
ಇಂದು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯು ನಡೆಯುತ್ತಿದ್ದು, ಡಿವಿಆರ್ ಮತ್ತು ಬ್ಯಾಟರಿ ಇಲ್ಲದೆ ತೊಂದರೆಯಾಗುತ್ತಿರುವ ಹಿನ್ನಲೆಯಲ್ಲಿ ಕಾಲೇಜು ಆಡಳಿತ ಮಂಡಲಿ ತರಾತುರಿಯಲ್ಲಿ ಪರ್ಯಾಯ ವ್ಯವಸ್ಥೆಗೆ ಮುಂದಾಗಿದೆ.
ಪ್ರವಾಸಿ ಮಂದಿರದ ಬಳಿ ಪಟ್ಟಣ ಪೊಲೀಸ್ ಠಾಣೆ ಇದ್ದ ವೇಳೆ ಯಾವುದೇ ರೀತಿಯ ಕಳ್ಳತನ ಪ್ರಕರಣಗಳು ನಡೆಯುತ್ತಿರಲಿಲ್ಲ. ಪಟ್ಟಣ ಠಾಣೆಯನ್ನು ಸಂತೇಮರಹಳ್ಳಿ ರಸ್ತೆಯಲ್ಲಿ ನಿರ್ಮಿಸಿರುವ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡ ಬಳಿಕ ಕಳ್ಳರು ತಮ್ಮ ಕೈ ಚಳಕ ತೋರಿಸುತ್ತಿದ್ದಾರೆ, ಕುವೆಂಪು ಬಡಾವಣೆ, ಡಾ. ಬಿ.ಆರ್. ಅಂಬೇಡ್ಕರ್ ಬಡಾವಣೆ, ಮುಬಾರಕ್ ಮೊಹ್ಲಲಾದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಪಟ್ಟಣ ಪೊಲೀಸರು ರಾತ್ರಿ ವೇಳೆ ಗಸ್ತು ಹಾಕುವ ಕೆಲಸ ಚುರುಕು ಮಾಡಿದಾಗ ಮಾತ್ರ ಕಳ್ಳತನ ಪ್ರಕರಣಗಳು ನಿಲ್ಲಲಿದೆ ಎಂದು ಅಕ್ಕ ಪಕ್ಕದ ನಿವಾಸಿಗಳು ಹೇಳುವರು.ಗುರುವಾರ ಬೆಳಗಿನ ಜಾವ ಸರ್ಕಾರಿ ಪದವಿ ಪೂರ್ವ ಬಾಲಕರ ಕಾಲೇಜಿನಲ್ಲಿ ನಡೆದಿರುವ ಕಳ್ಳತನ ಪ್ರಕರಣದಲ್ಲಿ ಸುಮಾರು ಒಂದೂವರೆ ಲಕ್ಷರೂ ಮೌಲ್ಯದ ಬ್ಯಾಟರಿಗಳು, ಸಿಸಿ ಕ್ಯಾಮರಾದ ಡಿವಿಆರ್ ಗಳನ್ನು ಕಳ್ಳರು ಕದ್ದು ಹೋಗಿದ್ದಾರೆ. ಭಾರಿ ತೂಕದ ಬ್ಯಾಟರಿಗಳನ್ನು ಕದ್ದು ಹೋಗಿರುವುದು ಕಳ್ಳರ ಕೈ ಚಳಕ ತೋರ್ಪಡಿಸುತ್ತದೆ.ಈ ಬಗ್ಗೆ ಪಟ್ಟಣ ಪೊಲೀಸರು ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ವರದಿ : ಸ್ವಾಮಿ ಬಳೇಪೇಟೆ

