ಬೆಂಗಳೂರು: ರಾಜ್ಯ ಕಾಂಗ್ರೆಸ್ನಲ್ಲಿ ನಾಯಕತ್ವ ಬದಲಾವಣೆಯ ಗುಸುಗುಸು ಜೋರಾಗಿದೆ. ಈ ಮಧ್ಯೆ ಕಳೆದ ವಾರ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ದೆಹಲಿಗೆ ದೌಡಾಯಿಸಿ, ಲಾಬಿ ಮಾಡಿ ಬಂದಿದ್ದಾರೆ.
ಶತಾಯಗತಾಯ ಸಿಎಂ ಪಟ್ಟಕ್ಕೇರಲೇಬೇಕೆಂಬ ಹಠಕ್ಕೆ ಬಿದ್ದಿರುವ ಡಿಕೆಶಿ, ಕಳೆದ ಬಾರಿ ನೇರವಾಗಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರನ್ನೇ ಭೇಟಿಯಾಗಿ ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ.
ಇದೀಗ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ರಂಗ ಪ್ರವೇಶ ಮಾಡಿದ್ದು, ದಯಮಾಡಿ ಬೇಗ ಗೊಂದಲ ಪರಿಹರಿಸಿ ಎಂದು ಹೈಕಮಾಂಡ್ಗೆ ಮನವಿ ಮಾಡಿದ್ದಾರೆ.
ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ಗೊಂದಲವನ್ನು ಆದಷ್ಟು ಬೇಗ ಬಗೆಹರಿಸುವಂತೆ ಹೈಕಮಾಂಡ್ಗೆ ಹೇಳಿದ್ದೇವೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಡಿಕೆ ಶಿವಕುಮಾರ್ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವುದು ಸಾಮಾನ್ಯ. ನಾಯಕತ್ವ ಬದಲಾವಣೆ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಅದಷ್ಟು ಬೇಗ ಗೊಂದಲ ಬಗೆಹರಿಸುವಂತೆ ಹೈಕಮಾಂಡ್ ಗೆ ಹೇಳಿದ್ದೇವೆ. ಅವಕಾಶ ಸಿಕ್ಕರೆ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುತ್ತೇವೆ ಎಂದು ಸಚಿವರು ಹೇಳಿದ್ದಾರೆ.
ಕಮಿಷನ್ ಬಗ್ಗೆ ಸತೀಶ್ ಜಾರಕಿಹೊಳಿ ಹೇಳಿದ್ದೇನು..?: ಕಮಿಷನ್ ಎನ್ನುವುದು ಹಿಂದೆಯೂ ಇತ್ತು, ಈಗಲೂ ಇದೆ. ಮುಂದೆಯೂ ಇರುತ್ತೆ. ಹೀಗಾಗಿ, ಪರಿಹಾರ ಕಂಡುಕೊಳ್ಳಲು ದಾರಿ ಹುಡುಕಿಕೊಳ್ಳಬೇಕಾಗಿದೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದ್ದರು.
ನಿನ್ನೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು, ಗುತ್ತಿಗೆ ಕೆಲಸಕ್ಕೆ ಕಮಿಷನ್ ನೀಡುತ್ತಿರುವ ವ್ಯವಸ್ಥೆ ಇದ್ದಲ್ಲಿ ಮುಖ್ಯಮಂತ್ರಿ ಕ್ರಮ ಕೈಗೊಳ್ಳಲಿದ್ದಾರೆ. ದಾಖಲೆಗಳು ಇದ್ದರೆ ಲೋಕಾಯುಕ್ತಕ್ಕೆ ದೂರು ಸಹ ನೀಡಬಹುದು. ಆದರೆ, ಆರೋಪ ಮಾಡಿದರೆ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಿದ್ದರು.
ಲೋಕೋಪಯೋಗಿ ಇಲಾಖೆಯಲ್ಲಿರುವ ಬಜೆಟ್ಗೆ ಸರಿದೂಗಿಸುವ ಕೆಲಸ ಮಾಡುತ್ತಿದ್ದೇವೆ. ಇವರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅದನ್ನು ಮುಂದೆ ತೋರಿಸುತ್ತೇನೆ.
ನಾವು ಹೊಸ ಕಾಮಗಾರಿ ಪ್ರಕ್ರಿಯೆ ಆರಂಭಿಸಿಲ್ಲ ಎಂದ ಅವರು, ನಮ್ಮ ಇಲಾಖೆಯಲ್ಲಿ 12 ಸಾವಿರ ಕೋಟಿ ರೂ. ಬಾಕಿ ಇತ್ತು. ಈಗಾಗಲೇ 3 ಸಾವಿರ ಕೋಟಿ ಕಾಮಗಾರಿ ಹಣ ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದರು.
ಶಾಸಕರ ವಿದೇಶ ಪ್ರವಾಸ ನಿಯಂತ್ರಣ ಮಾಡಲು ಆಗುತ್ತಾ?; ನಮ್ಮ ಹೈಕಮಾಂಡ್ ಗಟ್ಟಿಯಾಗಿದೆ. ಯಾರಿಗೂ ಅಲ್ಲಾಡಿಸಲಾಗುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದರು.
ಇದೇ ವೇಳೆ ಬಾಲವೇ ನಾಯಿಯನ್ನು ಅಲ್ಲಾಡಿಸಿದರೆ ಹೇಗೆ ಎಂಬ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ್ದ ಅವರು, ಮಹದೇವಪ್ಪ ಹೇಳಿಕೆ ಬಗ್ಗೆ ಅವರನ್ನೇ ಕೇಳಬೇಕು.
ಆದರೆ, ಒಂದಂತೂ ಸ್ಪಷ್ಟ. ನಮ್ಮ ಹೈಕಮಾಂಡ್ ಗಟ್ಟಿ ಇದೆ. ಯಾರಿಗೂ ಅಲ್ಲಾಡಿಸಲು ಆಗಲ್ಲ. ಗೊಂದಲವನ್ನು ಹೈಕಮಾಂಡ್ ಸ್ಪಷ್ಟಪಡಿಸಬೇಕು ಎಂಬುದು ನಮ್ಮದೂ ಬೇಡಿಕೆ ಆಗಿದೆ ಎಂದು ಹೇಳಿದ್ದರು.
ಶಾಸಕರ ವಿದೇಶ ಪ್ರವಾಸದ ಬಗ್ಗೆ ಕೇಳಿದಾಗ, ಕೆಲ ಶಾಸಕರು ಪ್ರತಿ ವರ್ಷ ತಮ್ಮ ಸ್ವಂತ ಹಣದಲ್ಲಿ ಹೋಗುತ್ತಾರೆ. ಅವರನ್ನು ನಿಯಂತ್ರಣ ಮಾಡಲು ಆಗುತ್ತಾ? ಅನಗತ್ಯ ಗೊಂದಲ ಆಗುತ್ತದೆ ಅಂತ ಹೈಕಮಾಂಡ್ ಹೇಳಿರಬಹುದು.
ಆದರೆ ಕೆಲ ಹಿರಿಯ ಶಾಸಕರು ನಿಯಮಿತವಾಗಿ ಮೊದಲಿನಿಂದಲೂ ಹೋಗುತ್ತಿದ್ದಾರೆ. ಅದರಲ್ಲಿ ಹಲವರು ದುಬೈಗೆ ಹೋಗಿದ್ದರೆ, ಕೆಲವರು ಯೂರೋಪ್ಗೆ ಹೋಗಿದ್ದರು. ಇಬ್ಬರ ಟೀಂನಲ್ಲೂ ಇದ್ದಾರೆ ಎಂದಿದ್ದರು.




