ಇತ್ತೀಚಿನ ದಿನಗಳಲ್ಲಿ ಡಿವೋರ್ಸ್ಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಅಲ್ಲದೇ ಕೌಟುಂಬಿಕ ಕಾರಣಗಳಿಂದ ಪತಿಯೇ ಪತ್ನಿಯನ್ನು ಕೊಲೆ ಮಾಡುವುದು ಅಥವಾ ಪತ್ನಿಯೇ ಪತಿಯನ್ನು ಕೊಲ್ಲುವ ಘಟನೆಗಳು ಕೂಡ ಹೆಚ್ಚಾಗಿ ನಡೆಯುತ್ತಿದೆ. ಹಾಗಾದರೆ ಒಂದು ಸಂಸಾರ ಚೆನ್ನಾಗಿರಬೇಕು, ಪತಿ-ಪತ್ನಿಯ ನಡುವೆ ಹೊಂದಾಣಿಕೆ ಹೇಗಿರಬೇಕು ಎನ್ನುವುದರ ಬಗ್ಗೆ ಶ್ರೀರಸ್ತು ಶುಭಮಸ್ತು ಧಾರಾವಾಹಿ ನಟಿ ಸಪ್ನಾ ದೀಕ್ಷಿತ್ ಮಾತನಾಡಿದ್ದಾರೆ.
ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಅವರು, ‘ಜೀವನ ಅಂದರೆ ಹೊಂದಾಣಿಕೆ ಮಾಡಿಕೊಂಡು ಹೋಗುವುದು. ಅಪ್ಪ-ಅಮ್ಮನ ಜೊತೆಗೆ ಇದ್ದಾಗಲೂ ಕೂಡ ನಾವು ಹೊಂದಾಣಿಕೆ ಮಾಡಿಕೊಂಡು ಹೋಗುತ್ತೇವೆ. ಯಾಕೆಂದರೆ ಅವರ ಮೇಲೆ ಅಂತಹ ಗೌರವ, ಭಯ ಇದ್ದೇ ಇರುತ್ತದೆ. ಅದೇ ರೀತಿ ಗಂಡನ ಜೊತೆಯಲ್ಲಿ ಸ್ವಲ್ಪ ಹೊಂದಾಣಿಕೆ ಮಾಡಿಕೊಳ್ಳಿ. ಮೊದಲು ಕಷ್ಟವಾಗುತ್ತದೆ ಆದರೆ ಜೀವನ ಮುಂದೆ ಸಾಗುತ್ತಾ ಅವರು ನಮ್ಮನ್ನು ಅರ್ಥ ಮಾಡಿಕೊಳ್ಳುತ್ತಾರೆ. ನಾವು ಅವರನ್ನು ಅರ್ಥ ಮಾಡಿಕೊಳ್ಳುತ್ತೇವೆ’ ಎಂದರು.
‘ಇತ್ತೀಚಿನ ದಿನಗಳಲ್ಲಿ ದಂಪತಿಗಳ ಮಧ್ಯೆ ಸಂವಹನ ಅಂದರೆ ಮಾತಿನ ಸಮಸ್ಯೆಯಾಗುತ್ತಿದೆ. ನಿಮ್ಮ ಗಂಡ ಅಥವಾ ಹೆಂಡತಿ ಬಗ್ಗೆ ಏನೋ ವಿಚಾರ ಸರಿ ಅನಿಸದೇ ಇದ್ದರೆ ಯಾರೋ ಮೂರನೇ ವ್ಯಕ್ತಿ ಬಳಿ ಹೋಗಿ ಹೇಳಬೇಡಿ. ನಿಮ್ಮ ಸಂಗಾತಿ ಜೊತೆಗೆ ಹೇಳಿಕೊಂಡು ಬಗೆಹರಿಸಿಕೊಳ್ಳಿ. ಇವತ್ತು ಇವನು ಇಷ್ಟವಾಗುತ್ತಿಲ್ಲ ಅಂತಾ ಬಿಟ್ಟುಬಿಡುತ್ತೇವೆ. ನಾಳೆ ಸಿಗುವ ಮತ್ಯಾರೋ ವ್ಯಕ್ತಿ ಜೀವನ ಪರ್ಯಂತ ನಮ್ಮ ಜೊತೆ ಚೆನ್ನಾಗಿ ಇರುತ್ತಾನೆ ಅಂತಾ ಏನು ಗ್ಯಾರಂಟಿ’ ಎಂದು ಪ್ರಶ್ನಿಸಿದರು. ‘ಹೊಸ ವ್ಯಕ್ತಿಯಲ್ಲಿ ಮತ್ತೆ ಸೊನ್ನೆಯಿಂದ ಜೀವನ ಆರಂಭಿಸಬೇಕು. ಅದರ ಬದಲು ಈ ವ್ಯಕ್ತಿಯ ಜೊತೆಗೆ ಇದ್ದು ಸಮಸ್ಯೆ ಬಗೆಹರಿಸಿಕೊಂಡು ಹೋಗಬಹುದಲ್ಲ. ನನ್ನ ಪ್ರಕಾರ ಇಬ್ಬರು ಸ್ವಲ್ಪ ಹೊಂದಾಣಿಕೆ ಮಾಡಿಕೊಂಡು ಕೂತು ಮಾತಾಡಿ ಸಮಸ್ಯೆ ಬಗೆ ಹರಿಸಿಕೊಳ್ಳಬಹುದಲ್ಲಾ, ನಮ್ಮ ನಮ್ಮ ತಪ್ಪುಗಳನ್ನು ಒಪ್ಪಿಕೊಂಡು ತಿದ್ದಿಕೊಂಡು ಹೋದರೆ ಡಿವೋರ್ಸ್ಗಳು ಯಾಕೆ ನಡೆಯುತ್ತವೆ’ ಎಂದು ಪ್ರಶ್ನಿಸಿದರು.
‘ಇನ್ನು ಕೆಲವು ಸಂದರ್ಭದಲ್ಲಿ ನಿಮ್ಮ ಸಂಗಾತಿಯನ್ನೇ ಸಾಯಿಸುವ ಮನಸ್ಥಿತಿ ನಿಮಗೆ ಬಂದಿದೆ ಎಂದ ಮೇಲೆ ಅಂತಹ ಸಮಯದಲ್ಲಿ ಅವರನ್ನು ಬಿಟ್ಟುಬಿಡಿ. ಅಂತಹ ಸಮಯದಲ್ಲಿ ಡಿವೋರ್ಸ್ ಒಳ್ಳೆಯ ಆಯ್ಕೆ. ಕೆಲವೊಮ್ಮೆ ನಿಮ್ಮ ಸಂಗಾತಿ ನೀನು ಬೇಡವೇ ಬೇಡ ಅಂದಾಗ, ಅಂತವರನ್ನು ಬಿಟ್ಟು ಬಿಡಿ. ಹಿಂಸೆಯಿಂದ ಜೊತೆಯಲ್ಲಿ ಇರಿಸಿಕೊಳ್ಳಬೇಡಿ. ಬಿಟ್ಟು ಬಿಡಿ. ನಿಮಗೋಸ್ಕರ ಇನ್ಯಾರನ್ನೋ ದೇವರು ಬರೆದಿರುತ್ತಾನೆ’.
ಎಷ್ಟೋ ಕಡೆಯಲ್ಲಿ ಕೇಳಿದ್ದೇನೆ ನಾನು. ಮೊದಲನೇ ಮದುವೆಯಾಗಿ ಸಮಸ್ಯೆಯಾಗಿ ಅದರಿಂದ ಡಿವೋರ್ಸ್ ತೆಗೆದುಕೊಂಡು ಆಚೆ ಬಂದಾಗ ಎರಡನೇ ಸಲ ಜೀವನ ಕೊಟ್ಟಿರುತ್ತರಲ್ಲಾ ಅವರ ಜೊತೆ ಜೀವನ ತುಂಬಾ ಚೆನ್ನಾಗಿರುತ್ತದೆ. ನಾನು ತುಂಬಾ ಜನರನ್ನು ನೋಡಿದ್ದೇನೆ. ಎರಡನೇ ಮದುವೆ ಮಾಡಿಕೊಂಡಿರುವವರು ಜೀವನದಲ್ಲಿ ತುಂಬಾ ಚೆನ್ನಾಗಿರುವುದನ್ನು ನಾನು ನೋಡಿದ್ದೇನೆ. ಹೀಗಾಗಿ ತೀರಾ ಆಗದೇ ಇರುವ ಸಂದರ್ಭದಲ್ಲಿ ಆ ಸಂಬಂಧವನ್ನು ಬಿಟ್ಟುಬಿಡಿ’ ಎಂದು ನಟಿ ಸಪ್ನಾ ದೀಕ್ಷಿತ್ ಹೇಳಿದ್ದಾರೆ.