ಹೊಸದಿಲ್ಲಿ: ರಾಷ್ಟ್ರಪತಿ ದೌಪದಿ ಮುರ್ಮು ಇಂದು 67ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಹುಟ್ಟಹಬ್ಬದಂದು ಡೆಹ್ರಾಡೂನ್ಗೆ ಭೇಟಿ ನೀಡಿದ ಅವರು ರಾಷ್ಟ್ರೀಯ ಅಂಗವಿಕಲರ ಸಬಲೀಕರಣ ಸಂಸ್ಥೆಯ ಕಾರ್ಯಕ್ರಮದಲ್ಲಿ ಭಾಗಿಯಾದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಅಂಗವಿಕಲರ ಸಬಲೀಕರಣ ಸಂಸ್ಥೆಯ ವಿದ್ಯಾರ್ಥಿಗಳು ಹಾಡಿನ ಮೂಲಕ ರಾಷ್ಟ್ರಪತಿ ದೌಪದಿ ಮುರ್ಮುಗೆ ಹುಟ್ಟುಹಬ್ಬದ ಶುಭಾಶಯ ಕೋರಿದಾಗ ಅವರು ಭಾವುಕರಾದರು.
ದೃಷ್ಟಿ ದೋಷವುಳ್ಳ ವಿದ್ಯಾರ್ಥಿಗಳು ಬಾರ್-ಬಾರ್ ದಿನ್ ಯೇ ಆಯೇ ಹಾಡನ್ನು ಹಾಡುತ್ತಾ, ದ್ರೌಪದಿ ಮುರ್ಮುಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು. ಅದನ್ನು ಕೇಳಿ ಭಾವುಕರಾದ ದ್ರೌಪದಿ ಮುರ್ಮು, ಭಾವುಕರಾಗಿ ಕಣ್ಣೀರಿಟ್ಟರು. ಈ ದೃಶ್ಯದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಕಾರ್ಯಕ್ರಮದಲ್ಲಿ ಉತ್ತರಾಖಂಡ ರಾಜ್ಯಪಾಲ ಗುರ್ಮೀತ್ ಸಿಂಗ್ ಮತ್ತು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಕೂಡ ಭಾಗಿಯಾಗಿದ್ದರು.
2022ರಲ್ಲಿ ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡ ದೌಪದಿ ಮುರ್ಮು ಅವರು ಬುಡಕಟ್ಟು ಸಮುದಾಯಕ್ಕೆ ಸೇರಿದ ಮೊದಲ ರಾಷ್ಟ್ರಪತಿ ಆಗಿದ್ದಾರೆ. ಇಂದು ಅವರು 67ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸೇರಿ ವಿವಿಧ ಕ್ಷೇತ್ರದ ಗಣ್ಯರು ಜನ್ಮದಿನದ ಶುಭಾಶಯ ತಿಳಿಸಿದ್ದಾ ರೆ.




