ಒಂಬತ್ತು ತಿಂಗಳ ನಂತರ ನಾಸಾ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್, ಬುಚ್ ವಿಲ್ಮೋರ್, ನಾಸಾದ ನಿಕ್ ಹೈ ಮತ್ತು ರಷ್ಯಾ ಗಗನಯಾತ್ರಿ ಅಲೆಕ್ಸಾಂಡರ್ ಗೋರ್ಬುನೋವ್ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ನಿನ್ನೆ ಬೆಳಗ್ಗೆ ಭೂಮಿಗೆ ಮರಳಿದ್ದು, ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ಕೆಲ ದಿನಗಳ ಹಿಂದೆ ಬರೆದಿದ್ದ ಪತ್ರದಲ್ಲಿ ಸುನೀತಾ ವಿಲಿಯಮ್ಸ್ ಅವರನ್ನು ಆಹ್ವಾನಿಸಿದ್ದಾರೆ.
ಸುನೀತಾ ವಿಲಿಯಮ್ಸ್ ಮತ್ತು ಕ್ರೂ-9 ತಂಡ ಸುರಕ್ಷಿತವಾಗಿ ಭೂಮಿಗೆ ಮರಳಿದ ನಂತರ ಪ್ರಧಾನಿ ಮೋದಿ ಎಕ್ಸ್ನಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. ಸುನೀತಾ ವಿಲಿಯಮ್ಸ್ ಅವರೊಂದಿಗಿನ ಹಳೆಯ ಫೋಟೋವನ್ನು ಎಕ್ಸ್ನಲ್ಲಿ ಹಂಚಿಕೊಂಡಿರುವ ಅವರು, “ವೆಲ್ಕಮ್ ಕ್ರೂ-9, ಅರ್ಥ್ ಮಿಸ್ ಯು” ಎಂದು ಕ್ಯಾಪ್ಶನ್ ನೀಡಿದ್ದಾರೆ.
“ಸುನೀತಾ ಅವರ ತಾಳ್ಮೆ, ಧೈರ್ಯ ಮಾನವ ಚೈತನ್ಯದ ಪರೀಕ್ಷೆಯಾಗಿತ್ತು. ಸುನೀತಾ ವಿಲಿಯಮ್ಸ್ ಮತ್ತು ಕ್ರೂ-9 ಗಗನಯಾತ್ರಿಗಳು ಮತ್ತೊಮ್ಮೆ ಪರಿಶ್ರಮ ಎಂದರೆ ಏನು ಎಂಬುದನ್ನು ನಮಗೆ ತೋರಿಸಿದ್ದಾರೆ. ಅವರ ಅಚಲ ದೃಢಸಂಕಲ್ಪ ಲಕ್ಷಾಂತರ ಜನರಿಗೆ ಸದಾ ಸ್ಫೂರ್ತಿ” ಎಂದು ಮೋದಿ ಕೊಂಡಾಡಿದ್ದಾರೆ.
ಬಾಹ್ಯಾಕಾಶ ಸಂಶೋಧನೆ ಎಂದರೆ ಮಾನವ ಸಾಮರ್ಥ್ಯದ ಮಿತಿಗಳನ್ನು ತಳ್ಳುವುದು, ಕನಸು ಕಾಣುವ ಧೈರ್ಯ ಮತ್ತು ಆ ಕನಸುಗಳನ್ನು ವಾಸ್ತವಕ್ಕೆ ತಿರುಗಿಸುವ ಧೈರ್ಯ ಹೊಂದಿರುವುದಾಗಿದೆ. ಸುನೀತಾ ವಿಲಿಯಮ್ಸ್ ತಮ್ಮ ವೃತ್ತಿಜೀವನದುದ್ದಕ್ಕೂ ಒಬ್ಬ ಐಕಾನ್ ಆಗಿ ಈ ಭಾವನೆಯನ್ನು ಪ್ರದರ್ಶಿಸಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
ಕ್ರೂ 9ರ ಸುರಕ್ಷಿತ ಮರಳುವಿಕೆಯನ್ನು ಖಚಿತಪಡಿಸಿಕೊಳ್ಳಲು ಅವಿಶ್ರಾಂತವಾಗಿ ಶ್ರಮಿಸಿದ ಪ್ರತಿಯೊಬ್ಬರ ಬಗ್ಗೆಯೂ ನಮಗೆ ತುಂಬಾ ಹೆಮ್ಮೆ ಇದೆ. ನಿಖರತೆ, ಉತ್ಸಾಹ ಮತ್ತು ತಂತ್ರಜ್ಞಾನವು ದೃಢತೆಯನ್ನು ಪೂರೈಸಿದಾಗ ಏನಾಗುತ್ತದೆ ಎಂಬುದನ್ನು ಅವರು ತೋರಿಸಿದ್ದಾರೆ ಎಂದು ಮೋದಿ ಹೇಳಿದ್ದಾರೆ.
ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರು ಸುನೀತಾ ವಿಲಿಯಮ್ಸ್ ಅವರಿಗೆ ಪತ್ರ ಬರೆದು ಭಾರತಕ್ಕೆ ಬರಲು ಆಹ್ವಾನಿಸಿದ್ದಾರೆ. ಸುನೀತಾ ವಿಲಿಯಮ್ಸ್ ಅವರ ಸುರಕ್ಷಿತ ಮರಳುವಿಕೆಗಾಗಿ ಇಡೀ ಜಗತ್ತು ಉಸಿರು ಬಿಗಿಹಿಡಿದು ಕಾಯುತ್ತಿರುವಾಗ ಮೋದಿ, ಭಾರತದ ಮಗಳ ಬಗ್ಗೆ ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಕೇಂದ್ರ ಸಚಿವ ಜೀತೇಂದ್ರ ಸಿಂಗ್ ಎಕ್ಸ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.