ಹಿಂದೂ ಧರ್ಮ ಒಡೆದು ಆಳುವ ವಿದ್ವಂಸಕ ಶಕ್ತಿಗಳಿಂದ ಭಾರತಾಂಬೆ ರಕ್ಷಿಸಲು ಸಂಘಟಿತರಾಗಿ
ತುರುವೇಕೆರೆ : ಹಿಂದೂ ಧರ್ಮವನ್ನು ಒಡೆದು ಆಳುವ ನೀತಿಯನ್ನು ಅನುಸರಿಸುವ ವಿಧ್ವಂಸಕ ಶಕ್ತಿಗಳಿಂದ ಭಾರತಾಂಬೆಯನ್ನು ರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬರ ಹಿಂದೂಗಳ ಮೇಲಿದೆ ಎಂದು ಸಾಮಾಜಿಕ ಕಾರ್ಯಕರ್ತ ನವೀನ್ ಸುಬ್ರಹ್ಮಣ್ಯ ತಿಳಿಸಿದರು.
ತುರುವೇಕೆರೆ ಪಟ್ಟಣದಲ್ಲಿ ನಡೆದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ದಿಕ್ಸೂಚಿ ಉಪನ್ಯಾಸ ನೀಡಿದ ಅವರು, ಭಾರತಾಂಬೆ ನಮ್ಮೆಲ್ಲರ ತಾಯಿ. ತಾಯಿಯನ್ನು ಪೂಜಿಸುವುದು ನಮ್ಮೆಲ್ಲರ ಹೊಣೆಯಾಗಿದೆ. ಅದನ್ನು ಪ್ರಶ್ನಿಸುವ ಹಾಗೂ ತಡೆಯುವ ಶಕ್ತಿ ಯಾರಿಗೂ ಇಲ್ಲ. ಹಿಂದೂ ದೇವಾಲಯಗಳನ್ನು ಸಂರಕ್ಷಿಸುವುದರ ಜೊತೆಗೆ ಸನಾತನ ಹಿಂದೂ ಧರ್ಮ ಮತ್ತು ಅದರ ತತ್ವಗಳನ್ನು ಎತ್ತಿ ಹಿಡಿಯುವುದು ಪ್ರತಿಯೊಬ್ಬರ ಹಿಂದೂವಿನ ಜವಾಬ್ದಾರಿಯಾಗಿದೆ ಎಂದರು.

ಭಾರತದ ಹಿಂದೂ ಪರಂಪರೆಯನ್ನು ಜಗತ್ತಿಗೆ ಸಾರಿದ ಛತ್ರಪತಿ ಶಿವಾಜಿ, ಛತ್ರಪತಿ ಸಾಂಬಾಜಿ, ಅಹಲ್ಯಾಬಾಯಿ ಹೋಳ್ಕರ್, ಸ್ವಾಮಿ ವಿವೇಕಾನಂದರು, ರಾಮಕೃಷ್ಣ ಪರಮಹಂಸರು ಸೇರಿದಂತೆ ಇನ್ನಿತರ ಮಹನೀಯರು ನಮಗೆ ಆದರ್ಶವಾಗಬೇಕಿದೆ. ಮಹನೀಯರ ತೋರಿದ ಹಾದಿಯಲ್ಲಿ ಭವ್ಯ ಹಿಂದೂ ಪರಂಪರೆಯನ್ನು ಗಟ್ಟಿಗೊಳಿಸುವ, ಧರ್ಮವನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಹಿಂದೂಗಳೆಲ್ಲರೂ ಕಾರ್ಯೋನ್ಮುಖರಾಗಬೇಕಿದೆ. ಧರ್ಮ ಎಂದರೆ ಕೇವಲ ದೇವರ ದರ್ಶನ, ಪೂಜೆ, ಪುನಸ್ಕಾರ, ಜಾತ್ರೆಗಳಲ್ಲ. ಧರ್ಮದಿಂದ ಆಂತರಿಕ ಜಾಗೃತಿ, ಎಲ್ಲರಿಗೂ ಸಮಾನ ಅವಕಾಶ ಮತ್ತು ಗೌರವ ನೀಡುವುದೇ ಧರ್ಮವಾಗಿದೆ. ಹಿಂದೂ ಧರ್ಮದಲ್ಲಿ ಎಲ್ಲರನ್ನೂ ಗೌರವಿಸುವ, ಸತ್ಕರಿಸುವ ಗುಣಗಳನ್ನು ಸಂಪನ್ನವಾಗಿದೆ. ವಂದೇ ಮಾತರಂ, ಭಾರತ್ ಮಾತಾಕೀ ಜೈ ಎಂಬ ಘೋಷಣೆಗಳು ಪ್ರತಿಯೊಬ್ಬ ಭಾರತೀಯನ ಮನೆಯಲ್ಲಿ ಮೊಳಗುವಂತಾಗಬೇಕಿದೆ. ಹಿಂದೂ ಸಂಸ್ಕೃತಿ, ಸಂಸ್ಕಾರ ಇಂದು ವಿಶ್ವಮಟ್ಟದಲ್ಲಿ ಗೌರವಿಸಲ್ಪಡುತ್ತಿದೆ. ಆದರೆ ನಮ್ಮಲ್ಲಿ ಪಾಶ್ಚಾತ್ಯ ಸಂಸ್ಕೃತಿಯ ಅಂಧಾನನುಕರನೆ ಹೆಚ್ಚಾಗುತ್ತಿದೆ, ಇದು ಹಿಂದೂ ಪರಂಪರೆಯ ಉನ್ನತಿಯ ದೃಷ್ಟಿಯಿಂದ ಅಪಾಯಕಾರಿಯಾದುದು. ಕುಟುಂಬದಲ್ಲಿ ನಮ್ಮ ಪುರಾತನ ಸಂಸ್ಕೃತಿ, ಸಂಪ್ರದಾಯ, ಆಚಾರ, ವಿಚಾರ, ಸನಾತನ ಧರ್ಮದ ಬಗ್ಗೆ ಮುಂದಿನ ಪೀಳೀಗೆಗೆ ತಿಳಿಸಿಕೊಡುವ ಅಗತ್ಯವಿದೆ ಎಂದರು.

ಹಿಂದೂ ಸಮಾಜೋತ್ಸವದ ದಿವ್ಯ ಸಾನಿದ್ಯವನ್ನು ಗೋಡೆಕೆರೆಯ ಶ್ರೀ ಮೃತ್ಯುಂಜಯ ದೇಶೀಕೇಂದ್ರ ಮಹಾಸ್ವಾಮೀಜಿ, ಮಾದಿಹಳ್ಳಿ ರಾಮಕೃಷ್ಣಮಠದ ಶ್ರೀ ತದ್ಯುಕ್ತಾನಂದ ಮಹಾರಾಜ್, ಕಲ್ಪತರು ಆಶ್ರಮದ ಶ್ರೀ ರಾಜಾ ಯೋಗಾನಂದ ಸ್ವಾಮೀಜಿ ವಹಿಸಿದ್ದರು.
ಹಿಂದೂ ಸಮಾಜೋತ್ಸವದ ಅಂಗವಾಗಿ ಗ್ರಾಮದೇವತೆ ಶ್ರೀ ಉಡುಸಲಮ್ಮ ದೇವಿಯೊಂದಿಗೆ ಪೂರ್ಣಕುಂಭ ಹೊತ್ತಿರುವ ಮಹಿಳೆಯರು, ವೀರಗಾಸೆ, ಕೋಲಾಟ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಸಹಸ್ರಾರು ಹಿಂದೂ ಬಾಂದವರು ಪಟ್ಟಣದ ಶ್ರೀ ಉಡುಸಲಮ್ಮ ದೇವಿ ದೇವಸ್ಥಾನದಿಂದ ಗಣಪತಿ ಆಸ್ಥಾನ ಮಂಟಪದವರೆಗೆ ಶೋಭಾಯಾತ್ರೆ ನಡೆಸಲಾಯಿತು. ದಾರಿಯುದ್ದಕ್ಕೂ ಹಿಂದೂ ಧರ್ಮಕ್ಕೆ ಜಯವಾಗಲಿ, ಭಾರತ್ ಮಾತಾಕೀ ಜೈ ಎಂಬ ಘೋಷಣೆಗಳು ಮೊಳಗಿದವು. ಪುಟಾಣಿ ಮಕ್ಕಳು ಮಹನೀಯರ ವೇಷಭೂಷಣ ತೊಟ್ಟು ಸಂಭ್ರಮಿಸಿದರು. ಪಟ್ಟಣದ ತುಂಬೆಲ್ಲಾ ಹಿಂದುತ್ವದ ಪ್ರತೀಕವಾದ ಕೇಸರಿ ಧ್ವಜ ರಾರಾಜಿಸುತ್ತಿದ್ದವು.

ಶೋಭಾಯಾತ್ರೆಯಲ್ಲಿ ಮಾಜಿ ಶಾಸಕರಾದ ಮಸಾಲಾ ಜಯರಾಮ್, ಎಂ.ಡಿ.ಲಕ್ಷ್ಮೀನಾರಾಯಣ್, ರಾಜ್ಯ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್, ತುಮುಲ್ ನಿರ್ದೇಶಕ ಮಹಲಿಂಗಯ್ಯ, ಎಂ.ಡಿ.ಮೂರ್ತಿ, ಚೌದ್ರಿ ನಾಗೇಶ್, ಗೀತಾಸುರೇಶ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಹಿಂದೂ ಬಾಂದವರು ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ವರದಿ: ಗಿರೀಶ್ ಕೆ ಭಟ್




