತದೆ.ಇತ್ತೀಚೆಗೆ ದೇಶದ ಪ್ರಥಮ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆ ಅವರ ಹೆಸರಿನಲ್ಲಿ  ಜನೇವರಿ 3 ರಂದು ಶಿಕ್ಷಕಿಯರ ದಿನ ಆಚರಣೆ ಕೂಡಾ ಆರಂಭವಾಗಿದೆ. ಈ ಎಲ್ಲಾ ಸಂದರ್ಭಗಳಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ವಿಶೇಷ ಸೇವೆ ಸಲ್ಲಿಸಿದ ಶಿಕ್ಷಕರನ್ನು ಗುರುತಿಸಿ ತಾಲೂಕು, ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.ಈ ಬಾರಿಯೂ ಇಂದು ಆ ಗೌರವವನ್ನು ಪಡೆದ ಎಲ್ಲ ಶಿಕ್ಷಕರಿಗೆ ಅಭಿನಂದನೆಗಳು.ಸಮಸ್ತ ಎಲ್ಲಾ ಗೌರವಾನ್ವಿತ ” ಶಿಕ್ಷಕ-ಶಿಕ್ಷಕಿಯರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು ”

 ವರದಿ:- ಬಸವರಾಜು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!