ಸೇಡಂ: ದಲಿತರ ಓಣಿಯಲ್ಲಿ ಗಬ್ಬು ನಾರುತ್ತಿರುವ ಚರಂಡಿಯ ಸ್ವಚ್ಛತಾ ಕ್ರಮಕ್ಕೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯೊಬ್ಬರು ನಿರಾಕರಿಸಿರುವ ಆರೋಪ ಕೇಳಿ ಬಂದಿದೆ.
ಸೇಡಂ ತಾಲೂಕಿನ ಮೋತಕಪಲ್ಲಿ ಗ್ರಾಮದ ದಲಿತರ ಓಣಿಯಲ್ಲಿನ ಚರಂಡಿ ಅನೇಕ ತಿಂಗಳನಿಂದ ಸ್ವಚ್ಛಗೊಳಿಸದೆ ಗಬ್ಬು ನಾರುತ್ತಿದೆ. ಚರಂಡಿ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದರೂ ಪಿಡಿಒ ಗುರುರಾಜ್ ಎಂಬವರು ನಿರಾಕರಿಸಿದ್ದಾರೆ ಎಂದು ಗ್ರಾಮದ ನಿವಾಸಿ ಅಶೋಕ್ ವೆಂಕಟಪ್ಪ ಪೆದ್ಧಿಂಟಿ ಆರೋಪಿಸಿರುವ ಕುರಿತು ಭಾರತ ವೈಭವ ನ್ಯೂಸ್ ನಲ್ಲಿ ವರದಿಯಾಗಿತ್ತು.
ಈ ಕುರಿತು ಅಶೋಕ್ ಅವರು ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದರು ವಿಷಯಕ್ಕೆ ಸಂಬಂಧಿಸಿದಂತೆ ಸಿಪಿಐ ಸಂಜೀವ್ ಕುಮಾರ್ ಎನ್ ಕೆ ಅವರು ಮೋತಕಪಲ್ಲಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವರದಿ ಪ್ರಕಾರ ಪಿಡಿಒ ಹಾಗೂ ಗ್ರಾಮಸ್ಥ ಅಶೋಕ್ ಮಾತನಾಡಿರುವ ಆಡಿಯೋ ವೈರಲ್ ಆಗಿದೆ. 6 ತಿಂಗಳು ಕಳೆದರೂ ಚರಂಡಿ ಸ್ವಚ್ಛಗೊಳಿಸಿಲ್ಲ. ತಾಲೂಕಿನ ಇಒ ಹೇಳಿದರೂ ಚರಂಡಿ ಸ್ವಚ್ಛತೆಗೆ ಕ್ರಮಕೈಗೊಂಡಿಲ್ಲ ಬೇರೆ ಓಣಿಗಳಲ್ಲಿ ಸ್ವಚ್ಛತಾ ಕಾರ್ಯವನ್ನು ಮಾಡಿಸುತ್ತೀರಿ. ನಮ್ಮ ಓಣಿಯಲ್ಲಿ ಯಾಕೆ ಸ್ವಚ್ಛತಾ ಕಾರ್ಯವನ್ನು ಮಾಡಲ್ಲ ಎಂದು ಗ್ರಾಮಸ್ಥ ಅಶೋಕ್ ಪ್ರಶ್ನಿಸಿದ್ದಾರೆ. ಅದಕ್ಕೆ ಪಿಡಿಒ, ದಲಿತರ ಓಣಿಯಲ್ಲಿ ಟ್ಯಾಕ್ಸ್ ಕಟ್ಟುವುದಿಲ್ಲ, ಅದಕ್ಕೆ ಸ್ವಚ್ಛತೆ ಮಾಡಿಲ್ಲ ನೀವು ಟ್ಯಾಕ್ಸ್ ಕಟ್ಟಿದ್ರೆ ಮಾತ್ರ ಮಾಡುತ್ತೇವೆ ಇಲ್ಲಾಂದ್ರೆ ಮಾಡಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಮುಧೋಳ ಠಾಣೆ ಪಿಐ ಸಂಜೀವ್ ಕುಮಾರ್, ದಲಿತರ ಓಣಿಯಲ್ಲಿ ಚರಂಡಿ ಸ್ವಚ್ಛಗೊಳಿಸುವ ಬಗ್ಗೆ ಸಮಸ್ಯೆ ಎದುರಾಗಿದೆ. ಇದನ್ನು ಬಗೆಹರಿಸಲು ತಾಲೂಕು ಕಾರ್ಯನಿರ್ವಾಹಣಾಧಿಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ.
ವರದಿ :ವೆಂಕಟಪ್ಪ ಕೆ ಸುಗ್ಗಾಲ್




